ಯುವಕರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕಿದ್ದು, ಹೊಟೇಲ್, ಬಟ್ಟೆ ಅಂಗಡಿ ಪ್ರತಿ ಬೀದಿಯಲ್ಲಿ ಇರುವಂತೆ ಪುಸ್ತಕದ ಅಂಗಡಿಗಳನ್ನೂ ತೆರೆಯಬೇಕಾದ ಅವಶ್ಯಕತೆ ಇದೆ ಎಂದು ವೀರಲೋಕ ಬುಕ್ಸ್ ಬೆಂಗಳೂರಿನ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅಭಿಪ್ರಾಯಪಟ್ಟರು.
ಬೀದರ್ ನಗರದಲ್ಲಿ ವೀರಲೋಕ ಬುಕ್ಸ್ ಬೆಂಗಳೂರು ಮತ್ತು ಅತಿವಾಳೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಡೆದ ‘ದೇಸಿ ಜಗಲಿ ಕಥಾಕಮ್ಮಟ’ದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
“ಹಳ್ಳಿಗಳಲ್ಲೂ ಕುವೆಂಪು, ಬೇಂದ್ರೆ ಅವರಂತಹ ಕಥೆಕಾಗಾರರು ಸಿಗಬಹುದು ಎಂಬ ನಿಟ್ಟಿನಲ್ಲಿ ಹಲವು ಜಿಲ್ಲೆಗಳಲ್ಲಿ ಕಥಾ ಕಮ್ಮಟ ಏರ್ಪಡಿಸಿ, ಕಥೆ ಕಾದಂಬರಿಕಾರರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ನಾವು ಈವರೆಗೆ ಒಂದು ವರ್ಷದಲ್ಲಿ 44 ಕೃತಿಗಳನ್ನು ಪ್ರಕಟಣೆ ಮಾಡಿದ್ದೇವೆ. ಕಥಾಕಾರರಿಗೆ ವೀರಲೋಕ ಸೇತುವೆಯಾಗಿ ಕಾರ್ಯ ಮಾಡಲಿದೆ. ಆದ್ದರಿಂದ ಜಿಲ್ಲೆಯಲ್ಲಿನ ಕಥಾಕಾರರು ಹೆಚ್ಚು ಹೆಚ್ಚು ಬೆಳಕಿಗೆ ಬರಬೇಕು” ಎಂದು ನುಡಿದರು.
“ವಿದೇಶದಲ್ಲಿ ಒಬ್ಬ ಕವಿ ತನ್ನ ಸಾಹಿತ್ಯ ಬರೆಯಲು ಆರಂಭಿಸಿದರೆ ಆ ಕೃತಿ ಖರೀದಿಸಲು ಆರು ತಿಂಗಳು ಮೊದಲೇ ಬುಕಿಂಗ್ ಆರಂಭವಾಗುತ್ತವೆ. ಆದರೆ, ನಮ್ಮಲ್ಲಿ ಕೃತಿ ರಚಿಸಿ, ಮನೆಯಲ್ಲಿಟ್ಟು, ಕೈಯಲ್ಲಿ ಹಿಡಿದುಕೊಂಡು ಓಡಾಡಿದರೂ ಯಾರೂ ಖರೀದಿಸುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಥೆಗಾರ ಬಾಳಾಸಾಹೇಬ ಲೋಕಾಪುರ ಮಾತನಾಡಿ, “ಕಥೆ ಎಂದರೆ ವ್ಯಕ್ತಿಯ ಸಂವೇದನೆ. ತನ್ನ ವೈಯಕ್ತಿಕ ವೇದನೆಗಳೇ ಕಥೆಯಾಗಿ ಮಾರ್ಪಡುತ್ತವೆ. ನಮ್ಮ ವೇದನೆ ಕೇಳಿ ಜನರ ಕಣ್ಣಲ್ಲಿ ನೀರು ಬಂದರೆ ಅದೇ ಕಥೆ. ಜನರ ಹೃದಯಕ್ಕೆ ಮುಟ್ಟಿದರೆ ಅದೇ ಕಥೆ. ಅಂತಹ ಗಟ್ಟಿ ಸಾಹಿತ್ಯದ ಕಥೆಗಳನ್ನು ರಚಿಸಬೇಕು” ಎಂದು ಸಲಹೆ ನೀಡಿದರು.
ಅತಿವಾಳೆ ಸಾಂಸ್ಕೃತಿಕ ಮತ್ತು ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಡಾ. ಸಂಜೀವಕುಮಾರ ಅತಿವಾಳೆ ಮಾತನಾಡಿ, “ಬೀದರ್ ಜಿಲ್ಲೆಯ ಉದಯೋನ್ಮುಖ ಕಥೆಗಾರರಿಗೆ ಇನ್ನೂ ಹೆಚ್ಚಿನ ಸಹಕಾರವಾಗಲೆಂದು ಈ ಕಥಾಕಮ್ಮಟ ಏರ್ಪಡಿಸಲಾಗಿದೆ. ಆಸಕ್ತರು ಎರಡು ದಿನಗಳ ಕಾಲ ನಡೆಯುವ ಈ ದೇಸಿ ಜಗಲಿ ಕಥಾಕಮ್ಮಟದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಕಾರ್ಮಿಕರಿಗೆ ಭೂಮಿ ನೀಡುವಂತೆ ಗ್ರಾಕೂಸ ಆಗ್ರಹ
ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗುರುನಾಥ ರಾಜಗಿರಾ ಮಾತನಾಡಿ, “ಕಥೆ ಹೇಗಿರಬೇಕು? ಹೇಗೆ ರಚಿಸಬೇಕು ಎಂಬುದನ್ನು ತಿಳಿಸುವುದೇ ಈ ಕಥಾಕಮ್ಮಟದ ಉದ್ದೇಶ. ವೀರಲೋಕ ಬುಕ್ಸ್ ಅಧ್ಯಕ್ಷ ಶ್ರೀನಿವಾಸ ಅವರು ಕೋಟ್ಯಧಿಪತಿ ಆದರೂ ಪುಸ್ತಕ ಸಂಸ್ಕೃತಿ ಬೆಳೆಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಸಾಹಿತ್ಯ ಮಾನವೀಯ ಪಂಥದ ಆಧಾರದ ಮೇಲೆ ರಚನೆಯಾಗಬೇಕು” ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಕಥೆಗಾರರಾದ ಗುರುನಾಥ ಅಕ್ಕಣ್ಣ, ಶಿವಕುಮಾರ ನಾಗವಾರ, ಸಾಹಿತಿಗಳಾದ ರಜಿಯಾ ಬಳಬಟ್ಟಿ, ಡಾ. ರಾಮಚಂದ್ರ ಗಣಾಪುರ, ಅವಿನಾಶ ಸೋನೆ, ಲಕ್ಷ್ಮಿ ಮೇತ್ರೆ ಹಾಗೂ ಇತರರು ಇದ್ದರು.