ಶರಣರ ವಿಚಾರಗಳಿಗೆ ವಿರುದ್ಧವಾಗಿದೆ ಎಂದು ವಿವಾದಕ್ಕೆ ಕಾರಣವಾಗಿದ್ದ ಶರಣರ ಶಕ್ತಿ ಚಲನಚಿತ್ರ ಈಗ ವಿವಾದದ ನಡುವೆಯೂ ನವೆಂಬರ್ 22ರಂದು ಹುಬ್ಬಳ್ಳಿ ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಚಿತ್ರದ ನಿರ್ದೇಶಕ ದಿಲೀಪ ಶರ್ಮಾ ವಿಶ್ವಗುರು 12ನೇ ಶತಮಾನದ ಸಮಾನತೆ ಸಾರುವ ಬಹು ನಿರೀಕ್ಷಿತ ಕನ್ನಡ ಚಲನಚಿತ್ರ “ಶರಣರ ಶಕ್ತಿ” ಬಿಡುಗಡೆಗೆ ಸಮಯ ನಿಗದಿಯಾಗಿದ್ದು, ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಲು ವಚನ ಸಾಹಿತ್ಯ ಬಹಳ ಮಹತ್ವ ಪಾತ್ರವಹಿಸಿದೆ. ಶರಣರು 12ನೇ ಶತಮಾನದಲ್ಲಿ ಅಚ್ಚ ಕನ್ನಡದಲ್ಲಿಯೇ ವಚನಗಳನ್ನು ಬರೆದು ಹಾಗೂ ಸಮಸಮಾಜ ನಿರ್ಮಿಸಲು ಶ್ರಮಿಸಿದನ್ನು ಮರೆಯಲಾಗದು. ಇಂತಹ ಶರಣರ ಕುರಿತು ನಿರ್ಮಿಸಿರುವ ಈ ಸಿನಿಮಾದ ಮೂಲಕ ಶರಣರ ಕ್ರಾಂತಿಕಾರಿ ವಿಚಾರಗಳನ್ನು ಪ್ರೇಕ್ಷಕರ ಮುಂದಿಡಲು ಪ್ರಯತ್ನಿಸಲಾಗಿದ್ದು, ಬರುವ ನವೆಂಬರ್ 22ಕ್ಕೆ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.
ಶರಣರ ಶಕ್ತಿ ಚಿತ್ರದಲ್ಲಿ ’ತಡಿವ್ಯರ ನೋಡು’ ಎಂಬ ಅಡಿಬರಹವಿದೆ. ಶರಣರನ್ನು ತಡುವಿದರೆ ಆಗುವ ಕ್ರಾಂತಿಗಳ ಕುರಿತು ಚಿತ್ರದಲ್ಲಿ ಉತ್ತಮವಾಗಿ ತೋರಿಸಲಾಗಿದೆ. ಪ್ರಚಾರದ ಮೊದಲ ಹಂತವಾಗಿ ’ಬಸವ ಜಯಂತಿ’ ಮುನ್ನ ದಿನದಂದು ಹಾಡು ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ಈಗಾಗಲೇ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಸಲಾಗಿದೆ. ಹನ್ನೆರಡನೆ ಶತಮಾನದಲ್ಲಿ ಶರಣರು, ಅನುಭವ ಮಂಟಪ ಮತ್ತು ವಿಶ್ವಗುರು ಬಸವಣ್ಣ ಎನ್ನುವುದು ಎಷ್ಟು ಆಕರ್ಷಕವಾಗಿತ್ತು. ಇಂತಹ ಅಂಶಗಳನ್ನು ಸಂಶೋಧನೆ ನಡೆಸಿ ’ಶರಣರ ಶಕ್ತಿ’ ಎನ್ನುವ ಚಿತ್ರವೊಂದು ಪೋಸ್ಟ್ ಪ್ರೊಡಕ್ಷನ್ ಕೆಲಸ ಪೂರ್ಣಗೊಳಿಸಿದೆ ಎಂದರು.
