ಬೆಂಗಳೂರು | ಭಾರತದ ಸಂವಿಧಾನ ಮಾನವ ಘನತೆಯನ್ನು ರಕ್ಷಿಸುತ್ತದೆ: ಚಿಂತಕ ಡಾ. ಸರ್ಜಾಶಂಕರ್ ಹರಳಿಮಠ

Date:

Advertisements

ವಿಶ್ವದ ಶ್ರೇಷ್ಠ ಸಾಹಿತ್ಯ ಹೇಗೆ ಪ್ರತಿಯೊಬ್ಬ ಮನುಷ್ಯನ ಘನತೆಯನ್ನು ಎತ್ತಿ ಹಿಡಿಯುತ್ತದೆಯೋ ಹಾಗೆಯೇ ನಮ್ಮ ಭಾರತದ ಸಂವಿಧಾನವೂ ಕೂಡ ಕೆಲವು ಜನರ ಘನತೆಯನ್ನು ಮಾತ್ರ ಎತ್ತಿಹಿಡಿಯುವ ಹಾಗೂ ರಕ್ಷಿಸುವ ಕೆಲಸ ಮಾಡುವುದಿಲ್ಲ. ಭಾರತದ ನೆಲದಲ್ಲಿರುವ ಪ್ರತಿಯೊಬ್ಬರ ಘನತೆಯನ್ನೂ ಎತ್ತಿಹಿಡಿದು ರಕ್ಷಣೆ ಮಾಡುತ್ತದೆ ಎಂದು ಕಥೆಗಾರರೂ ಹಾಗೂ ಚಿಂತಕರಾದ ಡಾ. ಸರ್ಜಾಶಂಕರ್ ಹರಳಿಮಠ ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ನಗರದ ಕೆ ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಆಯೋಜಿಸಲಾಗಿದ್ದ “ಕನ್ನಡ ಸಾಹಿತ್ಯದಲ್ಲಿ ಭಾರತ ಸಂವಿಧಾನದ ಆಶಯ” ಎಂಬ ವಿಷಯ ಕುರಿತಾದ ಅತಿಥಿ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

“ಸಂವಿಧಾನ ಶಿಲ್ಪಿಯೆಂದೇ ಗೌರವಿಸುವ ಡಾ. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನವೆಂದರೆ ಏನು ಎಂಬುದಕ್ಕೆ ಒಂದು ವಾಕ್ಯದಲ್ಲಿ ಉತ್ತರಿಸಿದ್ದಾರೆ. ʼಸಂವಿಧಾನವೆಂದರೆ ಕೇವಲ ವಕೀಲರ ದಾಖಲೆಯಲ್ಲ. ಅದು ಕಾಲದ ಶಕ್ತಿಯನ್ನು ತನ್ನೊಳಗೆ ಇರಿಸಿಕೊಂಡಿರುವ ಬದುಕಿನ ಸಾಧನʼ ಎಂದಿದ್ದಾರೆ. ಅಂದರೆ ಸಂವಿಧಾನ ಕೇವಲ ಕಾನೂನು ಕಟ್ಟಳೆಗಳ ಪುಸ್ತಕವಲ್ಲ. ಅದು ಭಾರತೀಯರ ಬದುಕಿನ ಸಾಧನ. ಅದಕ್ಕೆ ಕಾಲದ ಶಕ್ತಿಯಿದೆ. ಭಾರತ ಬಹುಸಂಸ್ಕೃತಿಯ ನಾಡು. ಇಲ್ಲಿ ನೂರಾರು ಜಾತಿಗಳು, ಹತ್ತಾರು ಧರ್ಮಗಳು, ಸಾವಿರಾರು ಭಾಷೆಗಳು, ನೂರಾರು ಜೀವನಶೈಲಿಗಳು, ಆದಿವಾಸಿಗಳು, ಬುಡಕಟ್ಟು ಜನರು ಎಲ್ಲರೂ ಇದ್ದಾರೆ. ನಮ್ಮೆಲ್ಲರ ಸಂಪ್ರದಾಯಗಳು, ನಮ್ಮ ವಿಚಾರಗಳು, ಆಹಾರ ಪದ್ಧತಿಗಳು ಒಂದಕ್ಕಿಂತ ಒಂದು ಭಿನ್ನ. ಹೀಗಿರುವ ದೇಶದಲ್ಲಿ ನಾವು ಜಗಳವಾಡದೆ, ದ್ವೇಷ ಮಾಡದೇ ಹಿಂಸೆಗೆ ಇಳಿಯದೆ ಪರಸ್ಪರರನ್ನು ಅರ್ಥ ಮಾಡಿಕೊಂಡು ಬದುಕಲು ಹಾಕಿಕೊಟ್ಟಿರುವ ವಿಧಿವಿಧಾನಗಳ ಒಂದು ನೀಲನಕ್ಷೆಯೇ ನಮ್ಮ ಸಂವಿಧಾನ” ಎಂದು ವಿವರಿಸಿದರು.

