ಹಿಂದುಳಿದ, ತಳ ಸಮುದಾಯಗಳ ಮುಖಂಡರು, ನಾಯಕರು ಅಸೂಯೆ, ದ್ವೇಷಗಳನ್ನು ಬಿಡಬೇಕು. ಕೆಲವೊಮ್ಮೆ ನಮ್ಮವರೇ ನಮ್ಮನ್ನು ತುಳಿಯಲು ಪ್ರಯತ್ನ ಪಡುತ್ತಾರೆ. ನಾವೇ ಬೆಳೆಯಬೇಕು ಎನ್ನುವ ಧೋರಣೆಯನ್ನು ಬಿಟ್ಟು, ಬೇರೆಯವರನ್ನೂ ಕೂಡ ಪ್ರೋತ್ಸಾಹಿಸುವುದು ಬೆಳೆಸುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ಸ್ವಾಭಿಮಾನ ಬಳಗದ ಮುಖಂಡ ಜಿ ಬಿ ವಿನಯ್ ಕುಮಾರ್ ಅಭಿಪ್ರಾಯಪಟ್ಟರು.
ದಾವಣಗೆರೆಯ ಸರ್ಕಾರಿ ನೌಕರರ ಭವನದಲ್ಲಿ ಅಹಿಂದ ಮತ್ತು ಶೋಷಿತ ಸಮುದಾಯಗಳ ಒಕ್ಕೂಟದಿಂದ ಆಯೋಜಿಸಿದ್ದ ಅಹಿಂದ ಮತ್ತು ಶೋಷಿತ ಸಮುದಾಯಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
“ನಮ್ಮಲ್ಲಿ ನಾಯಕರು ಬೆಳೆದು ದೊಡ್ಡವರಾಗುತ್ತಾರೆ. ಆದರೆ ಕೆಳಹಂತದ ಕಿರಿಯ ನಾಯಕರನ್ನೂ ಬೆಳೆಸುವ ಮನೋಭಾವ ಹೊಂದಬೇಕು. ನಮ್ಮ ಅಹಿಂದ ವರ್ಗಗಳಲ್ಲಿ ಎಷ್ಟೋ ನಾಯಕರು ನಮಗೆ ಕುರ್ಚಿ ಸಿಕ್ಕರೆ ಸಾಕು ಎನ್ನುವ ಮನೋಭಾವ ಹೊಂದಿದ್ದಾರೆ. ಮೊದಲು ಈ ಮನೋಭಾವವನ್ನು ಬಿಡಬೇಕು” ಎಂದು ಸೂಚ್ಯವಾಗಿ ತಿಳಿಸಿದರು.
“ಸ್ವಾಭಿಮಾನ ಮತ್ತು ಉತ್ತಮ ವ್ಯಕ್ತಿತ್ವವನ್ನು ಎಲ್ಲ ಸಮುದಾಯದವರೂ ಬೆಳೆಸಿಕೊಳ್ಳಬೇಕು. ಹಣವಂತರ, ಅಧಿಕಾರವುಳ್ಳ ಜನರ ಮುಂದೆ ತಲೆಬಾಗುವ ಸಂಸ್ಕೃತಿ ಹೆಚ್ಚಾಗಿದೆ. ಸಣ್ಣಸಣ್ಣ ನಿರ್ಲಕ್ಷಿತ ಜಾತಿಗಳ ಮುಖಂಡರನ್ನು ಚುನಾವಣೆಗಾಗಿ ಆಹ್ವಾನಿಸಿ ಚೆನ್ನಾಗಿ ಮಾತನಾಡಿಸಿ, ಬಹಳ ನಯದಿಂದ ವರ್ತಿಸಿ ‘ಗೆಲ್ಲಿಸಿ’ ಎಂದು ಮನವಿ ಮಾಡುತ್ತಾರೆ. ಆದರೆ ಚುನಾವಣೆಯಲ್ಲಿ ಗೆದ್ದ ಬಳಿಕ ಅವರ ವರ್ತನೆಯೇ ಬದಲಾಗಿಹೋಗುತ್ತದೆ. ಇದು ಎಲ್ಲ ಸಮುದಾಯಗಳಿಗೂ ವಿಶೇಷವಾಗಿ ಹಿಂದುಳಿದ ಸಮುದಾಯಗಳ ಬೆಳವಣಿಗೆಗೆ ಮಾರಕವಾಗುತ್ತಿದೆ. ಅಹಿಂದ ವರ್ಗದವರು ಎಚ್ಚೆತ್ತುಕೊಂಡು ಸಶಕ್ತರಾಗಬೇಕಿದೆ” ಎಂದು ಕರೆ ನೀಡಿದರು.

