ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ಸಂವಿಧಾನಕ್ಕೆ ವಿರುದ್ಧವಾಗಿದೆ. ಆಹಾರದ ಅಸ್ಪೃಶ್ಯತೆ ದೇಶವನ್ನು, ಜನರನ್ನು ಮೇಲು ಕೀಳೆಂದು ವಿಭಜಿಸುತ್ತಿದೆ. ಕೋಮುದಳ್ಳುರಿಯಲ್ಲಿ ದೇಶ ಬೇಯುವಂತೆ ಮಾಡುತ್ತಿರುವ ದುಷ್ಟಶಕ್ತಿಗಳು ಕೂಡ ಆಹಾರ ಶ್ರೇಷ್ಠತೆಯ ವಿಷ ಬೀಜವನ್ನು ಬಿತ್ತುತ್ತಿರುವ ವಿದ್ಯಮಾನವನ್ನು ದೇಶ ನೋಡುತ್ತಿದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ಮಂಡ್ಯ ಜಿಲ್ಲಾ ಘಟಕ ಅಧ್ಯಕ್ಷರಾದ ಬಿ.ಟಿ. ವಿಶ್ವನಾಥ್ ಆತಂಕ ವ್ಯಕ್ತಪಡಿಸಿದರು.
ಅವರು ಮಂಡ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂತಹ ದುರಿತ ಕಾಲದಲ್ಲಿ ಸಮಾಜದ ಪ್ರಗತಿಪರರು, ವಿದ್ಯಾವಂತರು ಮೌನವಹಿಸಿದರೆ ದೇಶ ಮತ್ತು ಸಮಾಜದ ರಕ್ಷಣೆಗೆ ಧಾವಿಸುವವರು ಯಾರು ಎಂಬ ಆಳ ಚಿಂತನೆಯ ಗಂಭೀರ ಆತಂಕ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬೇಕು ಎಂದು ಎದ್ದಿರುವ ಚಳುವಳಿಯ ಆಂತರ್ಯದಲ್ಲಿರುವುದನ್ನು ಅಖಿಲ ಭಾರತ ವಕೀಲರ ಒಕ್ಕೂಟ ಗಮನಿಸಿದೆ ಮತ್ತು ಆ ಚಳವಳಿಗೆ ನೈತಿಕ ಬೆಂಬಲ ನೀಡಲು ಬಯಸುತ್ತದೆ ಎಂದರು.
ಈಗಾಗಲೇ ಈ ಚಳುವಳಿಯನ್ನು ಬಗ್ಗುಬಡಿಯಲು ಕೋಮು ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇದ್ಯಾವುದೋ ಬರಗೆಟ್ಟ ಬಾಡೂಟದ ಹೋರಾಟ, ತುಂಡೈಕಳ ಚಳುವಳಿ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಈ ಪಿತೂರಿಯನ್ನು, ಅದರ ಕೋಮುವಿಭಜಕ ಅಜೆಂಡಾವನ್ನು ಕೂಡ ನಮ್ಮ ಸಂಘಟನೆಯು ಗಮನಿಸುತ್ತಿದೆ. ಹಾಗಾಗಿಯೇ ಜನರನ್ನು ಎಚ್ಚರಿಸಲು ಇದು ಸಕಾಲ ಎಂದು ಭಾವಿಸಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಈ ದೇಶದ ಶೇಕಡ 80ಕ್ಕೂ ಹೆಚ್ಚು ಜನ ಮಾಂಸಾಹಾರಿಗಳಾಗಿದ್ದು ಅವರೆಂದೂ ಸಸ್ಯಾಹಾರಿಗಳನ್ನು ನಿಕೃಷ್ಟವಾಗಿ ಕಂಡದ್ದಿಲ್ಲ. ಆದರೆ, ಆಹಾರದಲ್ಲಿ ಭೇದವೆಣಿಸುವ ಮೂಲಕ ಸಸ್ಯಾಹಾರವನ್ನು ವಿಭಜಿಸಿ, ಕೋಮುವಾದಿ ಮತ್ತಿತರ ನೇತಾರರು ಬಹುಸಂಖ್ಯಾತರನ್ನು ಹಣಿಯುವ ಬಡಿಗೆಯನ್ನಾಗಿಸಿ ಪರಿವರ್ತಿಸಿಕೊಂಡಿರುವುದು ನಿಚ್ಚಳ ವಾಸ್ತವ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ನೋಡಿದ್ದೀರಾ? ಸಾಹಿತ್ಯ ಸಮ್ಮೇಳನದಲ್ಲಿ ನಾನ್ ವೆಜ್ ಇರಲೇಬೇಕಾ?
