ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ʼಕಾಂತರಾಜ ವರದಿʼಯು ಅಧಿಕೃತ ಮತ್ತು ವೈಜ್ಞಾನಿಕವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಒತ್ತಡಕ್ಕೆ ಮಣಿಯದೇ ವರದಿಯನ್ನು ಅಂಗೀಕರಿಸಬೇಕು ಎಂದು ವಿಜಯಪುರ ಜಿಲ್ಲಾ ಅಹಿಂದ ಮುಖಂಡರು ಆಗ್ರಹಿಸಿದರು.
ವಿಜಯಪುರ ನಗರದಲ್ಲಿ ನಡೆದ ಅಹಿಂದ ಮುಖಂಡರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಪ್ರೊ. ರಾಜು ಆಲಗೂರ, “ರಾಜ್ಯದಲ್ಲಿ ಎಲ್ಲಾ ಜಾತಿಯವರಿಗೂ ಜನಸಂಖ್ಯೆಗನುಗುಣವಾಗಿ ನ್ಯಾಯಯುತ ಸೌಲಭ್ಯಗಳು ದೊರೆಯಬೇಕು. ಕಾಂತರಾಜು ವರದಿಯಲ್ಲಿ ಯಾವುದೇ ಲೋಪಗಳಿಲ್ಲ. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಸರ್ಕಾರ ಸರಿಪಡಿಸಲಿದೆ ಎಂದು ಮುಖ್ಯಮಂತ್ರಿಗಳೂ ಭರವಸೆ ನೀಡಿದ್ದಾರೆ. ಆದಾಗ್ಯೂ ಲಿಂಗಾಯತರು, ಒಕ್ಕಲಿಗ ಮುಖಂಡರು ಕಾಂತರಾಜು ವರದಿ ಅವೈಜ್ಞಾನಿಕವಾಗಿದೆ ಎನ್ನುತ್ತಿರುವುದು ಸರಿಯಲ್ಲ. ಏನಾದರೂ ಆಕ್ಷೇಪಗಳಿದ್ದಲ್ಲಿ ಸರ್ಕಾರದ ಗಮನಕ್ಕೆ ತಂದು ಸರಿಪಡಿಸಿ, ವರದಿ ಜಾರಿಗೆ ಸಹಕರಿಸಬೇಕು” ಎಂದು ಹೇಳಿದರು.
“ಕಾಂತರಾಜು ವರದಿಯನ್ನು ಬಿಜೆಪಿ ವಿರೋಧ ಮಾಡುವುದರಲ್ಲಿ ಅರ್ಥವಿಲ್ಲ. ಆದರೆ, ಸ್ವಾತಂತ್ರ್ಯ ಪೂರ್ವದಲೇ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಜಾರಿಗೆ ತಂದು ದೇಶಕ್ಕೆ ಮಾದರಿಯಾಗಿದ್ದ ಒಡೆಯರ ಮನೆತನಕ್ಕೆ ಸೇರಿದ ಹಾಲಿ ಮೈಸೂರು ಸಂಸದರು ವರದಿಯನ್ನು ವಿರೋಧಿಸಿರುವುದು ವಿಷಾದನೀಯ. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದ ರಾಜಮನೆತಕ್ಕೆ ಸೇರಿದವರು ವಿರೋಧಿಸುವುದರಲ್ಲಿ ಅರ್ಥವಿಲ್ಲ. ಒಂದು ವೇಳೆ ರಾಜ್ಯ ಸರ್ಕಾರ ಬಲಾಢ್ಯ ಜಾತಿಗಳ ಲಾಬಿಗೆ, ಒತ್ತಡಕ್ಕೆ ಮಣಿದು ವರದಿ ಜಾರಿ ಮಾಡಲು ಹಿಂದೇಟು ಹಾಕಿದರೆ ರಾಜ್ಯಾದ್ಯಂತ ಬೀದಿಗಳಿದು ಹೋರಾಟ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ವಿಜಯಪುರ | ಹರೀಶ್ ಡಿ.ಕೆ. ಅವರಿಗೆ ಪಿಎಚ್.ಡಿ ಪದವಿ
ಸುದ್ದಿಗೋಷ್ಠಿಯಲ್ಲಿ ಅಹಿಂದ ಮುಖಂಡರಾದ ಚಂದ್ರಶೇಖರ ಕೊಟಬಾಗಿ, ಸೋಮನಾಥ ಕಳ್ಳಿಮನಿ, ಹಮೀದ್ ಮುಶ್ರೀಫ್, ಎಸ್.ಎಂ. ಪಾಟೀಲ ಗಣಿಹಾರ, ಮಹಮ್ಮದ್ ರಫೀಕ್ ಟಪಾಲ್ ಎಂಜಿನಿಯರ್, ಎಂ.ಸಿ. ಮುಲ್ಲಾ, ಪ್ರೊ.ಯಂಕಂಚಿ, ವಸಂತ ಹೊನಮೋಡೆ ಸೇರಿದಂತೆ ಮತ್ತಿತರರು ಇದ್ದರು.