ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಮಾಟಕೂಟವೆಂಬ ಕೀರ್ತಿವಾರ್ತೆ
ತನುವಿನಲ್ಲಿ ತನು ಸವೆಯದು,
ಮನದಲ್ಲಿ ಮನ ಸವೆಯದು,
ಧನದಲ್ಲಿ ಧನ ಸವೆಯದು.
ಭಕ್ತಿಯುಕ್ತಿಯ ಮಾತು ನಿನಗೇಕೆ ಹೇಳಾ ಬಸವಾ?
ಮಾಟಕೂಟವೆಂಬ ಕೀರ್ತಿವಾರ್ತೆಗೆ ಸಿಲುಕಿ ಜಂಗಮವೆ ಲಿಂಗವೆಂಬುದ ಮರೆತೆಯೆಲ್ಲಾ ಬಸವಣ್ಣಾ.
ಗುಹೇಶ್ವರನ ಶರಣರಿಗೆ ತ್ರಿಕರಣವನೊಪ್ಪಿಸಿದಲ್ಲದೆ ಭಕ್ತನಾಗಬಾರದು ಕಾಣಾ ಸಂಗನಬಸವಣ್ಣಾ.
ಪದಾರ್ಥ:
ಮಾಟಕೂಟ = ಪವಾಡ
ಕೀರ್ತಿವಾರ್ತೆ = ಪ್ರಸಿದ್ಧ
ತ್ರಿಕರಣ = ತನು, ಮನ, ಮಾತು
ವಚನಾರ್ಥ:
ಬಸವಣ್ಣನು ಕಲ್ಯಾಣದಲ್ಲಿ ತಾನು ಸ್ಥಾಪಿಸಿದ್ದ ಅನುಭವ ಮಂಟಪಕ್ಕೆ ಅಧ್ಯಕ್ಷನಾಗಲು ಅಲ್ಲಮನನ್ನು ಆಹ್ವಾನಿಸಲು ಬಂದಾಗ ಬಸವಣ್ಣನ ವ್ಯಕ್ತಿತ್ವವನ್ನು ಪರೀಕ್ಷಿಸಲು ಅಲ್ಲಮ ನಡೆಸುವ ನೇರ ಸಂದರ್ಶನ ಸಂವಾದ ಈ ವಚನದಲ್ಲಿದೆ. ತನು ಮನ ಧನಗಳನ್ನು ತನಗಾಗಿ ಸವೆಸುತ್ತಾ ಭಕ್ತಿ ಎಂಬ ಯುಕ್ತಿಯ ಮಾಡುತ್ತಿದ್ದೀಯ ಬಸವಾ ಎಂದು ಅಲ್ಲಮ ಬಸವಣ್ಣನನ್ನು ಮೂದಲಿಸುವ ಪ್ರಸಂಗ ಇಲ್ಲಿದೆ. ಅನುಭವ ಮಂಟಪದ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವ ಮುನ್ನ ಬಸವಣ್ಣನನ್ನು ಅಲ್ಲಮ ಪ್ರಶ್ನಿಸಿರುವ ಹಲವಾರು ವಚನಗಳಿವೆ. “ಪ್ರಶ್ನಿಸದೆ ಏನನ್ನೂ ಒಪ್ಪಬೇಡಿ” ಎಂದು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಎಚ್. ನರಸಿಂಹಯ್ಯನವರು ಬರೆಸಿರುವ ಸಂದೇಶ ವಾಕ್ಯ ಇಲ್ಲಿ ಉಲ್ಲೇಖಾರ್ಹವಾಗುತ್ತದೆ. ಬಸವಣ್ಣನ ಉತ್ತರದಿಂದ ತೃಪ್ತನಾದ ಅಲ್ಲಮಪ್ರಭು ಮುಂದೆ ಅನುಭವಮಂಟಪದ ಅಧ್ಯಕ್ಷನಾಗಿ ಶೂನ್ಯಸಿಂಹಾಸನಾಧೀಶ್ವರನಾದದ್ದು ಇತಿಹಾಸ.
ಪದಪ್ರಯೋಗಾರ್ಥ:
ಬಸವಣ್ಣನ ಜನಪ್ರಿಯತೆ ಹೆಚ್ಚಿದಂತೆಲ್ಲ ಮಾನವನಾಗಿದ್ದ ಬಸವಣ್ಣ ಜನಸಾಮಾನ್ಯರ ದೃಷ್ಟಿಯಲ್ಲಿ ದೇವಮಾನವನಾದ. ಬಸವಣ್ಣ ಪವಾಡ ಪುರುಷ ಎಂದು ಜನ ನಂಬಲಾರಂಭಿಸಿದರು. ಬಸವಣ್ಣ ಗಣಿತದಲ್ಲಿ ನಿಸ್ಸೀಮನಾಗಿದ್ದ. ಬಸವಣ್ಣ ನಿರ್ವಹಿಸುತ್ತಿದ್ದ ಇಡೀ ರಾಜ್ಯದ ಆದಾಯ ಖರ್ಚುಗಳ ಲೆಕ್ಕ ತಪ್ಪಿಲ್ಲದೆ ತಾಳೆಯಾಗುತ್ತಿತ್ತು. ಇದನ್ನು ಜನ ಪವಾಡ ಎನ್ನುತಿದ್ದರು. ರಾಜ್ಯ ಖಜಾನೆಯಲ್ಲಿದ್ದ ಹಣ ಬಸವಣ್ಣ ಬರೆಯುತಿದ್ದ ಲೆಕ್ಕಕ್ಕೆ ತಂತಾನೆ ಸರಿದೂಗಿ ಹೊಂದಿಸಿಕೊಳ್ಳುತ್ತದೆ ಎಂಬ ಕಥೆಗಳು ಜನರ ಬಾಯಲ್ಲಿ ಹರಿದಾಡುತ್ತಿದ್ದವು. ಇವೆಲ್ಲ ಮಾಟ ಮಂತ್ರದ ಆಟ ಅನ್ನುವಂತಾಯಿತು. ಬಸವಣ್ಣ ಲೆಕ್ಕ ನಿರ್ವಹಿಸುತ್ತಿದ್ದ ಪರಿ ಒಂದು ತೆರನಾದ ಮ್ಯಾಜಿಕ್ನಂತೆ ಇರುತ್ತಿದ್ದುದನ್ನು ಬೇಂದ್ರೆಯವರು ಬರೆದಿರುವ ಬಸವಣ್ಣನ ಜೀವನಗಾಥೆಯ ನಾಟಕ “ತಲೆದಂಡ”ದಲ್ಲಿ ವರ್ಣಿಸಿದ್ದಾರೆ.
ಜನರ ಇಂತಹ ಕಾಲ್ಪನಿಕ ಕಥೆಗಳಿಂದ ಮಾಟಕೂಟವೆಂಬ ಕೀರ್ತಿವಾರ್ತೆಗೆ ಬಸವಣ್ಣ ಸಿಲುಕಿಹೋದ. ಇದನ್ನೇ ಅಲ್ಲಮನು ಬಸವಣ್ಣನನ್ನು ಮೂದಲಿಸಲು ಬಳಸಿದ ಪದಪ್ರಯೋಗ “ಮಾಟಕೂಟವೆಂಬ ಕೀರ್ತಿವಾರ್ತೆ.” ಮಾಟ, ಕೂಟ, ಕೀರ್ತಿ, ವಾರ್ತೆ ಇವೆಲ್ಲಾ ಬಹಳ ಶಕ್ತಿಶಾಲಿ ಪದಗಳು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.