Advertisements

“ನಮ್ಮ ಸಂವಿಧಾನದ ಆಶಯಗಳು ಕನ್ನಡ ಸಾಹಿತ್ಯದಲ್ಲಿ ಹೇಗೆ ಧ್ವನಿಸುತ್ತವೆ ಎಂಬುದನ್ನು ನೋಡುವುದಾದರೆ, ʼಕವಿರಾಜಮಾರ್ಗʼ ಕನ್ನಡದ ಮೊಟ್ಟಮೊದಲ ಗ್ರಂಥದಲ್ಲಿರುವ ‘ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಂ ಪರಧರ್ಮುಮಂ’ ಎಂಬ ಮಾತು ಸಾಕ್ಷಿಯಾಗಿದೆ. ಕಸವರ ಎಂದರೆ ಚಿನ್ನ, ಬಂಗಾರ. ನಮ್ಮ ಬದುಕು ಬಂಗಾರವಾಗುವುದು ಹೇಗೆಂದರೆ ನಮ್ಮ ನೆರೆಹೊರೆಯವರ ವಿಚಾರವನ್ನೂ, ಅವರ ಧರ್ಮವನ್ನೂ ಸಹನೆಯಿಂದ ನೋಡಿದಾಗ ಮಾತ್ರ. ಇಲ್ಲಿ ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ಎರಡು ನೀತಿಸಂಹಿತೆಯನ್ನು ಇವು ಆಗಲೇ ಹೇಳಿವೆ. ಜಾತಿ, ಧರ್ಮ, ಲಿಂಗ, ಗಡಿ, ಭಾಷೆಯೆಲ್ಲವನ್ನೂ ಮೀರಿ ಭಾರತೀಯರೆಲ್ಲರೂ ಒಂದು ಎಂಬುದನ್ನು ಸಂವಿಧಾನ ಹೇಳುತ್ತದೆ” ಎಂದು ತಿಳಿಸಿದರು.

“ಭಾರತೀಯರೆಲ್ಲರೂ ಒಂದು ಎಂಬುದನ್ನು ಕವಿರಾಜಮಾರ್ಗ ಅಂದೇ ಹೇಳಿರುವುದು ಗಮನಾರ್ಹ. ಪಂಪ ಮಹಾಕವಿ ತನ್ನ ಕಾವ್ಯದಲ್ಲಿ ʼಮನುಷ್ಯಕುಲಂ ತಾನೋಂದೆ ವಲಂʼ ಎಂದಂತೆ, ನಮ್ಮ ಸಂವಿಧಾನವೂ ಭಾರತದ ಮನುಷ್ಯಕುಲವನ್ನೆಲ್ಲ ಒಂದುಯೆಂದು ಭಾವಿಸುತ್ತದೆ. ನಮ್ಮ ಸಂವಿಧಾನ ಅಕ್ಷರಸ್ಥರಿಗೂ, ಅನಕ್ಷರಸ್ಥರಿಗೂ ಸಮಾನ ಹಕ್ಕುಬಾಧ್ಯತೆಗಳನ್ನು ನೀಡಿದೆ. ಅನಕ್ಷರಸ್ಥರಿಗೂ ಅಕ್ಷರಸ್ಥರಿಗೂ ಒಂದೇ ಓಟು. ನಮಗೆ ವಿದ್ಯೆಯಿದೆಯೆಂದು ಅಹಂಕಾರಪಡಬಾರದು. ಅನಕ್ಷರಸ್ಥರು ಓದು ಬಾರದಿದ್ದರೂ ನಮಗಿಂತ ವಿವೇಕಿಗಳಾಗಿರಬಹುದು. ಪ್ರತಿಭಾವಂತರಾಗಿರಬಹುದು. ಅವರು ರಚಿಸಿದ ಅಪೂರ್ವ ಜನಪದ ಸಾಹಿತ್ಯವೇ ಇದಕ್ಕೆ ಉದಾಹರಣೆ” ಎಂದರು.

