ಪಾಕಿಸ್ತಾನ ಮತ್ತು ಕೆನಡಾ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ದರೋಡೆಕೋರರು, ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕ ಗುಂಪುಗಳ ನಡುವಿನ ನಂಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಹರಿಯಾಣ, ಪಂಜಾಬ್, ರಾಜಸ್ಥಾನ, ಯುಪಿ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ರಾಜ್ಯಗಳ 122ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶೋಧ ಕಾರ್ಯ ತೀವ್ರಗೊಳಿಸಿದೆ.
ಇಲ್ಲಿಯವರೆಗೆ ಲಭ್ಯವಿರುವ ವಿವರಗಳ ಪ್ರಕಾರ, ಸುಮಾರು ಹನ್ನೆರಡು ಅಧಿಕಾರಿಗಳನ್ನು ಒಳಗೊಂಡ ಎನ್ಐಎ ಅಧಿಕಾರಿಗಳ ತಂಡವು ಈ ಎಲ್ಲಾ ಸ್ಥಳಗಳಿಗೆ ಮುಂಜಾನೆ 4 ಗಂಟೆ ಸುಮಾರಿಗೆ ತೆರಳಿ ಶೋಧ ನಡೆಸುತ್ತಿದೆ.
ಹರಿಯಾಣದ ಹಲವೆಡೆ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಲಾಗಿದೆ. ಪಂಜಾಬ್ ಗಡಿ ಜಿಲ್ಲೆಯ ಮೂರು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ದಾಖಲೆಗಳನ್ನು ಶೋಧಿಸಲಾಗುತ್ತಿದೆ.
ಇದಲ್ಲದೆ ಮುಡ್ಕಿ, ತಲವಂಡಿ ಮತ್ತು ಫಿರೋಜ್ಪುರದಲ್ಲಿ ಮೂವರ ಮನೆಗಳ ಮೇಲೆ ಎನ್ಐಎ ತಂಡ ತೆರಳಿದೆ ಎಂದು ತಿಳಿದುಬಂದಿದೆ. ಇದಲ್ಲದೇ, ಬಟಿಂಡಾದಲ್ಲಿಯೂ ಪರಿಶೀಲನೆ ನಡೆಸಿದ್ದು, ಮನೆಗಳ ಒಳಗೆ ಮತ್ತು ಹೊರ ಹೋಗಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಅಪರಾಧ ಪ್ರಕರಣ ಹೊಂದಿರುವವರ ಮನೆಗಳ ಎನ್ಐಎ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? 90% ಅನಾಮಧೇಯ ಚುನಾವಣಾ ಬಾಂಡ್ ಆದಾಯ ಹೊಂದಿರುವ ಪ್ರಾದೇಶಿಕ ಪಕ್ಷಗಳು
ಕಳೆದ ಎರಡು ದಿನಗಳ ಹಿಂದಷ್ಟೇ (ಮೇ. 15) ಭಯೋತ್ಪಾದಕರಿಗೆ ಹಣಕಾಸು ಸಹಾಯ ಮಾಡಿದ ಪ್ರಕರಣಗಳ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು ದಕ್ಷಿಣ ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್ನ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಪಾಕಿಸ್ತಾನಿ ಕಮಾಂಡರ್ಗಳ ಆದೇಶದ ಮೇರೆಗೆ ವಿವಿಧ ನಕಲಿ ಹೆಸರುಗಳ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ಒದಗಿಸಿದ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಪ್ರಕರಣದ ತನಿಖೆ ಇದಾಗಿತ್ತು.
ಕಳೆದ ಫೆಬ್ರವರಿಯಲ್ಲಿ, ಹರಿಯಾಣ, ಪಂಜಾಬ್ ಮತ್ತು ಚಂಡೀಗಢದಲ್ಲಿ ದರೋಡೆಕೋರರೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಜನರ ಮನೆಗಳ ಮೇಲೆ ಎನ್ಐಎ ದಾಳಿ ನಡೆಸಿತ್ತು. ಸಂಸ್ಥೆಯು ಈಗಾಗಲೇ ಮೂರು ಪ್ರಕರಣಗಳ ಪೈಕಿ ಎರಡು ಆರೋಪಪಟ್ಟಿ ಸಲ್ಲಿಸಿದೆ.
“ಉತ್ತರ ಭಾರತದಲ್ಲಿ ಸಕ್ರಿಯವಾಗಿರುವ ಹಲವಾರು ಕ್ರಿಮಿನಲ್ ಗ್ಯಾಂಗ್ಗಳು ಈಗ ದುಬೈನಿಂದ ಕಾರ್ಯನಿರ್ವಹಿಸುತ್ತಿವೆ ಮತ್ತು 1990 ರ ದಶಕದಲ್ಲಿ ಭೂಗತ ಜಗತ್ತಿನ ರೀತಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಖಲಿಸ್ತಾನ್ ಪರ ಸಂಘಟನೆಗಳು ತಮ್ಮ ಜಾಲಗಳನ್ನು ಬಳಸುತ್ತಿವೆ. ವಿದೇಶಗಳಲ್ಲಿ ನೆಲೆಸಿರುವ ಅರ್ಶ್ ದಲಾ ಮತ್ತು ಗೌರವ್ ಪಟಿಯಾಲ್ರಂತಹ ಕುಖ್ಯಾತ ಅಪರಾಧಿಗಳು, ಉದ್ದೇಶಿತ ಹತ್ಯೆಗಳು, ಸುಲಿಗೆ ಮತ್ತು ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಭಾರತೀಯ ಜೈಲುಗಳು ಮತ್ತು ಇತರ ದೇಶಗಳಲ್ಲಿ ಇರುವ ಖಲಿಸ್ತಾನ್ ಪರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ” ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.