ಪ್ರಪಂಚದಲ್ಲಿ ಬೇರೆ ಬೇರೆ ಆದಾಯದ ಮೂಲಗಳಿಂದ ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿರಬಹುದು, ಆದರೆ ಮಂಡ್ಯ, ನಾಗಮಂಗಲ ಹಾಗೂ ಪಾಂಡವಪುರ ಭಾಗದಲ್ಲಿ ನಾಟಕಗಳ ಪ್ರದರ್ಶನ ಮಾಡಿ, ಆದರಿಂದ ಬಂದ ಆದಾಯದಿಂದ, ನಿತ್ಯ ಸಚಿವ ಕೆ.ವಿ.ಶಂಕರಗೌಡರ ಪರಿಶ್ರಮದಿಂದ ಕಟ್ಟಿದ ಶಿಕ್ಷಣ ಸಂಸ್ಥೆ ಎಂದರೆ ಮಂಡ್ಯದ ಪಿಇಎಸ್ ಶಿಕ್ಷಣ ಸಂಸ್ಥೆಯಾಗಿದೆ ಎಂದು ನ್ಯಾಯವಾದಿ ಜೀರಹಳ್ಳಿ ರಮೇಶ್ ಗೌಡ ತಿಳಿಸಿದರು.
ಚಿತ್ರಕೂಟ ಬಳಗದಿಂದ ಮಂಡ್ಯ ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಶಾಲೆಯಲ್ಲಿ ನಡೆದ ಮಿಂಚಿನ ಓಟಗಾರ ಶಂಕರ್ನಾಗ್ ಜನ್ಮದಿನ ಮತ್ತು ನಿತ್ಯಸಚಿವ ಕೆವಿ ಶಂಕರಗೌಡರ ನೆನಪಿನಲ್ಲಿ ಸಂಗೀತ, ಶ್ರಮದಾನ, ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಬಳಿಯುವ ‘ಶಂಕರ ನಿರಂತರ’ ಕಾರ್ಯಕ್ರಮದಲ್ಲಿ ‘ಕೆ.ವಿ. ಶಂಕರಗೌಡರು ಮತ್ತು ಆಧುನಿಕ ಮಂಡ್ಯ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಧೀರಭಗತ್ರಾಯ್ ಚಿತ್ರದ ಉದಯೋನುಖ ನಟ ರಾಜೇಶ್ ದಳವಾಯಿ ಅವರನ್ನು ಚಿತ್ರಕೂಟ ಬಳಗದ ವತಿಯಿಂದ ಸನ್ಮಾನಿಸಲಾಯಿತು.
1960ರ ದಶಕದಲ್ಲಿ ಮೈಸೂರು ಭಾಗದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳೇ ಇರಲಿಲ್ಲ, ಅಂತಹ ಸಂದರ್ಭದಲ್ಲಿ ಮಂಡ್ಯದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಕೆ.ವಿ.ಶಂಕರಗೌಡರು, ಕುವೆಂಪು ಅವರಿಂದ ನಿತ್ಯ ಸಚಿವ ಎಂದು ಕರೆಸಿಕೊಂಡರು. ಶಾಸಕ, ಸಂಸದರಾಗಿ ರಾಜಕಾರಣದಲ್ಲಿದ್ದರೂ ಸಾರ್ವಜನಿಕರ ಸೇವೆಗಾಗಿ ಸಾಲ ಮಾಡಿದ್ದ ಮಹಾನುಭವ ಎಂದರೆ ಅದು ಶಂಕರಗೌಡರು ಮಾತ್ರ, ಅವರು ಸಾವನ್ನಪ್ಪಿದಾಗ ಅವರ ಮೇಲೆ 19 ಲಕ್ಷ ರೂ.ಗಳ ಸಾಲ ಇತ್ತು. ಸಮಾಜಸೇವೆ ಮಾಡುವುದಕ್ಕಾಗಿ ಸಾಲ ಮಾಡಿಕೊಂಡಿದ್ದ ಏಕೈಕ ವ್ಯಕ್ತಿ ಎಂದರೆ ಶಂಕರಗೌಡರು ಮಾತ್ರ. ಅವರು ಬಹುದೊಡ್ಡ ಶಿಕ್ಷಣ ಪ್ರೇಮಿಯಷ್ಟೇ ಅಲ್ಲದೇ ಮಂಡ್ಯದ ಅಸ್ಮಿತೆ, ಜನಪರ ರಾಜಕಾರಣಿ, ಸಾಹಿತಿ, ಪತ್ರಕರ್ತ, ಸಂಘಟಕ, ಸಹಕಾರಿ ದುರೀಣ, ರಂಗಕರ್ಮಿ, ಶಿಕ್ಷಣ ತಜ್ಞರು ಕೂಡ ಆಗಿದ್ದರು, ಆಧುನಿಕ ಮಂಡ್ಯದ ನಿರ್ಮಾತೃ ಕೂಡ ಆಗಿದ್ದಾರೆ ಎಂದು ಸ್ಮರಿಸಿದರು.
80-90 ರ ದಶಕದಲ್ಲಿ ಕೆ.ವಿ.ಶಂಕರಗೌಡರು ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ, ರೈತರ ವ್ಯವಸಾಯೋತ್ಪನ್ನ ಸಹಕಾರ ಸಂಘದ ಮೂಲಕ ಅಕ್ಕಿ, ಎಣ್ಣೆ, ಸೋಪು ಮುಂತಾದ ದಿನಸಿ ಪದಾರ್ಥಗಳ ಮಾರಾಟ ಆರಂಭಿಸಿದ್ದರು. ಇದು ಅಂದಿನ ಒಕ್ಕೂಟ ಮಂತ್ರಿಯಾಗಿದ್ದ ಅಶೋಕ್ ಮಹ್ತಾ ಗಮನಕ್ಕೆ ಬಂದು, ಅವರು, ಮಂಡ್ಯದಲ್ಲಿ ಆಗಿರುವ ಸಹಕಾರಿ ಕೆಲಸ ಇಂಡಿಯಾದಲ್ಲೂ ಆಗಬೇಕು, ಹಾಗಾಗಿ ಇಡೀ ಇಂಡಿಯಾ ಮಂಡ್ಯವಾಗಬೇಕೆಂದು ಹೇಳಿದ್ದರು. ಆದ್ದರಿಂದ ಮಂಡ್ಯ ಎಂದರೆ ಇಂಡಿಯಾ’ ಎಂಬ ಮಾತು ಚಾಲ್ತಿಯಲ್ಲಿದೆ ಎಂದು ಉಲ್ಲೇಖಿಸಿದರು.
1952ರ ಮೊದಲ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದರು. 1954ರಲ್ಲಿ ಅಂದಿನ ಸರ್ಕಾರ ರೈತರ ಭೂ ಕಂದಾಯ ಹೆಚ್ಚಳ ಮಾಡುವುದಾಗಿ ಪ್ರಕಟಿಸಿತು, ಆಗ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಕಂದಾಯ ಹೆಚ್ಚಳ ಅನಿವಾರ್ಯ ಎಂದು ದನಿಗೂಡಿಸಿದರು. ಆಗ ಇದಕ್ಕೆ ವಿರೋಧ ವ್ಯಕ್ತಿಪಡಿಸಿದ ಕೆ.ವಿ.ಶಂಕರಗೌಡ ರಾಜೀನಾಮೆ ನೀಡಿ ಹೊರ ಬಂದರು. ಸ್ವತಂ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯರೇ ಶಂಕರಗೌಡ ಮನೆಗೆ ಹೋಗಿ ರಾಜೀನಾಮೆ ಪಡೆಯುವಂತೆ ಕೇಳಿಕೊಂಡರು. ರಾಜೀನಾಮೆ ವಾಪಸ್ ಪಡೆಯಲಿಲ್ಲ. ಇಂದಿನ ರಾಜಕಾರಣಿಗಳ ರಾಜಕೀಯ ಪ್ರಹಸನದ ನಡುವೆ ಶಂಕರಗೌಡರು ಬಹು ಎತ್ತರಕ್ಕೆ ನಿಲ್ಲುತ್ತಾರೆಂದು ತಿಳಿಸಿದರು.

1957ರಲ್ಲಿ ಹೊರಗಿನವರಾದ ಸಾಹುಕಾರ್ ಚನ್ನಯ್ಯ ಮಂಡ್ಯದಲ್ಲಿ ಬಂದು ಚುನಾವಣೆಗೆ ನಿಂತರು, ಇದನ್ನು ಅಂದು ಕೆ.ವಿ.ಶಂಕರಗೌಡರ ಸಹಿತ ಮಂಡ್ಯದ ರಾಜಕಾರಣಿಗಳೆಲ್ಲ ವಿರೋಧಿಸಿ, ತಾವೇ ಹೊಂಬಯ್ಯರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದರು. ಆಗ ಕೆವಿಎಸ್ ಮಂಡ್ಯದಲ್ಲಿ ಹೊರಗಿನವರು ಬಂದು ರಾಜಕಾರಣ ಮಾಡುವುದನ್ನು ಪ್ರಬಲವಾಗಿ ವಿರೋಧಿಸಿದ್ದರು. ಈ ಮೂಲಕ ಸ್ವಾಭಿಮಾನ ಪ್ರದರ್ಶನ ಮಾಡಿದ್ದರು ಎಂದು ಜೀರಹಳ್ಳಿ ರಮೇಶ್ ಗೌಡ ತಿಳಿಸಿದರು.
ಸಮಾಜಮುಖಿ ಶಂಕರ್ ನಾಗ್ ಒಂದು ಅವಲೋಕನ ಕುರಿತು ಸಾಮಾಜಿಕ ಚಿಂತಕ ವಿನಯ್ ಕುಮಾರ್ ವಿಶೇಷ ಉಪನ್ಯಾಸ ನೀಡಿದರು. ಕರ್ನಾಟಕ ಜನಶಕ್ತಿ ಹೋರಾಟಗಾರ್ತಿ ಪೂರ್ಣಿಮ, ಶಿಲ್ಪ ‘ಅರಿವಿನ ಪಯಣ’ ಎಂಬ ಕಿರುನಾಟಕ ಪ್ರದರ್ಶನ ಮಾಡಿ ಗಮನ ಸೆಳೆದರು.
ವೇದಿಕೆಯಲ್ಲಿ ರೈತರ ಶಾಲೆಯ ಸಂಸ್ಥಾಪಕ ಪ್ರೊ.ಸತ್ಯಮೂರ್ತಿ, ಕರುನಾಡ ಸೇವಕರು ಸಂಘಟನೆಯ ಎಂ.ಬಿ. ನಾಗಣ್ಣಗೌಡ, ಚಿಕ್ಕಮಂಡ್ಯ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಚ್.ಎನ್ ದೇವರಾಜು, ನುಡಿಕರ್ನಾಟಕ ಸಂಪಾದಕ ಸಂತೋಷ್ ಜಿ, ಚಿತ್ರಕೂಟ ಬಳಗದ ಅರವಿಂದ ಪ್ರಭು, ಧನುಷ್ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಶ್ರೀಧರ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
