ಮಧ್ಯಮಭಾಗದ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದ ಮೆಟ್ರೋ ಆಸ್ಪತ್ರೆಯ ರೋಗಿ ಒಬ್ಬರ ಹೃದಯಕ್ಕೆ “ಆರಬೈಟಲ್ ಅಥೆರೆಕ್ಟಮಿ” ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಮೆಟ್ರೋ ಆಸ್ಪತ್ರೆಯ ಅಧ್ಯಕ್ಷ ಡಾ ಲಕ್ಷ್ಮೀನಾರಾಯಣ ಆಚಾರ್ ತಿಳಿಸಿದರು.
ಶಿವಮೊಗ್ಗ ನಗರದ ಮೆಟ್ರೋ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನಮ್ಮ ಆಸ್ಪತ್ರೆಯಲ್ಲಿ ಆರಬೈಟಲ್ ಅಥೆರೆಕ್ಟಮಿ ಚಿಕಿತ್ಸೆಗೆ ಒಳಗಾದ ನಗರದ 76 ವರ್ಷದ ಚಂದ್ರಪ್ಪ ಶೆಟ್ಟಿಯವರಿಗೆ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ. ಶಿವಶಂಕರ್ ಟಿ ಹೆಚ್ ನೇತೃತ್ವದ ತಂಡ ನಡೆಸಿದ ಚಿಕಿತ್ಸೆ ಯಶಸ್ವಿಯಾಗಿದೆ” ಎಂದು ತಿಳಿಸಿದರು.
ವೈದ್ಯ ಡಾ ಶಿವಶಂಕರ್ ಟಿ ಹೆಚ್ ಮಾತನಾಡಿ, “ಹೃದಯದ ರಕ್ತನಾಳದಲ್ಲಿ ತುಂಬಾ ಕ್ಯಾಲ್ಸಿಯಂ ಇದ್ದರೆ ಈ ಹಿಂದೆ ಓಪನ್ ಹಾರ್ಟ್ ಸರ್ಜರಿ ಮಾಡುತ್ತಿದ್ದೆವು. ಈಗ ರಕ್ತನಾಳದ ಕ್ಯಾಲ್ಸಿಯಂ ಪುಡಿ ಪುಡಿ ಮಾಡಿ ಸ್ಟಂಟ್ ಹಾಕುವ ವಿಧಾನವಾಗಿದೆ. ಈ ವಿಧಾನದಿಂದ ರಕ್ತನಾಳಕ್ಕೆ ಅಪಾಯ ಕಡಿಮೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು ದಸರಾದಲ್ಲೂ ಕೋಮು ದ್ವೇಷ; ದೀಪಾಲಂಕಾರಕ್ಕೂ ಬಿಜೆಪಿ ಅಪಸ್ವರ
“ಆರಬೈಟಲ್ ಅಥೆರೆಕ್ಟಮಿ ಡೈಮಂಡ್ ಬ್ಲಾಕ್ 360 ಸಾಧನವನ್ನು ಉಪಯೋಗಿಸಿ ರಕ್ತನಾಳದಲ್ಲಿ ಕ್ಯಾಲ್ಸಿಯಂ ಫ್ಯಾಟ್ ತೆಗೆದು ರಕ್ತನಾಳವನ್ನು ಶುದ್ದೀಕರಿಸಲಾಯಿತು. ನಂತರ ಸ್ಟಂಟ್ ಅಳವಡಿಸಲಾಗಿದೆ. ಇದರಿಂದ ರೋಗಿಗೆ ಯಾವುದೇ ತೊಂದರೆಯಾಗುವುದಿಲ್ಲ. ಶಸ್ತ್ರಚಿಕಿತ್ಸೆಯಾಗಿ ಮೂರು ದಿನಗಳ ಬಳಿಕ ರೋಗಿಯನ್ನು ಮನೆಗೆ ಕಳುಹಿಸಿಕೊಡಲಾಯಿತು” ಎಂದು ತಿಳಿಸಿದರು.
ನಿರ್ದೇಶಕರುಗಳಾದ ಡಾ ಪಿ. ಲಕ್ಷ್ಮೀನಾರಾಯಣ ಆಚಾರ್ (ಅಧ್ಯಕ್ಷರು ), ಸಿಇಒ ಡಾ ತೇಜಸ್ವಿ ಟಿ. ಎಸ್, ಮೆಡಿಕಲ್ ಡೈರೆಕ್ಟರ್ ಡಾ. ಪೃಥ್ವಿ ಬಿ ಸಿ ಇದ್ದರು.