- ‘ಅಮರನಾಥ ಯಾತ್ರೆಗೆ ತೆರಳಿದ 18,000 ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ’
- ‘ನಾಲ್ಕು ಜನ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಕಳುಹಿಸಿದ್ದೇವೆ’
ಅಮರನಾಥ ಯಾತ್ರೆಗೆ ತೆರಳಿ, ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ಯಾತ್ರಿಕರ ಬಗ್ಗೆ ಯಾವುದೇ ಆತಂಕ ಬೇಡ. ಎಲ್ಲ ಯಾತ್ರಿಕರೂ ಸುರಕ್ಷಿತವಾಗಿದ್ದು ಅವರನ್ನು ರಾಜ್ಯಕ್ಕೆ ವಾಪಾಸ್ ಕರೆತರುವುದು ನಮ್ಮ ಸರ್ಕಾರದ ಜವಾಬ್ದಾರಿ ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಭರವಸೆ ನೀಡಿದರು.
ಆರನೇ ದಿನದ ಅಧಿವೇಶನದಲ್ಲಿ ವಿರೋಧ ಪಕ್ಷದ ಸದಸ್ಯರು ಕರ್ನಾಟಕದ ಅಮರನಾಥ ಯಾತ್ರಾರ್ಥಿಳ ರಕ್ಷಣಾ ಕಾರ್ಯಾಚರಣೆ ಬಗ್ಗೆ ಪ್ರಶ್ನೆ ಎತ್ತಿದರು. ಇದಕ್ಕೆ ಉತ್ತರಿಸಿದ ಸಚಿವರು, “ಜುಲೈ 1ರಿಂದ ಅಮರನಾಥ ಯಾತ್ರೆ ಆರಂಭವಾಗಿದೆ. ಕರ್ನಾಟಕದಿಂದಲೂ ಅಪಾರ ಜನ ಭಕ್ತಾದಿಗಳು ಯಾತ್ರೆಗೆ ತೆರಳಿದ್ದಾರೆ. ಆದರೆ, ಉತ್ತರ ಭಾರತದಲ್ಲಿ ವಿಪರೀಪತವಾಗಿರುವ ಮಳೆಯ ಕಾರಣಕ್ಕೆ ಭೂ ಕುಸಿತ ಉಂಟಾಗಿದ್ದು, ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ” ಎಂದರು.
“ಅಮರನಾಥ ಯಾತ್ರೆಗೆ ತೆರಳಿದ 18,000 ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪೈಕಿ ಕರ್ನಾಟಕದ ಯಾತ್ರಾರ್ಥಿಗಳೂ ಇದ್ದಾರೆ. ಈಗಾಗಲೇ ಎನ್ ಡಿ ಆರ್ ಎಫ್ ಹಾಗೂ ಸಿಆರ್ ಪಿಎಫ್ ಆರ್ಮಿ ಕ್ಯಾಂಪ್ ಸೈನಿಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸಿಎಂ ಕಚೇರಿಯಿಂದ ಸಂವಹನ ನಡೆಸಲಾಗುತ್ತಿದ್ದು, ರಾಜ್ಯದಿಂದ 4 ಜನ ಹಿರಿಯ ಐಎಎಸ್ ಐಪಿಎಸ್ ಅಧಿಕಾರಿಗಳನ್ನು ಈಗಾಗಲೇ ಕಾಶ್ಮೀರಕ್ಕೆ ಕಳುಹಿಸಿ ಕೊಡಲಾಗಿದೆ. ಎಲ್ಲ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಅವರ ಕುಟುಂಬಸ್ಥರು ಆತಂಕಪಡುವ ಅಗತ್ಯ ಇಲ್ಲ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಧಾನಸೌಧದೊಳಗೆ ಖಾಸಗಿ ವ್ಯಕ್ತಿ ಪ್ರವೇಶ ಹಿನ್ನೆಲೆ : ಹೈ ಅಲರ್ಟ್ ಆದ ಭದ್ರತಾ ಸಿಬ್ಬಂದಿ
“ಈಗಾಗಲೇ ಸಿಆರ್ ಪಿಎಫ್ ಕ್ಯಾಂಪ್ ನಲ್ಲಿರುವ 129 ಯಾತ್ರಾರ್ಧಿಗಳನ್ನು ಸುರಕ್ಷಿತವಾಗಿ ಕಾಶ್ಮೀರಕ್ಕೆ ಕರೆತರಲಾಗಿದೆ. ಆದರೆ, ಬಾಲ್ತಾಲ್ ಕ್ಯಾಂಪ್ ನಲ್ಲಿ ಹವಾಮಾನ ಹದಗೆಟ್ಟಿದ್ದು ವಿಪರೀತ ಮಂಜಿನ ಕಾರಣಕ್ಕೆ ರಸ್ತೆ ಬಂದ್ ಆಗಿದೆ. ಬುಧವಾರದ ನಂತರ ವಾತಾವರಣ ತಿಳಿಯಾಗಲಿದ್ದು,ರಸ್ತೆ ಕಾರ್ಯಾಚರಣೆ ಆರಂಭವಾಗಲಿದೆ. ಆನಂತರ ಅವರನ್ನೂ ಕಾಶ್ಮೀರಕ್ಕೆ ರವಾನಿಸಿ ಅಲ್ಲಿಂದ ಕರ್ನಾಟಕಕ್ಕೆ ಕರೆತರಲಾಗುವುದು” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಲೇ-ಲಡಾಕ್ ನಲ್ಲಿ ಸಿಲುಕಿರುವ ಯಾತ್ರಾರ್ಧಿಗಳ ರಕ್ಷಣೆಯ ಬಗ್ಗೆಯೂ ಸದನದಲ್ಲಿ ವಿರೋಧ ಪಕ್ಷದ ನಾಯಕರಿಂದ ಗಮನ ಸೆಳೆಯಲಾಯಿತು. ಈ ಪ್ರಶ್ನೆಗೂ ಸ್ಪಷ್ಟಣೆ ನೀಡಿದ ಸಚಿವರು, “ಲೇ-ಲಡಾಕ್ ಬೇರೆಯದೇ ರಾಜ್ಯ. ಮಿಲಿಟರಿ ಹಿಡಿತವಿರುವ ರಾಜ್ಯ. ಆ ಭಾಗದಲ್ಲಿ ಕೇವಲ ಏಕೈಕ ಹೆಲಿಪ್ಯಾಡ್ ಇದ್ದು, ಪ್ರೈವೇಟ್ ಹೆಲಿಕಾಪ್ಟರ್ ಗಳಿಗೆ ಅವಕಾಶ ಇಲ್ಲ. ಆದರೆ, ಲೇ-ಲಡಾಕ್ ನಲ್ಲಿ ಸಿಲುಕಿರುವ ಕನ್ನಡಿಗರ ಪರವಾಗಿಯೂ ನಮ್ಮ ಸಹಾಯ ಸಹಾನುಭೂತಿ ಇದೆ. ಅಲ್ಲಿ ಸಿಲುಕಿರುವ ಪ್ರಯಾಣಿಕರ ಬಗ್ಗೆ ಮಾಹಿತಿ ಇದ್ದರೆ ಕೊಡಿ, ಅವರ ರಕ್ಷಣೆಗೂ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ” ಎಂದರು.