“ಮಹಿಳೆಯರ ಶಿಕ್ಷಣಕ್ಕೆ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಬಹಳ ದೊಡ್ಡದು. ಇದು ಸಾಕ್ಷರತೆ ಹೆಚ್ಚಲು ಕಾರಣವಾಯಿತು” ಎಂದು ಚಿತ್ರದುರ್ಗ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂಆರ್ ಮಂಜುನಾಥ್ ಸ್ಮರಿಸಿದರು.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಕ್ಲಸ್ಟರ್ ಮಟ್ಟದ ತರಾಸು ಶಿಕ್ಷಕರ ವೇದಿಕೆಯು ಶಾದಿ ಮಹಲ್ ನಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಪುಲೆ ಜಯಂತಿ ಹಾಗೂ ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು “ಸಾವಿತ್ರಿಬಾಯಿ ಫುಲೆ ಅವರು 150 ವರ್ಷಗಳ ಹಿಂದೆಯೇ ಶಿಕ್ಷಣದ ಮಹತ್ವ ಅರಿತಿದ್ದರು. ಅದನ್ನು ದಾಸೋಹದ ರೂಪದಲ್ಲಿ ಮಹಿಳೆಯರಿಗೆ ಹಂಚಿದ್ದರಿಂದ ಹೆಚ್ಚಿನ ಜನರು ಶಿಕ್ಷಣ ಪಡೆಯಲು ಸಾಧ್ಯವಾಯಿತು. ವಿಶೇಷವಾಗಿ ಮಹಿಳೆಯರು ಅನೇಕ ರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.

“ಸಾವಿತ್ರಿಬಾಯಿ ತಮ್ಮ 17ನೇ ವಯಸ್ಸಿನಲ್ಲಿ ಶಾಲೆ ಆರಂಭಿಸಿದ್ದರು. ಅದಕ್ಕೆ ಸಾಕಷ್ಟು ವಿರೋಧವಿತ್ತು. ಸಾವಿತ್ರಿಬಾಯಿ ಅವರು ಆ ಕಾಲದಲ್ಲಿ ಶಿಕ್ಷಣ ಕೊಡಲು ಮುಂದಾದಾಗ ಜನ ಕಲ್ಲಿನಿಂದ ಅವರಿಗೆ ಹೊಡೆಯುತ್ತಿದ್ದರು. ಆದರೂ ವಿರೋಧಗಳ ನಡುವೆಯೂ ಶಿಕ್ಷಣ ಕೊಡುವುದನ್ನು ಬಿಡಲಿಲ್ಲ. ಆಗ ಅವರ ಪತಿ ಜ್ಯೋತಿಬಾ ಫುಲೆ ಅವರ ಬೆನ್ನಿಗೆ ನಿಂತು ಬೆಂಬಲಿಸಿದ್ದರು. ಇಂದು ಜನ ಅವರ ತ್ಯಾಗ ನೆನೆದು ಅವರ ಭಾವಚಿತ್ರಕ್ಕೆ ಹೂಮಳೆಗರೆಯುತ್ತಿದ್ದಾರೆ. ಇದೇ ಶಿಕ್ಷಣಕ್ಕಿರುವ ದೊಡ್ಡ ಶಕ್ತಿ’. ಆರಂಭದಲ್ಲಿ ಅವರ ಶಾಲೆಯಲ್ಲಿ ಎಂಟು ಮಕ್ಕಳಷ್ಟೇ ಇದ್ದರು. ನಂತರ ಆ ಸಂಖ್ಯೆ 500ರ ಗಡಿ ದಾಟಿತು. ದೇಶದ ಮೊದಲ ಅನಾಥಾಶ್ರಮ, ವಿಧವಾ ಆಶ್ರಮ, ಕೂಲಿ ಕಾರ್ಮಿಕರ ಮಕ್ಕಳಿಗೆ ರಾತ್ರಿ ಶಾಲೆ ತೆರೆದವರು ಸಾವಿತ್ರಿಬಾಯಿ. ಪ್ಲೇಗ್ ರೋಗ ಬಂದಾಗ ಗಂಜಿ ಕೇಂದ್ರ ತೆರೆದಿದ್ದರು”ಎಂದು ಸ್ಮರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಮಾತನಾಡಿ “ಇಂದಿನ ಹೊಸ ಶಿಕ್ಷಣ ನೀತಿಯಲ್ಲಿನ ಅನೇಕ ವಿಚಾರಗಳನ್ನು ಸಾವಿತ್ರಿಬಾಯಿ ಅಂದಿನ ಕಾಲದಲ್ಲೇ ಹೇಳಿದ್ದರು. ಪ್ರಚಾರದ ಕೊರತೆಯಿಂದ ಅವರು ಬೆಳಕಿಗೆ ಬಂದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಂಶೋಧನೆ, ಪುಸ್ತಕದ ಮೂಲಕ ದಾಖಲಿಸುವ ಉತ್ತಮ ಕೆಲಸ ನಡೆಯುತ್ತಿದೆ. ಎಂದು ಅಭಿಪ್ರಾಯ ಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಗರದಲ್ಲಿ ಪೊಲೀಸ್ ಇಲಾಖೆಯ
ಪೊಲೀಸರೊಂದಿಗೆ ಮ್ಯಾರಥಾನ್ 2025.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಟಿ ವೀರೇಶ್ ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ ಸುರೇಶ್, ಪಿ ರಾಜಣ್ಣ, ಜಾಕೀರ್ ಹುಸೇನ್, ಮಾರುತಿ ಭಂಡಾರಿ, ತಿಪ್ಪೇಸ್ವಾಮಿ, ಕೃಷ್ಣಮೂರ್ತಿ, ಅಶೋಕ್, ಪ್ರಹ್ಲಾದ್, ಪಿಡಿಒ ಓಬಣ್ಣ, ಶಶಿರಾಜ್, ಮಾರಣ್ಣ, ಜಯಲಕ್ಷ್ಮಿ, ರಾಧಾಮಣಿ, ಸುಜಾತ, ಸೌಭಾಗ್ಯಮ್ಮ, ತಿಪ್ಪಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.