ಅನ್ನಭಾಗ್ಯ ಯೋಜನೆ ಜಾರಿಗೆ ಬಂದು 10 ವರ್ಷಗಳು ಕಳೆದಿವೆ. ಈಗ ಯೋಜನೆ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಿವೆ. ಆದರೆ, ಯೋಜನೆಯ ಯಶಸ್ವಿಗೆ ಕಾರಣಕರ್ತರಾಗಿರುವ ಲೋಡಿಂಗ್ (ಹಮಾಲಿ) ಕಾರ್ಮಿಕರ ಪರಿಸ್ಥಿತಿ ಬಗ್ಗೆ ಯಾರು ಮಾತನಾಡುತ್ತಿಲ್ಲ. ಅವರ ಬದುಕಿನ ಬಗ್ಗೆ ಯಾರು ಗಮನಿಸುತ್ತಿಲ್ಲ. ಅವರ ಸಮಸ್ಯೆಗಳನ್ನು ಆಳುವವರು ಆಲಿಸುತ್ತಿಲ್ಲ ಎಂದು ಕರ್ನಾಟಕ ಶ್ರಮಿಕ ಶಕ್ತಿಯ ರಾಜ್ಯ ಸಂಚಾಲಕ ವರದ ರಾಜೇಂದ್ರ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಮತ್ತು ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ಲೋಡಿಂಗ್ ಕಾರ್ಮಿಕರ ಒಕ್ಕೂಟವು ಸೋಮವಾರ ಆಯೋಜಿಸಿದ್ದ ‘ಲೋಡಿಂಗ್ ಕಾರ್ಮಿಕರ ದಶಮಾನೋತ್ಸವ ಹಾಗೂ ಶ್ರಮಿಕರ ಹಕ್ಕೊತ್ತಾಯ ಸಮಾವೇಶದಲ್ಲಿ’ ಅವರು ಮಾತನಾಡಿದರು. “ಪಡಿತರ ವಿತರಣಾ ಯೋಜನೆಯ ಯಶಸ್ಸಿಗಾಗಿ ಲೋಡಿಂಗ್ ಕಾರ್ಮಿಕರು ಸಾಕಷ್ಟು ಬೆವರು, ರಕ್ತ ಬಸಿದಿದ್ದಾರೆ. ಅದರೆ, ಅವರನ್ನು ಸರ್ಕಾರಗಳು ಕಡೆಗಣಿಸುತ್ತಿವೆ. ಕೋಲ ಹೆಚ್ಚಳ ಸೇರಿದಂತೆ ನಾನಾ ಹಕ್ಕುಗಳಿಗಾಗಿ ಕಾರ್ಮಿಕರು ಹೋರಾಟ ನಡೆಸುತ್ತಿದ್ದಾರೆ. ಈ ಕಾರ್ಮಿಕರಿಗೆ ಕೂಲಿ ಭದ್ರತೆ ಒದಗಿಸಬೇಕು” ಎಂದು ಒತ್ತಾಯಿಸಿದರು.
“ಲೋಡಿಂಗ್ ಕಾರ್ಮಿಕರು ಹೋರಾಟ ನಡೆಸಿ, ಇ.ಎಸ್.ಐ, ಪಿ.ಎಫ್ ಸೇರಿದಂತೆ ಕೆಲವು ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಆದರೂ, ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಆಹಾರ ಧಾನ್ಯಗಳನ್ನು ಕಡಿಮೆ ಮಾಡಿ ಕಾರ್ಮಿಕರ ಸಂಪಾದನೆಯನ್ನು ಕಿತ್ತುಕೊಂಡಿತು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಸಹ ಕೂಲಿ ಹೆಚ್ಚಳ ಮಾಡಲಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೂ, ಕೂಲಿ ಹೆಚ್ಚಳವಾಗದೇ ಕಾರ್ಮಿಕರು ಬದುಕು ನಡೆಸುವುದೇ ದುಸ್ಥರವಾಗಿತ್ತು. ಕಳೆದ ತಿಂಗಳು (ಜೂನ್) ಕೂಲಿ ಹೆಚ್ಚಳ ಮಾಡಲಾಗಿದೆ. ಆದರೆ, ಲೋಡಿಂಗ್ ಕಾರ್ಮಿಕರಿಗೆ ಸರ್ಕಾರ ನಿಗದಿ ಮಾಡಿರುವ ಹೊಸ ಕೂಲಿ ಇನ್ನೂ ಸಿಕ್ಕಿಲ್ಲ. ಅವರಿಗೆ ಕೆಲಸದ ಭದ್ರತೆ ಇಲ್ಲದಿರುವುದೇ ಮುಖ್ಯ ಸಮಸ್ಯೆಯಾಗಿದೆ” ಎಂದು ಆರೋಪಿಸಿದರು.
