ನಟೋರಿಯಸ್ ಕ್ರಿಮಿನಲ್ ಜೊತೆಗೆ ಪರಾರಿಯಾಗಿ ಗೋವಾದಿಂದ ಹುಬ್ಬಳ್ಳಿ ಕಡೆಗೆ ಬಂದಿದ್ದ ಪೊಲೀಸ್ ಪೇದೆಯನ್ನು ಹಳೇ ಹುಬ್ಬಳ್ಳಿಯ ಪೊಲೀಸರು ಡಿಸೆಂಬರ್ 13ಕ್ಕೆ ವಶಕ್ಕೆ ಪಡೆದು, ಗೋವಾ ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿ ಕ್ರಿಮಿನಲ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ ವಿರುದ್ಧ ಕೊಲೆ, ಕೊಲೆಯತ್ನ, ಬೆದರಿಕೆ, ವಂಚನೆ, ಭೂ ಮಾಫಿಯಾ ದಂಧೆ, ಸಾರ್ವಜನಿಕರನ್ನು ಹೆದರಿಸಿ ದುಡ್ಡು ಕೀಳುವುದು, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿಯನ್ನು ಗೋವಾ ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿ ಕಾರಾಗೃಹದಲ್ಲಿರಿಸಿದ್ದರು. ಈತನನ್ನು ಕಾಯಲು ಪೇದೆ ಅಮಿತ್ ನಾಯಕನನ್ನು ನೇಮಕ ಮಾಡಿದ್ದಾರು.
ಆದರೆ, ಪೇದೆ ಅಮಿತ್ ಈ ನಟೋರಿಯಸ್ ಸುಲೇಮಾನ್ ಸಿದ್ದಿಕಿಯನ್ನು ಶುಕ್ರವಾರ ಕಸ್ಟಡಿಯಿಂದ ಬಿಟ್ಟಿದ್ದಲ್ಲದೆ, ಆತನೊಂದಿಗೆ ತಾನೂ ಪರಾರಿಯಾಗಿ ತಲೆಮರೆಸಿಕೊಳ್ಳಲು ಹುಬ್ಬಳ್ಳಿ ಕಡೆಗೆ ಬಂದಿದ್ದ. ಗೋವಾ ಪೊಲೀಸರ ಖಚಿತ ಮಾಹಿತಿ ಮೇರೆಗೆ ಇಬ್ಬರ ಪತ್ತೆಗಾಗಿ ಕಾರ್ಯಾಚರಣೆಗೆ ಮುಂದಾಗಿದ್ದಾಗ ಪೇದೆ ಅಮಿತ್ ನಾಯಕನು ಹಳೇಹುಬ್ಬಳ್ಳಿ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ. ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ ತಲೆಮರೆಸಿಕೊಂಡಿದ್ದಾನೆ.
ಈ ವರದಿ ಓದಿದ್ದೀರಾ? ಹುಬ್ಬಳ್ಳಿ | ಅರೆಬೆತ್ತಲೆ ಮೆರವಣಿಗೆ: 4ನೇ ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಧರಣಿ ಸತ್ಯಾಗ್ರಹ
ಪೇದೆ ಅಮಿತ್ ನಾಯಕನನ್ನು ಗೋವಾ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪೇದೆ ಅಮಿತ್ ಗೋವಾ ಪೊಲೀಸ್ ಕ್ರೈಂ ಬ್ರಾಂಚ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.