- ಮಹಿಳೆಯರು ತಪ್ಪದೆ ಮತದಾನ ಮಾಡುವ ಸಲುವಾಗಿ ಪಿಂಕ್ ಬೂತ್ಗಳ ವ್ಯವಸ್ಥೆ
- ಮುಂಜಾಗ್ರತಾ ಕ್ರಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂಬುಲೆನ್ಸ್ಗಳ ವ್ಯವಸ್ಥೆ
ಬೆಂಗಳೂರಿನಲ್ಲಿರುವ ಎಲ್ಲ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಬಂದು ನಮ್ಮ ಸಂವಿಧಾನ ನೀಡಿರುವಂತಹ ಮತದಾನದ ಅಧಿಕಾರವನ್ನು ಚಲಾಯಿಸುವುದರ ಜೊತೆಗೆ ಎಲ್ಲರಿಗೂ ಮತದಾನ ಮಾಡಲು ಪ್ರೇರೇಪಿಸೋಣ ಎಂದು ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ರವರು ತಿಳಿಸಿದರು.
ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಮಾಡಲು ಹಾಗೂ ಮಹಿಳಾ ಮತದಾರರಿಗೆ ಅರಿವು ಮೂಡಿಸಲು ಪುರಭವನ(ಟೌನ್ಹಾಲ್)ದಲ್ಲಿ ಹಮ್ಮಿಕೊಂಡಿದ್ದ ಪಿಂಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, “ನಗರದಲ್ಲಿ ಎಲ್ಲ ಮಹಿಳೆಯರು ಮತಗಟ್ಟೆಗಳಿಗೆ ಬಂದು ತಪ್ಪದೆ ಮತದಾನ ಮಾಡುವ ಸಲುವಾಗಿ ಪಿಂಕ್ ಬೂತ್ಗಳ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ತಪ್ಪದೆ ಮತ ಚಲಾಯಿಸಬೇಕು” ಎಂದು ಹೇಳಿದರು.
ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ರವರು ಮಾತನಾಡಿ, “ನಗರದಲ್ಲಿ ಈಗಾಗಲೇ ಎಲ್ಲರಿಗೂ ಮತದಾರರ ಗುರುತಿನ ಚೀಟಿ ವಿತರಣೆ ಮಾಡಲಾಗಿದೆ. ಅದರಲ್ಲಿ ಎಲ್ಲ ಮಾಹಿತಿಯೂ ಲಭ್ಯವಿದೆ. ಇದರಿಂದ ಸುಲಭವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಬಹುದಾಗಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಿ” ಎಂದು ಮನವಿ ಮಾಡಿದರು.
“ಮತದಾನದ ದಿನ ವೇತನ ಸಹಿತ ರಜೆಯಿರಲಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಿ. ಮಹಿಳೆಯರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ 5 ಪಿಂಕ್ ಬೂತ್ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಪಿಂಕ್ ಬೂತ್ಗಳಲ್ಲಿ ಮಹಿಳಾ ಅಧಿಕಾರಿ/ಸಿಬ್ಬಂದಿಗಳೇ ಕಾರ್ಯನಿರ್ವಹಿಸಲಿದ್ದಾರೆ. ಜೊತೆಗೆ ಪಿಂಕ್ ಬಣ್ಣದಲ್ಲಿ ನಾನಾ ಚಿತ್ರಗಳನ್ನು ರಚಿಸುವುದು, ಮತಚಲಾಯಿಸಲು ಬರುವವರಿಗೆ ಸ್ವಾಗತ ಕೋರುವುದು, ಸ್ವಾಗತ ಕಮಾನು, ಪಿಂಕ್ ಬಲೂನ್ಗಳ ಅಲಂಕಾರ ಸೇರಿದಂತೆ ಮಹಿಳೆಯರನ್ನು ಆಕರ್ಷಿಸಿಸುವ ರೀತಿ ಮತಗಟ್ಟೆಗಳನ್ನು ಸಿದ್ದಪಡಿಸಲಾಗುವುದು” ಎಂದು ಹೇಳಿದರು.
“ನಗರದಲ್ಲಿ ಪಿಂಕ್ ಮತಗಟ್ಟೆಗಳು ಮಾತ್ರವಲ್ಲದೆ ನಾನಾ ಥೀಮ್ ಬೇಸ್ಡ್ ಮತಗಟ್ಟೆಗಳನ್ನು ಮಾಡಲಾಗುತ್ತಿದ್ದು, ಅದರಂತೆ ಅಂಗವಿಕಲರ ಮತಗಟ್ಟೆ, ತೃತೀಯ ಲಿಂಗಿ ಮತಗಟ್ಟೆ, ತಂತ್ರಜ್ಞಾನ ಮತಗಟ್ಟೆ, ಪರಿಸರ(ಹಸಿರು ಬಣ್ಣದ) ಮತಗಟ್ಟೆ, ಸೈನಿಕ ಮತಗಟ್ಟೆ, ಕ್ರೀಡಾ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಸೈನಿಕರ ವಿಶೇಷ ಮತಗಟ್ಟೆಗಳಿರಲಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ನಮ್ಮ ಕ್ಲಿನಿಕ್ | ಬಡವರ ಕಲ್ಯಾಣಕ್ಕೋ ಅಥವಾ ಚುನಾವಣೆಗೋ? ಬಿಜೆಪಿಯೇ ಉತ್ತರಿಸಬೇಕಿದೆ
“ಮತದಾನದ ದಿನ ಮುಂಜಾಗ್ರತಾ ಕ್ರಮವಾಗಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂಬುಲೆನ್ಸ್ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಯಾವುದಾದರು ಮತಗಟ್ಟೆಗಳ ಬಳಿ ತುರ್ತು ಸಂದರ್ಭ ಬಂದಲ್ಲಿ, ಆಂಬುಲೆನ್ಸ್ ಮೂಲಕ ವೈದ್ಯರ ಸೇವೆ ಒದಗಿಸಲಾಗುವುದು” ಎಂದು ಹೇಳಿದರು.
ಪಿಂಕಥಾನ್ ಕಾರ್ಯಕ್ರಮದಲ್ಲಿ ವಿಶೇಷ ಚೇತನರು, ವೈದ್ಯರು, ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು, ಸ್ವಸಹಾಯ ಸಂಘದ ಗುಂಪುಗಳು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಬೀದಿ ಬದಿ ವ್ಯಾಪಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಎನ್.ಎಸ್.ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.