ಸೂರ್ಯೋದಯಕ್ಕೂ ಮುನ್ನ ನಗರವನ್ನು ಸ್ವಚ್ಛಗೊಳಿಸುವ ಕಾಯಕದಲ್ಲಿ ನಿರತವಾಗುವ ಶ್ರಮಜೀವಿ ಪೌರಕಾರ್ಮಿಕರು ದಿಟವಾದ ಕಾಯಕಯೋಗಿಗಳು ಎಂದು ಮಂಡ್ಯ ನಗರಸಭೆ ಅಧ್ಯಕ್ಷ ನಾಗೇಶ್ ಹೇಳಿದರು.
ನಗರದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಉದ್ಯಾನವನದಲ್ಲಿ ಸೇವಾ ನಿವೃತ್ತಿ ಹೊಂದಿದ ಪೌರಕಾರ್ಮಿಕ ಹಾಗೂ ಕರಾಟೆ ತರಬೇತುದಾರ ನಾರಾಯಣ್ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಪೌರಕಾರ್ಮಿಕರನ್ನು ಯಾರೂ ಕೂಡಾ ಕೀಳಾಗಿ ಕಾಣಬಾರದು. ಪ್ರತಿದಿನ ನಗರದ ಕಸವನ್ನು ಸ್ವಚ್ಚಗೊಳಿಸುವ ಕೆಲಸದಲ್ಲಿ ಶ್ರಮವಹಿಸುವ ಅವರ ಕಾಯಕ ಇಲ್ಲದಿದ್ದರೆ ನಗರದಲ್ಲಿ ಅನೈರ್ಮಲ್ಯ ತಾಂಡವವಾಡುತ್ತದೆ” ಎಂದು ಹೇಳಿದರು.
ಪೌರಾಯುಕ್ತ ಪಂಪಶ್ರೀ ಮಾತನಾಡಿ, “ಕರಾಟೆಯ ಜತೆಗೆ ನಗರದ ಸ್ವಚ್ಚತೆಯಲ್ಲೂ ಉತ್ತಮ ಹೆಸರು ಮಾಡಿರುವ ನಾರಾಯಣ್ ಕಾಯಕ ಶ್ರದ್ಧೆ ಎಲ್ಲರಿಗೂ ಅನುಕರಣೀಯವಾಗಿದೆ. ಪೌರಕಾರ್ಮಿಕ ನಾರಾಯಣ್ ಮಂಡ್ಯ ನಗರಸಭೆಯಲ್ಲಿ ಶಿಸ್ತಿನ ಸಿಪಾಯಿಯಂತೆ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಪೌರಕಾರ್ಮಿಕ ವೃತ್ತಿಯ ಜೊತೆಯಲ್ಲೇ ಕರಾಟೆಯನ್ನೂ ಮೈಗೂಡಿಸಿಕೊಂಡು ಹಲವಾರು ಮಂದಿಗೆ ಸಾಹಸ ಕ್ರೀಡೆಯಾದ ಕರಾಟೆ ತರಬೇತಿ ನೀಡಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿರುವುದು ಎಲ್ಲ ಪೌರಕಾರ್ಮಿಕರಗೂ ಮಾದರಿಯಾಗಿದೆ” ಎಂದು ಬಣ್ಣಿಸಿದರು.
ಪೌರಕಾರ್ಮಿಕರ ಸಂಘನೆಯ ರಾಜ್ಯ ಉಪಾಧ್ಯಕ್ಷರಾದ ನಾಗೇಶ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಕಸಗುಡಿಸುವ ಮಂದಿಯನ್ನೂ ಶರಣರನ್ನಾಗಿಸಿ ಅವರಿಗೆ ಧರ್ಮದೀಕ್ಷೆ ನೀಡಿ ಗೌರವಿಸಿ ಕಾಯಕದಲ್ಲೇ ಕೈಲಾಸ ಕಾಣಬೇಕೆಂಬ ದಿವ್ಯ ಸಂದೇಶವನ್ನು ಸಾರಿದರು. ಅದೇ ಹಾದಿಯಲ್ಲಿ ಇಂದು ಪೌರಕಾರ್ಮಿಕರು ಸಾಗುತ್ತಿರುವುದು ಶ್ಲಾಘನೀಯ ಎಂದರು.
ಇದನ್ನು ಓದಿದ್ದೀರಾ? ಮದ್ದೂರು | ಮಣ್ಣಿನ ಆರೋಗ್ಯ, ರೈತರ ಕಲ್ಯಾಣಕ್ಕೆ ಸರ್ಕಾರ ಗಮನಹರಿಸಲಿ: ಚಂದನ್ ಗೌಡ
ನಗರಸಭೆ ಮಾಜಿ ಅಧ್ಯಕ್ಷ ಮಂಜು ಮಾತನಾಡಿ, “ಪೌರಕಾರ್ಮಿಕರು ದುಶ್ಚಟಗಳಿಂದ ದೂರವಿದ್ದು, ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ನಾರಾಯಣ್ ಮಂಡ್ಯ ನಗರದಲ್ಲಿ ಅತ್ಯುತ್ತಮ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದು, ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ” ಎಂದು ಆಶಿಸಿದರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ ಶಿವಕುಮಾರ್, ಪೌರಾಯುಕ್ತ ಪಂಪಶ್ರೀ ಹಾಗೂ ಪೌರಕಾರ್ಮಿಕ ನಾರಾಯಣ್ ಅವರಿಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರ ನೀಡಿ ಅಭಿನಂದಿಸಿ ಮಾತನಾಡಿದರು.
ನಗರಸಭೆ ಸದಸ್ಯರಾದ ರಜನಿ, ಲಲಿತಾ, ಮುಖಂಡರಾದ ಎಂ ಆರ್ ರಘು, ಅಶ್ವಥ್, ಪ್ರಕಾಶ್, ನಂಜುಂಡಪ್ಪ, ಮುತ್ತಾಲಯ್ಯ ಸೇರಿದಂತೆ ಹಲವರು ಇದ್ದರು.