ಕುಲಾಂತರಿ ಆಹಾರದ ಎದುರಿನ ಹೋರಾಟಕ್ಕೆ ಬೆಂಬಲ ನೀಡೋಣ, ನಮ್ಮ ಪಾರಂಪರಿಕ ಕೃಷಿ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳೋಣ ಎಂದು ಡಾ. ಮಂಜುನಾಥ್ ಹೇಳಿದರು.
ಅವರು ಮಂಡ್ಯದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಭಾರತವು ಪಾರಂಪರಿಕ ಕೃಷಿ ಜ್ಞಾನ, ಸಂಸ್ಕೃತಿ, ಮತ್ತು ಪರಿಸರ ಹಿರಿಮೆಯುಳ್ಳ ದೇಶ. ನಮ್ಮ ಈ ವಿಶಿಷ್ಟ ಪರಂಪರೆಗೆ, ಬಹುರಾಷ್ಟ್ರೀಯ ಕಂಪನಿಗಳು ‘ಕುಲಾಂತರಿ ಆಹಾರ’ಗಳನ್ನು ತಂದು, ನಮ್ಮ ಕೃಷಿ, ಸಮಾಜ, ಮತ್ತು ಪರಿಸರಕ್ಕೆ ಮಾರಕವಾಗುವ ಕೆಲಸ ನಡೆಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮ ಜೈವಿಕ ವ್ಯವಸ್ಥೆಯಲ್ಲಿಯ ಉಲ್ಲಂಘನೆ ಜೊತೆಗೆ, ಇದು ನಮ್ಮ ಒಕ್ಕೂಟದ ರೈತರ, ಸಮಾಜದ, ಹಾಗೂ ಪಂಚಾಯಿತಿಗಳ ಹಕ್ಕುಗಳ ಉಲ್ಲಂಘನೆ ಕೂಡ ಆಗಿದೆ. ಕುಲಾಂತರಿ ಆಹಾರವು ನಮ್ಮ ಸ್ವದೇಶಿ ಕೃಷಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತದಲ್ಲಿ ವಸಾಹತು ಸ್ಥಾಪನೆ ಮಾಡಲು ಅವಕಾಶ ಕಲ್ಪಿಸುತ್ತಿದೆ. ಈ ಬೆಳವಣಿಗೆ, ಈಸ್ಟ್ ಇಂಡಿಯಾ ಕಂಪನಿಯ ಭಾರತಕ್ಕೆ ಬಂದು ನಮ್ಮ ದೇಶವನ್ನು ಶೋಷಿಸಿದ ಅತಿದೊಡ್ಡ ಘಟನೆಗಳ ತಾಜಾ ಪುನಾರಾವರ್ತಯಾಗಲಿದೆ ಎಂದರು.

ಮಳವಳ್ಳಿ ಮಹೇಶ್ ಕುಮಾರ್ ಮಾತನಾಡಿ, ಒಕ್ಕೂಟ ಸರ್ಕಾರದ ಈ ಕೃತ್ಯವನ್ನು ತಡೆಯುವ ಅಗತ್ಯವಿದೆ. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕುಲಾಂತರಿ ತಳಿ ಬೀಜಗಳು, ಆಹಾರೋತ್ಪಾದನೆಗಳು, ಕಳೆ ನಾಶಕಗಳು, ಮತ್ತು ವಿಷ ಮಿಶ್ರಿತ ಉತ್ಪನ್ನಗಳ ಮೂಲಕ ನಮ್ಮ ಗ್ರಾಮಾಂತರ ಪ್ರದೇಶಗಳನ್ನು, ಸಾಂಪ್ರದಾಯಿಕ ಕೃಷಿ ಪದ್ಧತಿ ಹಾಗು ಆಹಾರ ರೂಢಿಯನ್ನು ಹಾಳುಗೆಡವಲು ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಕೆರೆ ಶಂಕರಯ್ಯ ಮಾತನಾಡಿ, ನಾವು ಭಾರತದ ಎಲ್ಲಾ ಜನರನ್ನು ಆಹ್ವಾನಿಸುತ್ತೇವೆ. ನಾವೆಲ್ಲರೂ ಒಟ್ಟುಗೂಡಿ ಕುಲಾಂತರಿ ಆಹಾರಗಳ ಎದುರು ಹೋರಾಟ ಮಾಡೋಣ. ಕೃಷಿ ಕ್ಷೇತ್ರದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶವನ್ನು ಸಂಪೂರ್ಣವಾಗಿ ತಡೆಗಟ್ಟೋಣ. ಈ ಹೋರಾಟವನ್ನು ಬಲಪಡಿಸಲು, 2024 ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2 ರವರೆಗೆ ತುಮಕೂರು ಜಿಲ್ಲೆಯ ದೊಡ್ಡಹೊಸೂರು ಗ್ರಾಮದಲ್ಲಿ ಗಾಂಧೀಜಿ ಸಹಜ ಬೇಸಾಯ ಆಶ್ರಮದಲ್ಲಿ ‘ದೊಡ್ಡಹೊಸೂರು ಸತ್ಯಾಗ್ರಹ’ ನಡೆಯಲಿದೆ. ಎಲ್ಲರೂ ಬನ್ನಿ ಎಂದು ಆಹ್ವಾನಿಸಿದರು.