“ಸರ್ಕಾರ ನಿಗದಿ ಮಾಡಿರುವ ಕೂಲಿ ದರಕ್ಕೆ ಅನುಗುಣವಾಗಿ ಇ.ಎಸ್.ಐ ಮತ್ತು ಪಿ.ಎಫ್ ಪಾವತಿಯಾಗುತ್ತಿಲ್ಲ. ರ್ಮಿಕ ಕಾನೂನುಗಳ ಜಾರಿ ಮಾಡಲು ಒತ್ತಾಯಿಸಿದರೆ ಕೆಲಸದಿಂದ ಕಿತ್ತುಹಾಕಿ ದೌರ್ಜನ್ಯ ಎಸಗಲಾಗುತ್ತಿದೆ. ಯಾರೇ ಗುತ್ತಿಗೆದಾರರು ಬದಲಾದರೂ ಕಾರ್ಮಿಕರನ್ನು ಕೆಲಸದಿಂದ ನಿವೃತಿ ವಯಸ್ಸಿನ ತನಕ ಕಿತ್ತುಹಾಕಬಾರದೆಂದು ಸರ್ಕಾರ ಆದೇಶಿಸಬೇಕು” ಎಂದು ವರದರಾಜೇಂದ್ರ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಇಂದಿನಿಂದ ‘ಅನ್ನಭಾಗ್ಯ’ ಯೋಜನೆ ಜಾರಿ: 5 ಕೆಜಿ ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ ಹಣ
“ಅನ್ನಭಾಗ್ಯ ಯೋಜನೆಗೆ ಪೂರಕವಾಗಿ ರಾಜ್ಯ ಉಗ್ರಾಣ ನಿಗಮ, ರೈಲ್ವೈ ಗೂಡ್ ಶೆಡ್, ಎಪಿಎಂಸಿಗಳಲ್ಲಿ ಹಾಗೂ ಕರ್ನಾಟಕ ಪಾನೀಯ ನಿಗಮದ ಗೋದಾಮುಗಳಲ್ಲಿ, ಹಡಗು ನಿಲ್ದಾಣದಲ್ಲಿ ವರ್ತಕರ ಅಂಗಡಿಗಳಲ್ಲಿ ಪೇಟೆ ಬೀದಿಗಳಲ್ಲಿ ಹತ್ತಾರು ಲಕ್ಷ ಹಮಾಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು ಇವರಿಗೆ ನಿರ್ದಿಷ್ಟ ಪ್ರಮಾಣದ ಕೂಲಿ ಕೆಲಸದ ಭದ್ರತೆ ಇಲ್ಲವಾಗಿದೆ. ಹಮಾಲಿ ಕಾರ್ಮಿಕರ ಕೆಲಸದ ಭದ್ರತೆ ಮತ್ತು ಸಂಬಳ ಭದ್ರತೆಗಾಗಿ ಮಹಾರಾಷ್ಟ್ರದಲ್ಲಿ 1969ರಲ್ಲೇ ಕಲ್ಯಾಣ ಮಂಡಳಿ ರಚನೆ ಮಾಡಿದ್ದು ಕರ್ನಾಟಕದಲ್ಲೂ ಹಮಾಲಿ ಕಾರ್ಮಿಕರ ಗಣತಿ ಮಾಡಿ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
- ಕಾರ್ಮಿಕರಿಗೆ ಸರ್ಕಾರ ನಿಗದಿ ಮಾಡಿದ ವೇತನ ಅಥವಾ ಇಎಸ್ಐ ಮತ್ತು ಪಿಎಫ್ ನೀಡುವುದಿಲ್ಲ. ಹಾಗಾಗಿ ಅನ್ನಭಾಗ್ಯ ಯೋಜನೆ ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡಬೇಕು. ನಿವೃತ್ತಿಯ ವಯಸ್ಸಿನವರೆಗೆ ಅವರನ್ನು ಕೆಲಸದಿಂದ ತೆಗೆಯದಂತೆ ನಿಯಮ ರೂಪಿಸಬೇಕು.