ಉಪನ್ಯಾಸಕ ಮಲ್ಲಿಕಾರ್ಜುನ ಹಲಸಂಗಿ ಮಾತನಾಡಿ, “ಕಾಂತರಾಜ್ ಆಯೋಗದ ವರದಿ ಬಂದು ಬಹಳಷ್ಟು ವರ್ಷಗಳೇ ಕಳೆದರೂ ಪ್ರಬಲ ಜಾತಿಗಳ ವಿರೋಧದಿಂದ ಬಿಡುಗಡೆ ಸಾದ್ಯವಾಗಿಲ್ಲ. ನಮ್ಮ ನಮ್ಮಲ್ಲೇ ಹಿಂದುಳಿದ ವರ್ಗಗಳ ನಡುವೆ ಇರುವ ಒಡಕಿನಿಂದಾಗಿ ಇದರ ಸಂಪೂರ್ಣ ಅಂಗೀಕಾರಕ್ಕೆ ಒತ್ತಡ ಹೇರಲು ಸಾಧ್ಯವಾಗಿಲ್ಲ. ಶೇ.99ರಷ್ಟು ಗ್ರಾಮೀಣ, ಶೇ.80ರಷ್ಟು ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಅಂಕಿ ಅಂಶಗಳನ್ನು ಸಂಗ್ರಹಿಸಿ ವಸ್ತು ನಿಷ್ಠವಾಗಿ ತಯಾರಾಗಿರುವ ಕಾಂತರಾಜ್ ವರದಿ ಪರಿಶಿಷ್ಟ ಜಾತಿ ಮತ್ತು ಪಂಗಡದ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ದೊಡ್ಡ ಕೊಡುಗೆ. ಈ ವರದಿಯನ್ನು ಅಧ್ಯಯನ ಮಾಡಿ ಸಮಾಜಕ್ಕೆ ಅಂಟಿದ ಜಾತಿಯ ಕಳಂಕವನ್ನು ಹೋಗಲಾಡಿಸಲು ಶ್ರಮಿಸಬೇಕಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಅಕ್ರಮವಾಗಿ ಸ್ಮಶಾನದ ಮಣ್ಣು ಸಾಗಾಟ; ದಸಂಸ ಖಂಡನೆ
ಸಭೆಯಲ್ಲಿ ಎಂಎಲ್ಸಿ ಅಬ್ದುಲ್ ಜಬ್ಬಾರ್, ಹನುಮಂತಪ್ಪ, ನಿರಂಜನ್, ನಿವೃತ್ತ ಪೊಲೀಸ್ ಅಧಿಕಾರಿಗಳಾದ ರುದ್ರಮುನಿ, ರವಿ ನಾರಾಯಣ್, ನಿವೃತ ನ್ಯಾಯಾಧೀಶರಾದ ಬಾಬಾ ಸಾಹೇಬ್, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ, ವಕೀಲರಾದ ಅನಿಪ್ ಪಾಷ, ಹೊದಿಗೆರೆ ರಮೇಶ್, ಸಿದ್ದಲಿಂಗಪ್ಪ ಪರಮೇಶ್, ನಲ್ಕುಂದ ಹಾಲೇಶ್ ಸೇರಿದಂತೆ ಸಂವಿಧಾನದ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿಯ ಮುಖಂಡರು, ಅಹಿಂದ ಸಮುದಾಯದ ಹಲವಾರು ಮುಖಂಡರು, ಕಾರ್ಯಕರ್ತರು ಇದ್ದರು.