ಡಾ. ಶ್ರುತಿ ಹೆಗಡೆ ಶರಣೆ ಸಂಕಮ್ಮನ ಪಾತ್ರ, ಮಾಜಿ ಶಾಸಕ, ರಂಗಕರ್ಮಿ ರಾಮಕೃಷ್ಣ ದೊಡ್ಡಮನಿ ಹರಳಯ್ಯನವರ ಪಾತ್ರ, ವಿಶ್ವೇಶ್ವರಿ ಹಿರೇಮಠ ಕಲ್ಯಾಣಮ್ಮನ ಪಾತ್ರ, ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರು ಬಿಜ್ಜಳನ ಮಗನ ಪಾತ್ರ, ಮೀನಾಕ್ಷಿ ಒಂಟಮೂರಿ ದಾನಮ್ಮನ ಪಾತ್ರ, ಸುರೇಶ್ ಗೋಕಾಕ್ ಮಲ್ಲಯ್ಯನ ಪಾತ್ರ, ಗುರುನಾಥ ಉಳ್ಳಿಕಾಶಿ ಮಾದಾರ ಚೆನ್ನಯ್ಯನ ಪಾತ್ರ, ಆರಾಧನಾ ಕುಲಕರ್ಣಿ ಅಕ್ಕ ನಾಗಮ್ಮನ ಪಾತ್ರ, ದಿಲೀಪ್ ಶರ್ಮ ಸಿನಿಮಾದ ರಚನೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಅಲ್ಲದೆ ಶರಣ ಮಡಿವಾಳ ಮಾಚಿದೇವರ ಪಾತ್ರದಲ್ಲಿ ಹೀಗೆ ಎಲ್ಲ ಜಿಲ್ಲೆಯ ಕಲಾವಿದರೂ ಈ ಚಿತ್ರದಲ್ಲಿ ವಿಧ ವಿಧದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಲ್ಯಾಣ ಕ್ರಾಂತಿ, ವಚನ ಸಾಹಿತ್ಯ ರಕ್ಷಣೆ ಮಾಡಲು ಹೇಗೆ ಹೋರಾಡಿದರು. ಎಲ್ಲೆಲ್ಲಿ ವಚನಗಳನ್ನು ಬಚ್ಚಿಟ್ಟರು. ಅದನ್ನು ಜನರಿಗೆ ಯಾವ ರೀತಿ ಹರಡಿದರು. ವೇಶ್ಯೆ ಸಂಕವ್ವ ಮಹಾಶರಣೆಯಾಗಿದ್ದು. ತಳವಾರು ಕಾಮಿದೇವ ಶರಣರು ಯಾಕೆ ಕಲ್ಯಾಣಕ್ಕೆ ಬಂದರು. ಚನ್ನಬಸವಣ್ಣನ ಸಾರಥ್ಯದಲ್ಲಿ ಉಳವಿ ಮಂಟಪ. ಶರಣರನ್ನು ತಡೆ ಹಿಡಿದರೆ ಏನಾಗುತ್ತದೆ. ಇಂತಹ ಇನ್ನು ಹಲವಾರು ತಿಳಿಯದ ಮಾಹಿತಿಗಳು ಚಿತ್ರದಲ್ಲಿ ನೋಡಬಹುದಾಗಿದೆ.
ಹುಬ್ಬಳ್ಳಿಯ ಮಂಜುನಾಥಗೌಡ ಪಾಟೀಲ್ ಬಸವಣ್ಣನ ಪಾತ್ರ, ನೀಲಾಂಬಿಕೆಯಾಗಿ ಸಂಗೀತಾ ಮಡ್ಲೂರ, ಶೀಲವಂತನಾಗಿ ವಿಶ್ವರಾಜ್ ರಾಜ್ಗುರು, ಚನ್ನಬಸವಣ್ಣನಾಗಿ ಧ್ರುವಶರ್ಮ, ಉಳಿದಂತೆ ರಮೇಶ್ಪಂಡಿತ್, ಸಾಚಿಜೈನ್, ವಿನೋದ್ ದಂಡಿನ, ರಾಮಕೃಷ್ಣ ದೊಡ್ಡಮನಿ, ಅಬ್ದುಲ್ಲತೀಫ್ ಹಾಗೂ ಉತ್ತರ ಕರ್ನಾಟಕ ಭಾಗದ 140ಕ್ಕೂ ಹೆಚ್ಚು ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಹುಬ್ಬಳ್ಳಿ ಸುತ್ತಮುತ್ತ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಸಂಗೀತ ಸಂಯೋಜನೆ ವಿನುಮನಸು, ಛಾಯಾಗ್ರಹಣ ಮುಂಜಾನೆ ಮಂಜು, ಸಂಕಲನ ಮಹಾಂತೇಶ್.ಆರ್ ನಿರ್ವಹಿಸಿದ್ದಾರೆ. ಕನ್ನಡದ ಮನಸ್ದುಗಳು, ಅಭಿಮಾನಿಗಳು, ಕಲಾರಸಿಕರು, ಶರಣರ ಚಿತ್ರ ವಿಕ್ಷೀಸುವ ಮೂಲಕ ಪ್ರೋತ್ಸಾಹ ನಿಡುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರ ನಿರ್ದೇಶಕ ದಿಲಿಪ ಶರ್ಮಾ, ಕುಂದಗೋಳದ ಬಸವಣ್ಣನಜ್ಜನವರು, ನಿರ್ಮಾಪಕಿ ಆರಾಧನಾ ಕುಲಕರ್ಣಿ, ನಟ ಮಂಜುನಾಥ್ ಗೌಡ ಪಾಟೀಲ್ ಡಾ. ಶ್ರುತಿ ಹೆಗಡೆ ಹಾಗೂ ಡಾ ಪ್ರಭು ಗಂಜಿಹಾಳ ಪಾಲ್ಗೊಂಡಿದ್ದರು.