ಕೆಬಿಜೆಎನ್ಎಲ್ ಬೋರ್ಡ್ ಸಭೆಯ ನಡಾವಳಿಗಳನ್ನು ಕೂಡಲೇ ತರಿಸಿಕೊಂಡು ಮಲ್ಲಾಬಾದ್ ಏತ ನೀರಾವರಿ ಕಾಮಗಾರಿ ಟೆಂಡರ್ ಆದೇಶಪ್ರತಿ ನೀಡಬೇಕು ಎಂದು ಒತ್ತಾಯಿಸಿ ಮಲ್ಲಾಬಾದ್ ಏತ ನೀರಾವರಿ ರೈತ ಹೋರಾಟ ಸಮಿತಿಯಿಂದ ಉಪ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ಡಾ. ಮಹೇಶಕುಮಾರ ರಾಠೋಡ ಮಾತನಾಡಿ, “ಕಳೆದ ನಾಲ್ಕು ದಶಕದ ಹೋರಾಟದ ಪ್ರತಿಫಲವಾಗಿ ಆರಂಭಗೊಂಡಿರುವ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಕಾಮಗಾರಿ ಸರ್ಕಾರದ, ಅಧಿಕಾರಿಗಳ ಹಾಗೂ ಶಾಸಕರ ಬೇಜವಾಬ್ದಾರಿತನದಿಂದಾಗಿ ಸ್ಥಗಿತಗೊಂಡಿದೆ. ಈ ಕಾಮಗಾರಿಗಳ ಟೆಂಡರ್ ಕರೆದು ಕೆಲಸ ಪ್ರಾರಂಭಿಸಬೇಕೆಂದು ಹಲವು ಹಂತಗಳಲ್ಲಿ ನಿರಂತರ ಹೋರಾಟ ನಡೆಸಿದ ಪ್ರತಿಫಲವಾಗಿ, ಮಾರ್ಚ್ 7ರಂದು 138ನೇ ಮಂಡಳಿ ಸಭೆಯಲ್ಲಿ ಮಲ್ಲಾಬಾದ್ ಏತ ನೀರಾವರಿಯ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ₹330.40 ಕೋಟಿ ಅನುಮೋದನೆ ದೊರೆತಿತ್ತು. ಆದರೂ ಸಮಯಕ್ಕೆ ಸರಿಯಾಗಿ ಸಕ್ರಿಯವಾಗಿ ಕೆಲಸ ಮಾಡದ ಅಧಿಕಾರಿಗಳು ಮತ್ತು ಸರ್ಕಾರದ ವಿಳಂಬ ನೀತಿಯಿಂದಾಗಿ, ಅದೇ ಕೆಲಸಕ್ಕೆ ಈಗ ₹359.67 ಕೋಟಿ ಬೇಕಾಗಿದೆ, ಸರ್ಕಾರದ ಮೇಲೆ ಹೆಚ್ಚುವರಿಯಾಗಿ ₹32.67 ಕೋಟಿ ಹೊರೆಯಾಗಿದೆ” ಎಂದು ಆರೋಪಿಸಿದರು.
“ಬೆಳಗಾವಿ ಅಧಿವೇಶದ ಸಂದರ್ಭದಲ್ಲಿ ಮಲ್ಲಾಬಾದ ಏತ ನೀರಾವರಿ ರೈತ ಹೋರಾಟ ಸಮಿತಿಯು ನಡೆಸಿದ ರೈತರ ಬೃಹತ್ ಹೋರಾಟದ ಪ್ರತಿಫಲವಾಗಿ ಹೋರಾಟಕ್ಕೆ ಸ್ಪಂದಿಸಿದ ಸರಕಾರ ಕಳೆದ ಕೆ.ಬಿ.ಜೆ.ಎನ್.ಎಲ್. ಬೋರ್ಡ ಸಭೆಯಲ್ಲಿ 359.67 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಅನುಮೋದನೆ ಕೊಟ್ಟರೂ ಸಂಬಂಧಿಸಿದ ಅಧಿಕಾರಿಗಳಿಗೆ ಸಭೆಯ ನಡಾವಳಿಗಳು, ಮತ್ತು ಟೆಂಡರ್ ಕರೆಯಬೇಕೆನ್ನುವ ಆದೇಶ ಬರದೇ ಇರುವ ಕಾರಣ ಟೆಂಡರ್ ಪ್ರಕ್ರೀಯೆ ವಿಳಂಭವಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಗಂಗಾವತಿ | ಅತ್ಯಾಚಾರ ಪ್ರಕರಣ; ಪರಾರಿಯಾಗಿದ್ದ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿದ ಪೊಲೀಸರು
“2023 ರ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಯಡ್ರಾಮಿಯಲ್ಲಿ ಭಾಷಣ ಮಾಡಿದ ಮಾನ್ಯ ಮುಖ್ಯಮಂತ್ರಿಗಳು ಕಾಂಗ್ರಸ್ ಪಕ್ಷ ಅಧಿಕಾರಕ್ಕೆ ಬಂದರೆ 24 ಘಂಟೆಗಳ ಒಳಗಾಗಿ ಮಲ್ಲಾಬಾದ ಏತ ನಿರಾವರಿ ಕಾಮಗಾರಿ ಟೆಂಡರ್ ಕರೆಯುವ ಪ್ರಕ್ರಿಯೆ ಪ್ರಾರಂಭಿಸಲಾಗುವದೆಂದು ಹೇಳಿದ್ದರು. ಆದರೆ ಇದುವರೆಗೆ ಕೆಲಸ ಆರಂಭವಾಗದೇ ಇರುವದು ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳುವ ತಮ್ಮ ಸರಕಾರಕ್ಕೆ ಶೋಭೆ ತರುವಂತಹದ್ದಲ್ಲ. ಹಾಗಾಗಿ ಮಲ್ಲಾಬಾದ್ ಏತ ನೀರಾವರಿ ಯೋಜನೆ ವ್ಯಾಪ್ತಿಯ ಬಾಕಿ ಕಾಮಗಾರಿಗಳ ಟೆಂಡರ್ ಅದೇಶ ಹೊರಡಿಸಬೇಕು” ಎಂದು ಒತ್ತಾಯಿಸಿದರು.
ಮಹಮ್ಮದ್ ಚೌದ್ರಿ ಕೊಡಚಿ, ಬಾಬು ಬಿ ಪಾಟೀಲ್, ಇಬ್ರಾಹಿಂ ಪಟೇಲ್ ಯಾಳವಾರ, ವಜೀರ ಪಟೇಲ್ ಸಿಗರತಳ್ಳಿ ಇದ್ದರು.