“ಹನ್ನೊಂದನೇ ಶತಮಾನದ ಮೊದಲ ವಚನಕಾರ ಜೇಡರ ದಾಸೀಮಯ್ಯ ತನ್ನದೊಂದು ವಚನದಲ್ಲಿ, ‘ಮೊಲೆ ಮೂಡಿ ಬಂದಡೆ ಹೆಣ್ಣೆಂಬರು, ಗಡ್ಡ ಮೀಸೆ ಬಂದಡೆ ಗಂಡೆಂಬರು, ನಡುವೆ ಸುಳಿವ ಆತ್ಮನು ಗಂಡೂ ಅಲ್ಲ, ಹೆಣ್ಣೂ ಅಲ್ಲ’ವೆಂದು ಹೇಳುತ್ತಾರೆ. ಗಂಡು ಮತ್ತು ಹೆಣ್ಣು ಬಾಹ್ಯರೂಪದಲ್ಲಿ ಮಾತ್ರ ಭಿನ್ನ. ಅವರ ಪ್ರತಿಭೆ, ಚೈತನ್ಯ ಎಲ್ಲವೂ ಇಬ್ಬರಲ್ಲೂ ಇವೆ. ಯಾವುದೇ ತಾರತಮ್ಯವಿಲ್ಲ. ಲಿಂಗಭೇದ ಸಲ್ಲದು. ನಮ್ಮ ಸಂವಿಧಾನ ಗಂಡು-ಹೆಣ್ಣಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಮುಂದೆ ಬಸವಣ್ಣ, ಅಕ್ಕಮಹಾದೇವಿಯಂತಹ ವಚನಕಾರರು, ಕನಕ-ಪುರಂದರರಂತಹ ದಾಸರು, ಮುಂದೆ ಬಂದ ಕುಮಾರವ್ಯಾಸನ್ನೂ ಒಳಗೊಂಡಂತೆ ಕುವೆಂಪು, ದೇವನೂರು ಮಹಾದೇವ ಅವರವರೆಗೂ ನೂರಾರು ಕವಿಗಳು, ಸಾಹಿತಿಗಳು ಮನುಷ್ಯನ ಘನತೆಯನ್ನು, ಎತ್ತಿಹಿಡಿಯುವ ಸಮಾನತೆ, ಸಹಬಾಳ್ವೆಯ ತತ್ವಗಳನ್ನು ತಮ್ಮ ಸಾಹಿತ್ಯದಲ್ಲಿ ಪಡಿಮೂಡಿಸಿದ್ದಾರೆ. ಹೀಗೆ ನಮ್ಮ ಕನ್ನಡ ಸಾಹಿತ್ಯವು ಭಾರತದ ಸಂವಿಧಾನ ಇಂದು ಒಳಗೊಂಡಿರುವ ಆಶಯಗಳನ್ನು ಆಗಲೇ ತನ್ನ ಸಾಹಿತ್ಯದ ಮೂಲಕ ಧ್ವನಿಸಿರುವುದು ಮಹತ್ವದ ಸಂಗತಿ” ಎಂದು ನಿರೂಪಿಸಿದರು.

