ಕನ್ನಡದ ಖ್ಯಾತ ಸಾಹಿತಿ ದ.ರಾ.ಬೇಂದ್ರೆ ಅವರ ಸಂಪೂರ್ಣ ಸಾಹಿತ್ಯ ಅಧ್ಯಯನ ನಡೆಸುವುದು ಅವಶ್ಯಕತೆ ಇದೆ ಎಂದು ಉಪನ್ಯಾಸಕ ಡಾ.ಶಿವಾಜಿ ಮೆತ್ರೆ ಹೇಳಿದರು.
ಹುಲಸೂರ ಪಟ್ಟಣದ ಎಮ್ಕೆಕೆಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ ʼಬೇಂದ್ರೆ ಸಾಹಿತ್ಯದಲ್ಲಿ ದೇಶಿಯ ಸೊಗಡುʼ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ʼವರಕವಿ ಬೇಂದ್ರೆ ತಮ್ಮ ಸಾಹಿತ್ಯ ಸಿರಿಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಬದುಕು-ಬರಹ ಒಂದೇ ಆಗಿತ್ತು. ಬೇಂದ್ರೆ ಅವರ ಪೂರ್ಣ ಸಾಹಿತ್ಯ ನಾವೆಲ್ಲರೂ ಅಧ್ಯಯನ ಮಾಡಿದಾಗ ಮಾತ್ರ ಅವರನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಅವರ ಸಾಹಿತ್ಯದಲ್ಲಿ ಅದರಲ್ಲೂ ಕಾವ್ಯಗಳಲ್ಲಿ ದೇಶಿ ಭಾಷೆ ಬಳಸಿದ್ದು ವಿಶೇಷವಾಗಿದೆ. ಸಮಾಜ ಬದಲಾವಣೆ ಶಕ್ತಿ ಸಾಹಿತ್ಯಕ್ಕಿದೆ. ಅಂತಹ ಸಾಹಿತ್ಯ ಅಧ್ಯಯನ ಮಾಡುವುದರಿಂದ ಉತ್ತಮ ವ್ಯಕ್ತಿತ್ವ ರೂಪಿಸಕೊಳ್ಳಬಹುದುʼ ಎಂದರು.
ಬಸವಕಲ್ಯಾಣದ ನೀಲಾಂಬಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕಿ ಸವಿತಾ ಯರನಳ್ಳಿ ಅವರು ಮಾತನಾಡಿ, ʼದ.ರಾ. ಬೇಂದ್ರೆ ಅವರು ಬಹುಭಾಷಾ ಲೇಖಕರಾಗಿದ್ದರು. ಬದುಕಿನ ನೋವು-ನಲಿವುಗಳನ್ನು ತಮ್ಮ ಸಾಹಿತ್ಯದಲ್ಲಿ ಹಿಡಿದಿಟ್ಟಿದ್ದರು. ಸೃಜನಶೀಲ ಬರಹಗಾರರಾಗಿದ್ದ ಬೇಂದ್ರೆ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆʼ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಕಾಂಬ್ಳೆ ಅವರು ಮಾತನಾಡಿ, ʼಇಂದಿನ ವಿದ್ಯಾರ್ಥಿಗಳು ಬೇಂದ್ರೆ ಅವರ ಸಾಹಿತ್ಯವನ್ನು ಓದುವುದು ಅವಶ್ಯಕತೆ ಇದೆ. ಸಾಹಿತ್ಯ ಅಧ್ಯಯನದಿಂದ ಹೆಚ್ಚಿನ ಜ್ಞಾನ ಸಂಪಾದಿಸಬಹುದು. ಸಾಹಿತಿಗಳ ಬದುಕು-ಬರಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕುʼ ಎಂದು ಸಲಹೆ ನೀಡಿದರು.
ಜಿಲ್ಲಾ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಸಂಚಾಲಕರಾದ ಡಾ.ಮಕ್ತುಂಬಿ ಎಮ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ : ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆಗೆ ನಿಂದನೆ : ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಎಫ್ಐಆರ್
ಕಾರ್ಯಕ್ರಮದಲ್ಲಿ ಡಾ.ಮಾರುತಿಕುಮಾರ್ ಡಾ.ಸಂತೋಷ್ ಸಿ.ಎಂ.ನಾಗಭೂಷಣ್ ಡಾ.ಬಸವರಾಜ್ ಮೈಲಾರೆ, ವಿಶ್ವನಾಥ, ರವಿಕುಮಾರ್, ಸಚಿನ್ ಬಿಡವೆ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಲಕ್ಷ್ಮೀಕಾಂತ್ ಪಂಚಾಳ ನಿರೂಪಿಸಿದರು. ಕುಪೇಂದ್ರ ರಾಠೋಡ ಸ್ವಾಗತಿಸಿದರು. ನಾಗರೆಡ್ಡಿ ವಂದಿಸಿದರು.