ಪತ್ರಿಕೆ ವಿತರಣೆ ಮಾಡುತ್ತಲೇ ಕೊಪ್ಪಳದ ವಿದ್ಯಾರ್ಥಿಯೊಬ್ಬ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಪಡೆದು ಪಾಸಾಗಿದ್ದಾನೆ. ಈ ಕುರಿತು ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಂಕರ್ ಕುದುರಿಮೋತಿ ಹರ್ಷ ವ್ಯಕ್ತಪಡಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 559 ಅಂಕ ಪಡೆದ ಪತ್ರಿಕೆಗಳ ವಿತರಕ ಶಿವನಗೌಡ ಪಾಟೀಲ್ ಅವರಿಗೆ ನಗರದ ಹಸನ್ ರಸ್ತೆಯಲ್ಲಿರುವ ಡಾ. ಟಿ ಹೆಚ್ ಮುಲ್ಲಾ ಆಸ್ಪತ್ರೆ ಮುಂಭಾಗದ ಹಟಗಾರ ಪೇಟೆ ಓಣಿಯ ಅವರ ಮನೆಯಲ್ಲಿ ವಿತರಕರ ಸಂಘ ಹಾಗೂ ಕೊಪ್ಪಳ ಜಿಲ್ಲಾ ಸಂಘದಿಂದ ಸನ್ಮಾನ ಮಾಡಿ ಗೌರವಿಸಲಾಗಿದೆ.
ಈ ವೇಳೆ ಮಾತನಾಡಿದ ಶಂಕರ್ ಕುದುರಿಮೋತಿ, “ಪತ್ರಿಕೆ ವಿತರಕರು ಕಲಿಕೆಯೊಂದಿಗೆ ಗಳಿಕೆ ಮಾಡುತ್ತಾರೆ, ಮನೆಗೆ ಒಳ್ಳೆ ಮಗ, ಶಾಲೆಗೆ ಆದರ್ಶ ವಿದ್ಯಾರ್ಥಿ, ಸಮಾಜಕ್ಕೆ ಮಾದರಿ ಯುವಕರಾಗುತ್ತಾರೆ. ಒಡನಾಟದಿಂದ ಜನರೊಂದಿಗೆ ಹೇಗೆ ಬೆರೆಯುವದು, ಜಗತ್ತಿನಲ್ಲಿ ಹೇಗೆ ಬದುಕಬೇಕೆಂಬುದು ಕಲಿಸುವುದೇ ಪತ್ರಿಕಾ ವಿತರಣಾ ವೃತ್ತಿ. ಪತ್ರಿಕೆ ವಿತರಣೆಗೆ ಬರುವವರು ಬಡತನದಲ್ಲಿ ಬದುಕು ಕಟ್ಟಿಕೊಳ್ಳಬೇಕು. ಐದು ನೂರು, ಸಾವಿರ ರೂಪಾಯಿಗಳು ಬಂದರೆ ಸಿಲೆಂಡರಿಗೆ, ವಿದ್ಯುತ್ ಬಿಲ್ಲಿಗೆ, ಮನೆ ಬಾಡಿಗೆಗೆ ಆಗುತ್ತದೆ. ಇದರಿಂದ ತಂದೆ ತಾಯಿಗೆ ಸಹಾಯ ಮಾಡಬೇಕು ಎನ್ನುವ ವಿಚಾರದಿಂದ ಬೆಳಿಗ್ಗೆ ಪತ್ರಿಕೆ ಹಂಚುತ್ತಾರೆ. ಕೊಪ್ಪಳದ ಪತ್ರಿಕೆ ವಿತರಕರ ಸಂಘದವರು ಉಳಿತಾಯ ಆರಂಭಿಸಿದ್ದಾರೆ. ಈಗಿನ ಸಸಿ ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ. ಪತ್ರಿಕೆ ವಿತರಕರು ಶಾಲಾ ಕಾಲೇಜುಗಳಲ್ಲಿ ಉತ್ತಮ ಅಂಕ ಪಡೆದವರನ್ನು ಸನ್ಮಾನಿಸಿ ಪ್ರೋತ್ಸಾಹಿಡುತ್ತಿರುವುದು ಒಳ್ಳೆಯ ಬೆಳವಣಿಗೆ. ಪಿಯುಸಿಯಲ್ಲಿ ಅದಕ್ಕಿಂತ ಒಂದೇ ಅಂಕ ಹೆಚ್ಚು ಪಡೆದರೂ ನಾನು ಸ್ವಂತ ಐದು ಸಾವಿರ ರೂಪಾಯಿಗಳನ್ನು ನೀಡುತ್ತೇನೆ” ಎಂದು ಘೋಷಿಸಿದರು.
ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್ ಎ ಗಫಾರ್ ಮಾತನಾಡಿ, “ಉತ್ತಮ ಅಂಕ ಗಳಿಸಿದ ಶಿವನಗೌಡ ಅವರು ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ನಮ್ಮೆಲ್ಲರ ಸಹಕಾರವಿದೆ. ಪತ್ರಿಕೆಗಳಲ್ಲಿ ಮೂಲವಾಗಿ ಕೆಳಮಟ್ಟದಲ್ಲಿ ಕೆಲಸ ಮಾಡುವ ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಪತ್ರಿಕಾ ವಿತರಕರು ಇಲ್ಲದಿದ್ದರೆ ಪತ್ರಿಕೆಗಳೇ ನಡೆಯುವುದಿಲ್ಲ. ಪತ್ರಿಕೆ ವಿತರಣೆ ಮಾಡುತ್ತಾ ಓದುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನವನ್ನು ಗಳಿಸುತ್ತಾರೆ. ಮನೆ ಮನೆಗಳಿಗೆ ಹೋಗಿ ಪತ್ರಿಕೆ ಹಾಕುವ ಮೂಲಕ ವಿವಿಧ ಮನಃಸ್ಥಿತಿಯ ಜನರನ್ನು ಅರ್ಥ ಮಾಡಿಕೊಂಡು ಜ್ಞಾನ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲಾ ನಮೂನೆಯ ಪತ್ರಿಕೆಗಳನ್ನು ಓದುತ್ತಾ ಪದವಿಗಳನ್ನು ಪಡೆಯಲು ಅನುಕೂಲವಾಗುತ್ತದೆ” ಎಂದರು.
ಇದನ್ನೂ ಓದಿ: ಕೊಪ್ಪಳ | ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ; ಇಬ್ಬರ ಬಂಧನ
ಸಂಘದ ಜಿಲ್ಲಾಧ್ಯಕ್ಷ ಗವಿರಾಜ್ ಕಂದಾರಿ ಮಾತನಾಡಿ, “ಈ ಹಿಂದೆ ಉದಯ ಎಂಬ ಪತ್ರಿಕಾ ವಿತರಕನಿಗೆ ಐವತ್ತು ಸಾವಿರ ರೂಪಾಯಿಗಳ ಆರ್ಥಿಕ ಸಹಾಯ ಒದಗಿಸಲಾಗಿತ್ತು, ಈಗ ಶಿವನಗೌಡ ಅವರಿಗೆ ಮತ್ತು ಅನೇಕ ಪತ್ರಿಕೆ ವಿತರಕರಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಲು ದಾನಿಗಳು ಮುಂದೆ ಬರಬೇಕು” ಎಂದು ಕರೆ ನೀಡಿದರು.
ಪತ್ರಕರ್ತ ಪ್ರಮೋದ್ ಕುಲಕರ್ಣಿ, ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಟಪಾಲ್, ಕಾರ್ಯದರ್ಶಿ ಮಹೆಬೂಬ್ ಸಾಬ್ ಜಿವಿಟಿ, ಸಲಹೆಗಾರ ವಿರುಪಾಕ್ಷಪ್ಪ ಮುರಳಿ, ನಾಗರಾಜ್ ಕಲಾಲ್, ಸದಸ್ಯರಾದ ಮಹೆಬೂಬ್ ಮನಿಯಾರ, ಶಿವಕುಮಾರ್ ಜಿ, ಸೋಮವಾರದ್, ಹನುಮಂತ, ಮಂಜುನಾಥ್ ಹಡಪದ, ಗಂಗಾಧರ್ ಮಡ್ಡಿ, ಕಿರಣ್ ಮಮದ್ಲಿ ಹಾಗೂ ಇತರರಿದ್ದರು.