- ಅನ್ನಭಾಗ್ಯ ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಕನಿಷ್ಟ ವೇತನ ಕಾಯಿದೆಯ ನಿಯಮದ ಅನುಗುಣವಾಗಿ ಪ್ರತಿವರ್ಷ ಕೂಲಿ ದರ ಹೆಚ್ಚಿಸಲು ಸಮಗ್ರ ನಿಯಮ ರೂಪಿಸಬೇಕು.
- ಕಾರ್ಮಿಕ ವಿರೋಧಿಯಾದ 8 ಗಂಟೆಗಳ ಕೆಲಸದ ಅವಧಿಯನ್ನು 12ಗಂಟೆಗೆ ಹೆಚ್ಚಿಸಿದ ಆದೇಶವನ್ನು ಈ ಕೂಡಲೇ ವಾಪಸ್ಸು ಪಡೆಯಬೇಕು.
- ಎಲ್ಲ ಹಮಾಲಿ ಕಾರ್ಮಿಕರ ಕೆಲಸದ ಭದ್ರತೆ ಮತ್ತು ಸಂಬಳ ಭದ್ರತೆಗಾಗಿ ಮಹಾರಾಷ್ಟ್ರ ಮಾದರಿಯಲ್ಲಿ ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕು.
- ಎಲ್ಲ ಗುತ್ತಿಗೆ ಕಾರ್ಮಿಕರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯನ್ನು ಜಾರಿಗೆ ತರಬೇಕು. ಸಂಬಳದ ಖಾತ್ರಿ ಮಾಡಬೇಕು.
- ಎಲ್ಲ ಗುತ್ತಿಗೆ, ಅಸಂಘಟಿತ ಹಾಗೂ ಭದ್ರತೆಯಿಲ್ಲದ ಕಾರ್ಮಿಕರಿಗೂ ಕನಿಷ್ಟ 30 ಸಾವಿರ ವೇತನ ಹಾಗೂ ಉದ್ಯೋಗ ಭದ್ರತೆಯನ್ನು ಖಾತ್ರಿಗೊಳಿಸಿ ನೀತಿ ರೂಪಿಸಬೇಕು.
- ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5ಕೆಜಿ ಅಕ್ಕಿ ಬದಲಿಗೆ ನಗದು ಹಣ ನೀಡುವುದನ್ನು ನಿಲ್ಲಿಸಿ ಅಕ್ಕಿಯನ್ನೇ ನೀಡಬೇಕು ಮತ್ತು ಕೇರಳ ಮಾದರಿಯಲ್ಲಿ ಸಮಗ್ರ ಆಹಾರ ಧಾನ್ಯಗಳನ್ನು ಪಡಿತರ ವ್ಯವಸ್ಥೆ ಮೂಲಕ ನೀಡಿ ಯೋಜನೆ ಬಲಪಡಿಸಬೇಕು.
- ರಾಜ್ಯದ ಎಲ್ಲಾ ಅಸಂಘಟಿತ ಕಾರ್ಮಿಕರ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮತ್ತು ಗಣತಿ ಮಾಡಿ ಎಲ್ಲಾ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ ಮಾಡಿ ಸಾಮಾಜಿಕ ಭದ್ರತೆ ನೀಡಬೇಕು.