“ಚಲುವರಾಯಸ್ವಾಮಿ ಜೋಕರ್. ಈ ಜೋಕರ್ ಸಂಸ್ಕೃತಿ ಶುರುವಾಗಿದ್ದೇ ಕಾಂಗ್ರೆಸ್ ಪಕ್ಷದಿಂದ ಎನ್ನುವುದನ್ನು ಆ ವ್ಯಕ್ತಿ ಮರೆಯಬಾರದು. ಅವರು ಎಲ್ಲಿದ್ದರು? ಆಮೇಲೆ ಎಲ್ಲೆಲ್ಲಿ ಹೋದರು? ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ” ಎಂದು ವ್ಯಂಗ್ಯವಾಡಿದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರು ಚಲುವರಾಯಸ್ವಾಮಿ ನೂರಕ್ಕೆ ನೂರರಷ್ಟು ಜೋಕರ್ ಎಂದಿದ್ದಾರೆ.
“ಆತ ನನ್ನನ್ನು ಸಿಎಂ ಮಾಡಿದ ಎನ್ನುವುದು ಬಹುದೊಡ್ಡ ಜೋಕ್. ಶಾಸಕರು ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ಎಂಬುದನ್ನು ಆ ವ್ಯಕ್ತಿ ಮರೆಯಬಾರದು’ ಎಂದು ಸಚಿವ ಚಲುವರಾಯಸ್ವಾಮಿ ಅವರನ್ನು ಟೀಕಿಸಿದ್ದರು.
ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿರುವ ಕೃಷಿ ಸಚಿವರ ಸವಾಲಿಗೆ ಪ್ರತಿಕ್ರಿಯಿಸಿ, “ನಾನು ಆಣೆ ಮಾಡಲು ತಯಾರಿದ್ದೇನೆ. ನಾನು ಸಿಎಂ ಆಗುವಾಗ ಎಂಎಲ್ಎಗಳು ಆ ವ್ಯಕ್ತಿಯನ್ನು ನೋಡಿ ಬಂದ್ರಾ? ಆ ವ್ಯಕ್ತಿಯನ್ನು ಮಂತ್ರಿ ಮಾಡಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬೆಳಗಿನ ಜಾವ ಮೂರು ಗಂಟೆವರೆಗೆ ನಿದ್ರೆ ಮಾಡಲು ಬಿಡುತ್ತಿರಲಿಲ್ಲ ಆ ಆಸಾಮಿ” ಎಂದು ಕೊಂಕು ಮಾತನಾಡಿದ್ದರು.
ಈ ಸುದ್ದಿ ಓದಿದ್ದೀರಾ? ಎಐಸಿಸಿ ಅಧಿವೇಶನಕ್ಕೆ ಗೈರಾಗಲಿರುವ ಪ್ರಿಯಾಂಕಾ ಗಾಂಧಿ
“ಆ ವ್ಯಕ್ತಿಗೆ ಇರುವ ಚಟ ನನಗೆ ಇಲ್ಲ. ಮಂಡ್ಯದಲ್ಲಿ ಆತನ ಚಟಗಳ ಬಗ್ಗೆ ಕೇಳಿದರೆ ಜನ ಹಾದಿ ಬೀದಿಯಲ್ಲಿ ಹೇಳುತ್ತಾರೆ. ಈ ಮನುಷ್ಯ ಎಷ್ಟು ಮನೆ ಹಾಳುಮಾಡಿದ್ದಾರೆ ಎಂಬುದು ನನಗೆ ಗೊತ್ತು” ಎಂದು ಹರಿಹಾಯ್ದಿದ್ದರು.
ಮೈತ್ರಿ ಭದ್ರವಾಗಿದೆ, ಸಮಸ್ಯೆ ಇಲ್ಲ: ಎಚ್ಡಿಕೆ
‘ಜೆಡಿಎಸ್-ಬಿಜೆಪಿ ಮೈತ್ರಿ ಭದ್ರವಾಗಿದೆ. ಯಾರಿಗೂ ಸಂಶಯ ಬೇಡ. ಜೆಡಿಎಸ್-ಬಿಜೆಪಿ ಮೈತ್ರಿ ಸಮನ್ವಯ ಸಮಿತಿ ರಚನೆ ಆಗಬೇಕೆಂದು ಡಿ ವಿ ಸದಾನಂದಗೌಡರೇ ಹೇಳಿದ್ದಾರೆ. ಹಲವಾರು ಹಿರಿಯ ನಾಯಕರೂ ಸಮನ್ವಯ ಸಮಿತಿ ಆಗಬೇಕೆಂದು ಸಲಹೆ ಮಾಡಿದ್ದಾರೆ. ಮೈತ್ರಿಗೆ ಯಾವುದೇ ರೀತಿಯ ಧಕ್ಕೆ ಇಲ್ಲ” ಎಂದು ಕುಮಾರಸ್ವಾಮಿ ಹೇಳಿದರು.