ಬಸ್ನಲ್ಲಿ ಸೀಟಿನ ವಿಚಾರಕ್ಕೆ ಪ್ರಯಾಣಿಕರೊಂದಿಗೆ ವಾಗ್ವಾದ ಮಾಡಿಕೊಂಡ ಹೆಡ್ ಕಾನ್ಸ್ಟೆಬಲ್ ಒಬ್ಬರು ಬಸ್ನ ಮುಂಭಾಗದ ಗಾಜಿಗೆ ಕಲ್ಲು ಬೀಸಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಂಬೇಡ್ಕರ್ ಸರ್ಕಲ್ ಬಳಿ ನಡೆದಿದೆ.
ನಿನ್ನೆ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ದೇವದುರ್ಗ ಪಟ್ಟಣದಿಂದ ರಾಯಚೂರಿನತ್ತ ತೆರಳುತ್ತಿದ್ದ ಬಸ್ಸಿನಲ್ಲಿ, ಕರ್ತವ್ಯ ಮುಗಿಸಿಕೊಂಡು ಪ್ರಯಾಣಿಸುತ್ತಿದ್ದ ಹೆಡ್ ಕಾನ್ಸ್ಟೆಬಲ್ ಶ್ರೀನಿವಾಸ ವೃದ್ದೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಘಟನೆ ಕಂಡ ಚಾಲಕ ಸುರೇಶ್ ಬಾಬು ಹಾಗೂ ಬಸ್ಸಿನಲ್ಲಿದ್ದ ಸುಮಾರು 40 ಕ್ಕೂ ಹೆಚ್ಚು ಪ್ರಯಾಣಿಕರು ಶ್ರೀನಿವಾಸ ಅವರಿಗೆ ಬುದ್ದಿವಾದ ಹೇಳಲು ಮುಂದಾಗಿದ್ದಾರೆ. ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಿದ್ದ ಪೊಲೀಸ್ ಸಿಬ್ಬಂದಿ ಶ್ರೀನಿವಾಸ ಬುದ್ದಿವಾದಕ್ಕೆ ಕಿವಿಗೊಡದೆ, ಪ್ರಯಾಣಿಕರತ್ತ ರೋಷ ವ್ಯಕ್ತಪಡಿಸಿದ್ದು, “ನಿಮ್ಮನ್ನೆಲ್ಲಾ ಬೆಂಕಿಯಿಂದ ಸುಟ್ಟು ಕೊಲೆ ಮಾಡಿಬಿಡುತ್ತೇನೆ” ಎಂದು ಬೆದರಿಕೆ ಹಾಕಿರುವುದಾಗಿ ಪ್ರಯಾಣಿಕರು ದೂರಿದ್ದಾರೆ.
ಸ್ಥಳೀಯರು ಕಾನ್ಸ್ಟೆಬಲ್ ಶ್ರೀನಿವಾಸ ಬಸ್ಸಿನ ಮುಂಭಾಗದ ಗ್ಲಾಸ್ಗೆ ಕಲ್ಲಿನಿಂದ ಒಡೆಯುವುದನ್ನು ವಿಡಿಯೋ ಮಾಡಿದ್ದಾರೆ. ಹೊಸ ಬಸ್ ಆದ ಕಾರಣ ಬಸ್ಸಿನ ಮುಂಭಾಗದಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಇವುಗಳ ಆಧಾರದ ಮೇಲೆ ಕರ್ತವ್ಯ ನಿರತ ಕಾನ್ಸ್ಟೆಬಲ್ ವಿರುದ್ಧ ದೂರು ನೀಡಲು ಮುಂದಾದ ಸಾರಿಗೆ ನೌಕರ ಸುರೇಶ ಬಾಬು ಮತ್ತು ಪ್ರಯಾಣಿಕರನ್ನು ಪೊಲೀಸ್ ಠಾಣೆ ಎದುರುಗಡೆಯೇ ಬಸ್ಸಿನಲ್ಲಿ ಸುಡುತ್ತೇನೆ ಎಂದು ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಠಾಣೆಯ ಅಧಿಕಾರಿಗಳು ತಮ್ಮ ಸಿಬ್ಬಂದಿ ಎಂದು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳದೆ ಸಂಧಾನಕ್ಕೆ ಪ್ರಯತ್ನಿಸಿ ಇಲಾಖೆಯ ಗೌರವ ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸುವೆ. ಪೊಲೀಸರಿಗೆ ಬೇರೆ ಕಾನೂನು ಇದಿಯೇ ಎಂದು ಕರ್ತವ್ಯ ನಿರತ ಎಸ್ಎಚ್ಒ ಅವರನ್ನು ಪ್ರಯಾಣಿಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರಾಯಚೂರು |ಶಿಕ್ಷಕರಿಗೆ ಸರಳತೆ ಮುಖ್ಯ; ತಾಯರಾಜ್
ಕಾನೂನು ತಿಳಿವಳಿಕೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರೇ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿ ಸರ್ಕಾರಿ ಬಸ್ ಧ್ವಂಸಗೊಳಿಸಿರುವು ಖಂಡನೀಯ. ಶ್ರೀನಿವಾಸ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲೇಬೇಕೆಂದು ದೂರು ದಾಖಲಿಸಲಾಗಿದೆ. ಹೆಡ್ ಕಾನ್ಸ್ಟೆಬಲ್ ಶ್ರೀನಿವಾಸ ಈ ಹಿಂದೆಯೂ ಕರ್ತವಲೋಪ ಆರೋಪದಡಿ 4 ಬಾರಿ ಅಮಾನತುಗೊಂಡಿದ್ದರು ಎನ್ನಲಾಗಿದೆ.