ಲೇಖಕ ಎ ಆರ್ ಮಣಿಕಾಂತ್ ಅವರು ಬರೆದ ‘ಸೈಕಲ್ ರಿಕ್ಷಾದವನ ಮಗ ಐಎಎಸ್ ಮಾಡಿದ’ ಎಂಬ ಲೇಖನದಲ್ಲಿ ಅತ್ಯಂತ ಕಡುಬಡವ ಗೋವಿಂದ ಜೈಸ್ವಾಲನು ಐಎಎಸ್ ಆದ ಕಥೆಯಿದೆ. ಇದರಲ್ಲಿ ಲೇಖಕರು, ʼಸಾಧನೆಗೆ ಅಸಾಧ್ಯವಾದುದು ಯಾವೂದೂ ಇಲ್ಲ. ಛಲವಿದ್ದರೆ, ಕಣ್ಮುಂದೆ ಒಂದು ಗುರಿಯಿದ್ದರೆ ಕಠಿಣ ಪರಿಶ್ರಮವೂ ಜತೆಗಿದ್ದರೆ ಆಕಾಶದಷ್ಟೇ ಎತ್ತರವಿರುವ ಗೌರಿಶಂಕರನನ್ನೂ ಹತ್ತಬಹುದು. ಚಂದ್ರಲೋಕಕ್ಕೂ ಹೋಗಿ ಬರಬಹುದುʼ ಅಂತ ಹೇಳುತ್ತಾರೆ. ಆದರೆ ನಾವು ಅರಿಯಬೇಕಾದದ್ದು ಏನೆಂದರೆ ಇಂತಹ ಅಪರಿಮಿತ ಸಾಧನೆ, ಛಲ, ಪರಿಶ್ರಮ ಎಲ್ಲವೂ ಇದ್ದರೂ ಕೂಡಾ ಇನ್ನೊಂದು ಬಹಳ ಮಹತ್ವದ್ದು ಇಲ್ಲದಿದ್ದರೆ ಛಲ, ಸಾಧನೆ, ಪರಿಶ್ರಮ ಯಾವುದೂ ಉಪಯೋಗಕ್ಕೆ ಬರುವುದಿಲ್ಲ. ಅದೇನೆಂದರೆ ಪ್ರಜಾಪ್ರಭುತ್ವ ಮತ್ತು ಇದರ ಧರ್ಮಗ್ರಂಥ ಅಂಬೇಡ್ಕರ್ ರಚಿಸಿದ ಸಂವಿಧಾನ” ಎಂದರು.

ಈ ಸುದ್ದಿ ಓದಿದ್ದೀರಾ? ಧಾರವಾಡದ ಮುಸಲ್ಮಾನರು ಸ್ವಾತಂತ್ರ್ಯಕ್ಕಾಗಿ ಬಲಿದಾನವಾಗಿದ್ದಾರೆ: ಮಹದೇವ ಹೊರಟ್ಟಿ

“ಸಂವಿಧಾನವಿಲ್ಲದಿದ್ದರೆ ಲಾಗಾಯ್ತಿನಿಂದ ಶಿಕ್ಷಣದ ಅವಕಾಶ ಪಡೆದ ಜಾತಿಯವರು ಮಾತ್ರ ಐಎಎಸ್, ಐಪಿಎಸ್ ಮಾಡುತ್ತಿದ್ದರು. ಆದರೆ ನಮ್ಮ ಭಾರತ ಸಂವಿಧಾನದಿಂದ ಇಲ್ಲಿ ಯಾವ ಜಾತಿ, ಜನಾಂಗದವರು ಬೇಕಾದರೂ ಐಎಎಸ್ ಪಾಸು ಮಾಡಿ ಜಿಲ್ಲಾಧಿಕಾರಿಯಾಗಬಹುದು. ಅಷ್ಟೇ ಅಲ್ಲ, ಕುರಿ ಕಾಯುವ ಜಾತಿಯಿಂದ ಬಂದವರು ಮುಖ್ಯಮಂತ್ರಿಯಾಗಬಹುದು, ಟೀ ಮಾರುವವರು ಪ್ರಧಾನ ಮಂತ್ರಿಯಾಗಬಹುದು, ದಿನಬೆಳಿಗ್ಗೆ ಪೇಪರ್ ಹಂಚುತ್ತಿದ್ದ ಹುಡುಗ ರಾಷ್ಟ್ರಪತಿಯಾಗಬಹುದು. ಇದೆಲ್ಲವೂ ಸಾಧ್ಯವಾಗಿರುವುದು ನಮ್ಮ ಸಂವಿಧಾನದಿಂದ” ಎಂದು ತಿಳಿಸಿದರು.

ಪ್ರಜಾಪ್ರಭುತ್ವವನ್ನು ಸಾಧಿಸುವುದೇ ಸ್ವಾತಂತ್ರ್ಯಪೂರ್ವದ ಭಾರತೀಯರ ಕನಸಾಗಿತ್ತು. ಈ ಕನಸುಗಳಿಗೆ ಜೀವ ಕೊಟ್ಟವರು ನಮ್ಮ ಕವಿ, ಸಾಹಿತಿಗಳು. ಭಾರತ ಸ್ವಾತಂತ್ರ್ಯ ಪಡೆದ ನಂತರ ಇವರು ನಮ್ಮ ದೇಶ ಹೇಗಿರಬೇಕೆಂದು ಕನಸು ಕಂಡರು. ಇವರ ದೃಷ್ಟಿಯಲ್ಲಿ ದೇಶವೆಂದರೆ ಕೇವಲ ಒಂದು ಭೂಪಟವಲ್ಲ. ಇಲ್ಲಿ ಬಾಳಿ ಬದುಕುವ ಜೀವಂತ ಜನ. ಇವರು ತಮ್ಮ ಸಾಹಿತ್ಯದ ಮೂಲಕ ಒಂದು ಅಲಿಖಿತ ಭಾರತದ ಸಂವಿಧಾನವನ್ನೇ ರೂಪಿಸಿಬಿಟ್ಟರು. ಇದರಲ್ಲಿ ಕನ್ನಡ ಸಾಹಿತ್ಯದ ಪಾಲೂ ಗಣನೀಯವಾಗಿದೆ. ನಮ್ಮ ಸಂವಿಧಾನ ರಚನಾ ಕತೃಗಳಿಗೆ ಭಾರತೀಯ ಸಾಹಿತ್ಯವೂ ಪ್ರೇರಣೆ ಕೊಟ್ಟಿರಬೇಕು” ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ಡಾ. ಸರ್ವೇಶ್ ಬಿ ಎಸ್ ಅವರು ಅತಿಥಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ್ ಎನ್ ಅವರು ಆಶಯ ನುಡಿಗಳನ್ನಾಡಿದರು. ಕಾರ್ಯಕ್ರಮದ ಸಂಯೋಜಕ ಪ್ರಾಧ್ಯಾಪಕ ಡಾ. ಕುಪ್ಪನಹಳ್ಳಿ ಎಂ ಭೈರಪ್ಪ, ಸಹಸಂಚಾಲಕ ಪ್ರಾಧ್ಯಾಪಕ ಡಾ.ಸೈಯದ್ ಮುಯಿನ್, ಡಾ ರವಿಶಂಕರ್ ಎ ಕೆ, ಡಾ.ಪ್ರೇಮಕುಮಾರ್ ಕೆ, ಡಾ. ಕಿರಣಕುಮಾರ್ ಎಚ್ ಜಿ, ವಿದ್ಯಾರ್ಥಿ ಸಂಚಾಲಕ ಮಧು, ಕನ್ನಡ ಸಾಹಿತ್ಯ ವೇದಿಕೆಯ ಸಂಚಾಲಕ ಹರ್ಷಿತ, ಗುರುಕಿರಣ್ ಸೇರಿದಂತೆ 200ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

Download Eedina App Android / iOS

X