ನಮ್ಮ ದನ, ಎಮ್ಮೆ, ಆಡು, ಕುರಿ, ಕೋಳಿ, ಮತ್ತು ನಮ್ಮ ಅಕ್ಕಿ, ಗೋಧಿ, ಕಾಳುಗಳ ಅಸ್ಥಿತ್ವ ಕಳೆದುಕೊಳ್ಳುವ ಹಂತಕ್ಕೆ ತಳ್ಳುತ್ತಿದ್ದಾರೆ. ಈ ಮಾರಣಾಂತಿಕ ಪ್ರಕ್ರಿಯೆಯು ನಮ್ಮ ಮುಂದಿನ ಪೀಳಿಗೆಯ ಆರೋಗ್ಯ ಮತ್ತು ಬದುಕು ಹಳ್ಳ ಹಿಡಿಸಲಿವೆ. ಈ ಹೋರಾಟದಲ್ಲಿ ಭಾಗವಹಿಸಲು ರೈತ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು, ಪ್ರಗತಿಪರ ಸಂಘಟನೆಗಳು, ಹಾಗೂ ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಸಂಜಯ್ ಕುರ್ಡೀಕರ್ ಕೊಲೆ ಪ್ರಕರಣ: ತನಿಖೆಯನ್ನು ಖುದ್ದು ಪರಿಶೀಲಿಸಲು ಎಸ್ಪಿಗೆ ಸೂಚಿಸಿದ ಸಿಎಂ
ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆಂಪೂಗೌಡ ಮಾತನಾಡಿ, ಕುಲಾಂತರಿ ಕಾಯ್ದೆಯನ್ನು ತಿರಸ್ಕರಿಸಿ, ಪಂಚಾಯತ್ ಮೂಲಕ ಸಹಜ ಬೇಸಾಯವನ್ನು ಸ್ಥಾಪಿಸಬೇಕು. ಕರ್ನಾಟಕ ಸರ್ಕಾರವು ರಾಜ್ಯವನ್ನು ‘ಕುಲಾಂತರಿ ಮುಕ್ತ’ ಎಂದು ಘೋಷಿಸಬೇಕು. ಬೆಯರ್ ಐಸಿಎಆರ್ ಒಪ್ಪಂದವನ್ನು ರದ್ದುಗೊಳಿಸಬೇಕು. ಒಕ್ಕೂಟ ಸರ್ಕಾರವು ಕುಲಾಂತರಿ ಸಂಶೋಧನೆಗೆ ಹಣಕಾಸು ನೀಡುವುದನ್ನು ನಿಲ್ಲಿಸಬೇಕು. ದೇಶದಲ್ಲಿ ಕೀಟನಾಶಕಗಳ ಮಾರಾಟವನ್ನು ನಿಷೇಧಿಸಬೇಕು. ಸಹಜ ಬೇಸಾಯಕ್ಕೆ ಕರ್ನಾಟಕ ಸರ್ಕಾರ ಶೇಕಡಾ 75ರಷ್ಟು ಬಂಡವಾಳವನ್ನು ನೀಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಬಿ.ಎನ್ ಮಂಚೇಗೌಡ ಬೊಪ್ಪಸಮುದ್ರ, ಮುದ್ದೇಗೌಡ ರಾಜ್ಯ ರೈತ ಸಂಘ, ಚಂದ್ರಣ್ಣ ರಾಜ್ಯ ರೈತ ಸಂಘ, ನಾರಾಯಣ ಜಯಕರ್ನಾಟಕ ಸಂಘಟನೆ ಹಾಗೂ ಇನ್ನಿತರ ಸದಸ್ಯರು ಹಾಜರಿದ್ದರು.
