2020ರಲ್ಲಿ ಈಶಾನ್ಯದೆಹಲಿಯಲ್ಲಿ ನಡೆಸಿದ್ದ ಗಲಭೆ ಪ್ರಕರಣದಲ್ಲಿ ಯುವ ಹೋರಾಟಗಾರ ಉಮರ್ ಖಾಲಿದ್ ಅವರನ್ನು ಬಂಧಿಸಿ, ಅವರ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಿ ಜೈಲಿನಲ್ಲಿರಿಸಲಾಗಿದೆ. ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್, “ಪ್ರತಿಭಟನೆಯನ್ನು ಆಯೋಜನೆ ಮಾಡಿದ್ದ ಕಾರಣವನ್ನಿಟ್ಟುಕೊಂಡು ಓರ್ವ ವ್ಯಕ್ತಿಯ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಬಹುದಾ ಎಂದು ದೆಹಲಿ ಪೊಲೀಸರನ್ನು ಪ್ರಶ್ನಿಸಿದೆ.
ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರು ವಿರುದ್ಧ ಪೊಲೀಸರು ಯುಎಪಿಎ ಪ್ರಕರಣ ದಾಖಲಿಸಿದ್ದಾರೆ. ಈ ಎಲ್ಲ ಆರೋಪಿಗಳು ಕಳೆದ ನಾಲ್ಕು ವರ್ಷಗಳಿಂದ ಯಾವುದೇ ವಿಚಾರಣೆ ಇಲ್ಲದೆ, ಜಾಮೀನು ಕೂಡ ದೊರೆಯದೆ ಜೈಲಿನಲ್ಲಿ ಸರೆವಾಸ ಅನುಭವಿಸುತ್ತಿದ್ದಾರೆ. ಜಾಮೀನಿಗಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.
ಇತ್ತೀಚೆಗೆ, ಜಾಮೀನು ಕೋರಿ ಸಲ್ಲಿಸಿದ್ದ ಹೊಸ ಅರ್ಜಿಯನ್ನು ದೆಹಲಿ ಹೈಕೋರ್ಟ್ನ ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿದೆ. ಕೇವಲ ಪ್ರತಿಭಟನೆ ಆಯೋಜಿಸಿದ ಕಾರಣಕ್ಕಾಗಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಬಹದೇ ಎಂದು ದೆಹಲಿ ಪೊಲೀಸರು ಪರವಾಗಿ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಅಮಿತ್ ಪ್ರಸಾದ್ ಅವರನ್ನು ಪೀಠವು ಪ್ರಶ್ನಿಸಿದೆ.
“ಯುಎಪಿಎ ಅಡಿ ಪ್ರಕರಣ ದಾಖಲಿಸಲು ಪ್ರತಿಭಟನಾ ಸ್ಥಳ ನಿಗದಿ ಮಾಡುವುದು ಅಥವಾ ಪ್ರತಿಭಟನೆ ಆಯೋಜಿಸಿದ ಕಾರಣವಷ್ಟೇ ಸಾಕಾ? ಅಥವಾ ಆ ಪ್ರತಿಭಟನಾ ಸ್ಥಳದಲ್ಲಿ ಹಿಂಸಾಚಾರ ನಡೆದಿರಬೇಕಾ? ನಿಮ್ಮ ವಾದ ಏನು? ಈಗ ಯಾವುದನ್ನು ಯುಎಪಿಎ ಅಡಿ ಪರಿಗಣಿಸಬೇಕು” ಎಂದು ನ್ಯಾಯಪೀಠ ಪ್ರಶ್ನಿಸಿದೆ.
ಈ ವರದಿ ಓದಿದ್ದೀರಾ?: ಮಣಿಪುರ ಹೊತ್ತಿ ಉರಿದಿದ್ದಕ್ಕೆ ಪ್ರಧಾನಿ ಮೋದಿ ಏಕೆ ಕ್ಷಮೆ ಕೇಳಬೇಕು?
ಆರೋಪಿಗಳು ಗಲಭೆಗೆ ಸಂಚು ರೂಪಿಸಿದ್ದರು ಮತ್ತು ಅದನ್ನು ವಾಟ್ಸಾಪ್ ಚಾಟ್ಗಳ ಮೂಲಕ ಕಾರ್ಯಗತಗೊಳಿಸಿದ್ದಾರೆ ಎಂದು ಎಸ್ಪಿಪಿ ಪ್ರಸಾದ್ ನ್ಯಾಯಾಲಯಕ್ಕೆ ಹೇಳಿದ್ದಾರೆ. ಅಲ್ಲದೆ, ಇಬ್ಬರು ಆರೋಪಿಗಳು ಯಾರು, ಯಾರಿಗೆ, ಏನು ಸಂದೇಶ ಕಳಿಸಿದ್ದರು ಎಂದು ಓದಲು ಶುರು ಮಾಡಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ಯುಎಪಿಎ ವಿಧಿಸಲು ಪ್ರತಿಭಟನೆ ಆಯೋಜಿಸುವುದಷ್ಠೇ ಸಾಕಾ? ಆರೋಪಿಗಳು ಹಿಂಸಾತ್ಮಕ ಕೃತ್ಯವನ್ನು ಯೋಜಿಸಿ ಅದನ್ನು ಕಾರ್ಯಗತಗೊಳಿಸಿದ್ದಾರೆ ಎಂಬುವುದಕ್ಕೆ ಪುರಾವೆಗಳಿದ್ದರೆ, ಯುಎಪಿಎ ಕಾಯ್ದೆಯ ನಿಬಂಧನೆಗಳನ್ನು ಅನ್ವಯಿಸಬಹುದು. ಆದರೆ, ವಾಟ್ಸಾಪ್ ಗುಂಪು ಮೂಲಕ ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದಾರೆ ಎಂಬುದು ನಿಮ್ಮ ವಾದವಾಗಿದೆ, ಅದು ಯುಎಪಿಎ ಪ್ರಕರಣವನ್ನು ದಾಖಲಿಸಲು ಸಾಕಾಗುತ್ತದೆಯೇ” ಎಂಂದು ಕೇಳಿದೆ.
ಯಾವ ಆರೋಪಿ, ಯಾವ ನಿರ್ದಿಷ್ಟ ವಾಟ್ಸಾಪ್ ಗುಂಪಿನ ಸದಸ್ಯನಾಗಿದ್ದಾನೆ ಎಂಬುವುದನ್ನು ತೋರಿಸುವ ಚಾರ್ಟ್ ರಚಿಸಲು ಎಸ್ಪಿಪಿಗೆ ಸೂಚಿಸಿದ ನ್ಯಾಯಾಲಯ, ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿದೆ.