ದೇಶದ ವಿಚಾರದಲ್ಲೂ ಕಾಂಗ್ರೆಸ್ಸಿಗರು ಪಾಕಿಸ್ತಾನಕ್ಕೆ ಸಹಾಯ ಆಗುವಂತೆ ಮಾತನಾಡುತ್ತಾರೆ. ನಮಗೆ ನಮ್ಮ ಸೈನಿಕರ ಬಗ್ಗೆ ಹೆಮ್ಮೆ ಇದೆ. ನಾವು ಯಾವತ್ತೂ ನಮ್ಮ ಸೈನಿಕರ ಕುರಿತು ಅಪನಂಬಿಕೆ ವ್ಯಕ್ತಪಡಿಸಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಬೆಂಗಳೂರನಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಸೈನಿಕರ ಕ್ರೆಡಿಟ್ ಕಿತ್ತುಕೊಳ್ಳುವ ಕೆಲಸವನ್ನು ಯಾರೂ ಮಾಡಿಲ್ಲ. ಯುದ್ಧರಂಗಕ್ಕೆ ಹೋದವರು ನಮ್ಮ ಸೈನಿಕರು” ಎಂದರು.
“ಕಾಂಗ್ರೆಸ್ಸಿನವರು ಹಿಂದೆ ಸರ್ಜಿಕಲ್ ಸ್ಟ್ರೈಕ್ ಆದಾಗ ಸಾಕ್ಷಿ ಕೇಳಿದ್ದರು. ಆಗ ಸೈನಿಕರ ಕುರಿತು ಅಪನಂಬಿಕೆ ವ್ಯಕ್ತಪಡಿಸಿದ್ದೀರಲ್ಲವೇ?ನಿಮಗೆ ಆಗ ಸೈನಿಕರ ಬಗ್ಗೆ ನಂಬಿಕೆ ಎಲ್ಲಿ ಹೋಗಿತ್ತು? ನಾವು ನಮ್ಮ ಸೈನಿಕರನ್ನು ನಂಬುತ್ತೇವೆ. ಅವರ ಬಗ್ಗೆ ನಮಗೆ ಹೆಮ್ಮೆ ಇದೆ. 1962ರ ಭಾರತ- ಚೀನಾ ಯುದ್ಧವನ್ನು ಹೊರತುಪಡಿಸಿ ಇನ್ಯಾವುದೇ ಯುದ್ಧದಲ್ಲಿ ನಮ್ಮ ಸೈನಿಕರು ಸೋತಿಲ್ಲ” ಎಂದು ತಿಳಿಸಿದರು.
“1948ರಲ್ಲಿ ಯುದ್ಧದ ವೇಳೆ ಕೇವಲ 48 ಗಂಟೆಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ವಶಕ್ಕೆ ಪಡೆಯುತ್ತೇವೆ ಎಂದು ಸೈನಿಕರು ಕೇಳಿದ್ದರು. ಯಾಕೆ ಆಗ ಯುದ್ಧ ನಿಲ್ಲಿಸಿದಿರಿ? ಪರಿಣಾಮ ಏನಾಯಿತು? ನಮ್ಮ ಕಾಶ್ಮೀರದ ಮೂರನೇ ಒಂದು ಭಾಗ ಪಾಕಿಸ್ತಾನದ ಕೈವಶವಾಯಿತು. ಇವತ್ತಿಗೂ ಪಾಕಿಸ್ತಾನದ ಕೈಯಲ್ಲೇ ಇದೆ. ಇದಕ್ಕೆ ಕಾರಣ ಯಾರು? ನಮ್ಮ ಸೈನಿಕರಲ್ಲ. ಆಗ, ಯುದ್ಧವಿರಾಮ ಬೇಡವೆಂದು ಜನರಲ್ ತಿಮ್ಮಯ್ಯನವರು ಹೇಳಿದ್ದರು” ಎಂದರು.
“1965ರ ಯುದ್ಧದಲ್ಲಿ ನಮ್ಮ ಸೈನ್ಯ ಕರಾಚಿ, ಲಾಹೋರ್ವರೆಗೆ ಹೋಗಿತ್ತು. ಅದು ನಮಗೆ ಹೆಮ್ಮೆಯ ವಿಚಾರ. ತಾಷ್ಕೆಂಟ್ ಸಂಧಾನದ ಮೇಜಿನಲ್ಲಿ ನಾವು ಗೆದ್ದಿದ್ದನ್ನೆಲ್ಲ ಕಳಕೊಳ್ಳಬೇಕಾಯಿತು. ಅಷ್ಟು ಮಾತ್ರವಲ್ಲ; ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನೂ ಕಳಕೊಂಡೆವು. ಪ್ರಧಾನಿಯ ಸಂಶಯಾಸ್ಪದ ಸಾವು ಆಗಿದ್ದರೂ ಮರಣೋತ್ತರ ಪರೀಕ್ಷೆಯೂ ನಡೆಯಲಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಭಾರತೀಯ ಸೇನೆಯನ್ನು ಮತ ಗಳಿಕೆಗೆ ಬಳಸುತ್ತಿದೆ: ಉತ್ತರಾಖಂಡ ಕಾಂಗ್ರೆಸ್ ಆರೋಪ
“ಕಾಂಗ್ರೆಸ್ಸಿಗರ ಹೇಳಿಕೆಯ ಧಾಟಿಯನ್ನು ಗಮನಿಸಿದರೆ, ಅವರು ಬಿಜೆಪಿ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಎಂದು ಭಾವಿಸಿದಂತೆ ಕಾಣುತ್ತಿದೆ. ಭಯೋತ್ಪಾದಕರು ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿ ದಾಳಿ ಮಾಡಿಲ್ಲ. ರಾಜಕೀಯ ಪಕ್ಷಕ್ಕೆ ಮೀರಿ ಭಾರತದ ಸಾರ್ವಭೌಮತೆ, ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು, ಇಲ್ಲಿನ ಸರ್ವಧರ್ಮ, ಸಮಭಾವ, ಸಹಬಾಳ್ವೆಯನ್ನು ಪ್ರಶ್ನಿಸಿ ಹತ್ಯೆ ನಡೆಸಿದ್ದಾರೆ. ಈ ಮೂಲಕ ಯುದ್ಧಕ್ಕೆ ಪ್ರಚೋದನೆ ನೀಡಿದ್ದಾರೆ” ಎಂದು ಟೀಕಿಸಿದರು.
ನಮ್ಮ 54 ಜನ ಸೈನಿಕರು ಏನಾದರು
“1971ರಲ್ಲಿ ಬಾಂಗ್ಲಾ ವಿಮೋಚನೆ ಆಯಿತು. 93 ಸಾವಿರ ಪಾಕಿಸ್ತಾನಿ ಸೈನಿಕರನ್ನು ನಮ್ಮ ಹೆಮ್ಮೆಯ ಸೈನಿಕರು ಸೆರೆ ಹಿಡಿದಿದ್ದರು. ಪ್ರಧಾನಿ, ರಕ್ಷಣಾ ಸಚಿವರು, ರಾಜಕೀಯ ನೇತಾರರು ಯುದ್ಧಭೂಮಿಗೆ ಹೋಗಿರಲಿಲ್ಲ. ಶಿಮ್ಲಾ ಒಪ್ಪಂದ ಆಗಿ ಬೇಷರತ್ತಾಗಿ ಬಿಡುಗಡೆ ಮಾಡಿದ್ದರು. ನಮ್ಮ 54 ಜನ ಸೈನಿಕರ ಬಿಡುಗಡೆ ಆಗಲಿಲ್ಲ. ಅವರು ಏನಾದರು? ಇವತ್ತಿಗೂ ಪತ್ತೆ ಇಲ್ಲ” ಎಂದು ಹೇಳಿದರು.