ಸಂವಿಧಾನ ಆಹಾರ ಹಕ್ಕಿನಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ. ನೆಲದ ಯಾವ ಕಾನೂನುಗಳು ಕೂಡ ಸಸ್ಯಾಹಾರ ಶ್ರೇಷ್ಠ ಮತ್ತು ಮಾಂಸಾಹಾರ ಕನಿಷ್ಟ ಎಂದು ಹೇಳಿಲ್ಲ. ಹೀಗಿರುವಾಗ ಬಹುಸಂಖ್ಯಾತರ ಮೇಲೆ ಸಸ್ಯಾಹಾರದ ಹೇರಿಕೆ ಯಾಕೆ? ಮಾಂಸಾಹಾರವನ್ನು ಸಮ್ಮೇಳನದಲ್ಲಿ ನಿಷೇಧಿಸಿರುವುದು ಯಾಕೆ? ಇದು ಪ್ರಶ್ನಿಸಬೇಕಾದ ವಿಚಾರ. ಬಹುಸಂಖ್ಯಾತರ ತೆರಿಗೆ ಹಣವನ್ನು ಪ್ರಭುತ್ವ ಇಂತಹ ಸಮ್ಮೇಳನಗಳನ್ನು ನಡೆಸಲು ವಿನಿಯೋಗಿಸುತ್ತಿಲ್ಲವೇ? ಹಾಗಿದ್ದ ಮೇಲೆ ಈ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದರು?
ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಲಿ. ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಇರುವಂತೆ ನೋಡಿಕೊಳ್ಳಲಿ. ಅವರು ತೆಗೆದುಕೊಳ್ಳುವ ದಿಟ್ಟ ನಿರ್ಧಾರ ‘ಕೋಮು ಸೌಹಾರ್ದ ಕರ್ನಾಟಕ’ವಾಗಿ ಉಳಿಯಲು ಮತ್ತು ಬೆಳೆಯಲು ಬಹು ದೀರ್ಘ ಕಾಲ ಉಳಿಯುವ ಇಂಧನವನ್ನು ಒದಗಿಸುತ್ತದೆ ಎಂದು ಹೇಳಿದರು.
‘ಜನತಾದಳ v/s ಎಚ್.ಎಸ್.ಚೌದರಿ’ 1992(4)SCC ಪುಟ 305 ಮತ್ತು ‘ಎಲೆಕ್ಟ್ರಿಸಿಟಿ ಸಪ್ಲೈ ಯುಟಿಲಿಟಿ ಆಫ್ ಒರಿಸ್ಸಾ v/s ‘ದೋಬಿ ಸಾಹು’ 2014 SCC ಪುಟ 161 ಪ್ರಕರಣಗಳಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪುಗಳನ್ನು ಉಲ್ಲೇಖಿಸುತ್ತಾ ಮದ್ರಾಸ್ ಹೈಕೋರ್ಟಿನ ವಿಭಾಗೀಯ ಪೀಠ ‘ಪಳನಿ ದೇವಸ್ಥಾನದ ಬೆಟ್ಟದ ಸುತ್ತ’ ಮಾಂಸಾಹಾರ ನಿಷೇಧಿಸಲು ಹಾಕಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿ ಕೊಟ್ಟಿರುವ ತೀರ್ಪಿನಲ್ಲಿ “ಮಾಂಸಾಹಾರ – ಸಸ್ಯಾಹಾರ ಎಂದು ತಾರತಮ್ಯ ಮಾಡಲು ಈ ದೇಶದಲ್ಲಿನ ಯಾವುದೇ ಕಾನೂನುಗಳು ಮತ್ತು ಸಂವಿಧಾನ ಸಮ್ಮತಿಸುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿರುವುದನ್ನು ಈ ಸಂದರ್ಭದಲ್ಲಿ ನೆನೆಯಬೇಕಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ಹೈದರಾಬಾದ್ | ಕಾಲ್ತುಳಿತ ಪ್ರಕರಣ: ಪುಷ್ಪಾ 2 ನಾಯಕ ಅಲ್ಲು ಅರ್ಜುನ್ ಬಂಧನ
ಕಾರ್ಯದರ್ಶಿ ಚಂದನ್ ಮಾತನಾಡಿ, ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರವನ್ನಷ್ಟೇ ಕೊಟ್ಟು, ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸುವುದು ಈ ದೇಶದ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಸಂವಿಧಾನಕ್ಕೆ ಎಸಗುವ ಅಪಮಾನವಾಗಿರುತ್ತದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲು ಸಂವಿಧಾನದ ಆರ್ಟಿಕಲ್ 51A(H) ಅವಕಾಶವಿದೆ ಎಂದರು.
ಈ ಬಾರಿ ಸಾಹಿತ್ಯ ಸಮ್ಮೇಳನ ನಮ್ಮ ಮಂಡ್ಯದಲ್ಲಿ ನಡೆಯುತ್ತಿರುವುದರಿಂದ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಬಗೆಯ ಆಹಾರವನ್ನು ನೀಡುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿಹಿಡಿದು ಜಿಲ್ಲಾಡಳಿತ, ಸಮ್ಮೇಳನದ ಸ್ವಾಗತ ಸಮಿತಿ ಮತ್ತು ಸರ್ಕಾರ ಮಾದರಿಯಾಗಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟ ಪರವಾಗಿ ಆಗ್ರಹಿಸಿದರು.