“ಮೇಲ್ವರ್ಗದ ಮಹಿಳೆ ಆಗಿರಲಿ ಅಥವಾ ದಲಿತ ಮಹಿಳೆ ಆಗಿರಲಿ, ಮಹಿಳೆಯರು ಸಮಾಜದಲ್ಲಿ ಹಿಂದಿನಿಂದಲೂ ಅಸ್ಪೃಶ್ಯರಷ್ಟೇ ಶೋಷಿತರು. ಪಾಶ್ಚಿಮಾತ್ಯ ಮಹಿಳಾಪರ ಚಿಂತಕಿಯರನ್ನು ಮಹಿಳಾಪರ ಹೋರಾಟಗಾರರು ಸೇರಿದಂತೆ ಎಲ್ಲರೂ ಉದಾಹರಿಸುತ್ತಾರೆ. ಆದರೆ ದುರ್ದೈವ ಎಂದರೆ ದೇಶದಲ್ಲಿ ಅಂಬೇಡ್ಕರರು ಮಹಿಳೆಯರಿಗಾಗಿ ಮಾಡಿದ ಮಹತ್ ಕಾರ್ಯಗಳನ್ನ ಮತ್ತು ಅವರಿಗೆ ಒದಗಿಸಿದ ಸ್ವಾತಂತ್ರ್ಯ ಮತ್ತು ಸಮಾನತೆಯನ್ನ ಸ್ಪಷ್ಟವಾಗಿ ಸಮಾಜ, ದೇಶಕ್ಕೆ ತಿಳಿಸುವ ಕೆಲಸ ಯಾರೂ ಕೂಡ ಮಾಡಲಾಗುತ್ತಿಲ್ಲ, ಇದು ವಿಷಾದನೀಯ” ಎಂದು ದಾವಣಗೆರೆ ವಿಶ್ವವಿದ್ಯಾಲಯದ ಅರಿವೇ ಅಂಬೇಡ್ಕರ ಸಂವಾದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ, ಕನ್ನಡ ಪ್ರಾಧಿಕಾರದ ಸದಸ್ಯ ಪ್ರೊ. ಎಂ ಬಿ ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ವಿಭಾಗ, ಮಾನವ ಬಂಧುತ್ವ ವೇದಿಕೆ ಹಾಗೂ ಈದಿನ ಡಾಟ್ ಕಾಮ್ ಸಹಯೋಗದೊಂದಿಗೆ ಆಯೋಜಿಸಿದ್ದ “ಅರಿವೇ ಅಂಬೇಡ್ಕರ್- ಬಾಬಾ ಸಾಹೇಬ್ ಅಂಬೇಡ್ಕರರ ಬರಹಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು “ಸನಾತನ ವ್ಯವಸ್ಥೆಯಲ್ಲಿ ಹೆಣ್ಣು ಪಾಪದ
ಕೂಸು ಎನ್ನುವರು, ಮಹಿಳೆಯರು ಬಗೆಗಿನ ಇಂತಹ ಅಪವಾದ ತೊಡೆದುಹಾಕಲು ಕೆಲಸ ಮಾಡಿದವರು ಅಂಬೇಡ್ಕರ್. ‘ಸಮಾನ ಕೆಲಸಕ್ಕೆ ಸಮಾನ ವೇತನ’ ಎನ್ನುವ ಕನಸು ಅಂಬೇಡ್ಕರ್ ಆಶಯವಾಗಿತ್ತು. ಆದರೆ ಇಂದಿಗೂ ಜಮೀನ್ದಾರಿ ಪದ್ಧತಿ, ಕೃಷಿ ಸೇರಿದಂತೆ ಎಲ್ಲ ವಲಯಗಳಲ್ಲಿ ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಎನ್ನುವ ಮಹಿಳೆಯರ ವಿರುದ್ಧದ ತಾರತಮ್ಯ ಮುಂದುವರೆದಿದೆ. ಗಂಡಸರಿಗೆ ಬೇರೆ ಕೂಲಿ ಮತ್ತು ಹೆಂಗಸರಿಗೆ ಬೇರೆಯ ಕೂಲಿ ನಿಗದಿಪಡಿಸುತ್ತಾರೆ. ಈ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ಇನ್ನೂ ಕೂಡ ಹೆಣ್ಣು ಕೆಳಸ್ಥರದವಳು ಎನ್ನುವ ನಿಯಮ ಇನ್ನು ಕೂಡ ಮುಂದುವರೆದಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಇಂದು ಅಂಬೇಡ್ಕರನ್ನು ಆರಾಧಿಸುವುದಕ್ಕಿಂತ ಅವರ ಅರಿವನ್ನು ಅರ್ಥ ಮಾಡಿಕೊಳ್ಳಬೇಕಾಗಿರುವ ಸಾಮಾಜಿಕ ಸಂದರ್ಭದಲ್ಲಿ ನಾವಿದ್ದೇವೆ. ಇಂದು ಸಮಾಜದಲ್ಲಿ ಕೆಲವು ಸಮಾಜ ವಿರೋಧಿ ಶಕ್ತಿಗಳು ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆಯನ್ನು ಪ್ರತಿಪಾದಿಸಿದ ಅಂಬೇಡ್ಕರ್ ರವರನ್ನು ಅಪ್ಪಿಕೊಂಡೇ, ಅವರ ವಿಚಾರಗಳನ್ನು ಜನಮಾನಸಕ್ಕೆ ತಲುಪದ ಹಾಗೆ ನೋಡಿಕೊಳ್ಳುತ್ತಿವೆ. ಅರಿವು ಎಂದರೇನು, ಅಂಬೇಡ್ಕರ್ ಎಂದರೇನು ಎಂಬುದನ್ನು ಇಂತಹ ಕಾಲಘಟ್ಟದಲ್ಲಿ ತಿಳಿದುಕೊಳ್ಳುವ ಅವಶ್ಯಕತೆ ಇದೆ” ಎಂದು ಅಭಿಪ್ರಾಯಪಟ್ಟರು.

“ಅಂಬೇಡ್ಕರರನ್ನು ಕೇವಲ ಸಂವಿಧಾನಕ್ಕೆ ಸೀಮಿತಗೊಳಿಸುವ ಒಂದು ವಲಯ ನಮ್ಮಲ್ಲಿದೆ. ಅಂಬೇಡ್ಕರ್ ರವರು ಕೇವಲ ಒಂದು ಜಾತಿ, ವರ್ಗಕ್ಕೆ ಅಲ್ಲದೆ ದೇಶದ ಪ್ರತಿಯೊಂದು ವರ್ಗಕ್ಕೂ ಕೆಲಸ ಮಾಡಿದರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಆದರೆ ಇಂದು ಅಂಬೇಡ್ಕರರನ್ನು ಕೇವಲ ದಲಿತರಿಗಾಗಿ ಓಡಾಡಿದರು ಎಂಬುದನ್ನು ಸಮಾಜದಲ್ಲಿ ತುಂಬುವ ವ್ಯವಸ್ಥೆ ನಡೆಯುತ್ತಿದೆ. ಆದರೆ ಅಂಬೇಡ್ಕರ್ ಕೇವಲ ದಲಿತ ನಾಯಕರಲ್ಲ, ಇಡೀ ಸಮಾಜದ ಎಲ್ಲ ವರ್ಗಗಳ ನಾಯಕರು” ಎಂದು ಸ್ಮರಿಸಿದರು.

“ಅಂಬೇಡ್ಕರ್ ಆರ್ಥಿಕ ವಲಯದಲ್ಲಿ, ಸಾಮಾಜಿಕ ವಲಯದಲ್ಲಿ, ಮಾನವಿಯತೆಗಾಗಿ, ಮಹಿಳೆಯರಿಗಾಗಿ, ಬೇರೆ ಬೇರೆ ವಲಯದಲ್ಲಿ ಮಾಡಿರುವಂತಹ ಕೆಲಸಗಳನ್ನು ಜನರಿಗೆ ತಿಳಿಸಲು ಸಾಧ್ಯವಾಗಿಲ್ಲ. ಜನ ಕೇವಲ ಅಂಬೇಡ್ಕರ್ ರನ್ನು ದಲಿತ ಅಂಬೇಡ್ಕರ್, ಸಂವಿಧಾನ ಅಂಬೇಡ್ಕರ್ ಎಂದಷ್ಟೇ ಯೋಚಿಸುತ್ತಿರುವುದು ಸಾಮಾಜಿಕ ವಿಪರ್ಯಾಸ” ಎಂದು ವಿಷಾದ ವ್ಯಕ್ತಪಡಿಸಿದರು.

“ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚೆಚ್ಚು ಅಂಬೇಡ್ಕರ್ ರನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಭಾರತದ ಇಂದಿನ ಅರ್ಥ ವ್ಯವಸ್ಥೆಯಲ್ಲಿ ಅಲ್ಲದೇ ಸಮಾಜ ವಿಜ್ಞಾನ, ರಾಜ್ಯಶಾಸ್ತ್ರ ಮತ್ತು ಆರ್ಥಿಕ ಸಮಾನತೆಗೆ ಅಂಬೇಡ್ಕರ್ ಹೇಗೆ ಹೆಚ್ಚು ಪ್ರಸ್ತುತರಾಗುತ್ತಾರೆ ಎಂಬುದನ್ನು ಶಿಕ್ಷಣ ವ್ಯವಸ್ಥೆಯಲ್ಲಿ ವಿಶ್ವವಿದ್ಯಾನಿಲಯಗಳು, ಶಿಕ್ಷಣ ತಜ್ಞರು, ಪ್ರಾಧ್ಯಾಪಕರು ತಿಳಿಸುವ ಅವಶ್ಯಕತೆ ಇದೆ” ಎಂದು ಪ್ರತಿಪಾದಿಸಿದರು.
“ದೇಶದಲ್ಲಿ ಬಹುತ್ವದ ವಿನಾಶ ಮತ್ತು ಏಕತ್ವದ ವ್ಯಸನ ಇಂದು ಕೆಲವು ವರ್ಗಗಳಿಂದ ಪ್ರಾರಂಭವಾಗಿದೆ. ಆದರೆ ಅಂಬೇಡ್ಕರ್ ಬಹುತ್ವದ, ಸೌಹಾರ್ದತೆಯ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಭಾರತವನ್ನು ಕಾಣಲು ಬಯಸಿದ್ದರು. ಈ ದೇಶದ ಸಂಪತ್ತು ಮತ್ತು ಅಧಿಕಾರ ಎಲ್ಲ ವರ್ಗಗಳಿಗೂ ಸಮಾನ ಹಂಚಿಕೆಯಾಗಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ಇಂದು ಕೇವಲ 1% ದೇಶದ ಸಂಪತ್ತು ಬಹು ಸಂಖ್ಯಾತ 87% ಜನರಲ್ಲಿ ಕೈಯಲ್ಲಿದೆ. 67% ಸಂಪತ್ತು ಕೇವಲ ಶೇಕಡಾ ಒಂದರಷ್ಟು ಜನರ ಕೈಯಲ್ಲಿದೆ. ಇಂತಹ ಸ್ಥಿತಿಯಲ್ಲಿ ನಾವು ಭಾರತವನ್ನು ಸಮೃದ್ಧ ಭಾರತ ಎಂದು ಕರೆಯುತ್ತಿದ್ದೇವೆ, ಇದು ಹಾಸ್ಯಾಸ್ಪದವಾಗಿದೆ. ಇದನ್ನು ಹೋಗಲಾಡಿಸುವ ಸಲುವಾಗಿಯೇ ಅಂಬೇಡ್ಕರ್ ಅವರು ವಿಮೆ, ಬೃಹತ್ ಕೈಗಾರಿಕೆ ಮತ್ತು ಭೂಮಿ ಸರ್ಕಾರದ ಅಧೀನದಲ್ಲಿ ಇರಬೇಕು ಎಂದು ಆರ್ಥಿಕತೆಯಲ್ಲಿ ಪ್ರತಿಪಾದಿಸಿದರು. ಆದರೆ ಇಂದು, ರೈಲ್ವೆ , ವಿಮಾನ ನಿಲ್ದಾಣ, ರಕ್ಷಣಾ ವ್ಯವಸ್ಥೆಯು ಸೇರಿದಂತೆ ಬೃಹತ್ ಸಾರ್ವಜನಿಕ ಉದ್ಯಮಗಳನ್ನು ಸರ್ಕಾರಗಳು ಖಾಸಗಿಯವರಿಗೆ ಮಾರಾಟ ಮಾಡುತ್ತಿವೆ” ಎಂದು ಆರೋಪಿಸಿದರು.

“ಅಸಮಾನತೆಗಳಿದ್ದಲ್ಲಿ ಸಾಮಾಜಿಕ ವ್ಯವಸ್ಥೆ ಹದಗೆಡುತ್ತದೆ ಎಂದು ಅಂಬೇಡ್ಕರ್ ತಿಳಿಸಿದರು. ಈ ಕಾರಣಕ್ಕಾಗಿ ನಕ್ಸಲ್ ಚಳುವಳಿ ಹುಟ್ಟಿಕೊಂಡಿತು. ಸ್ವತಂತ್ರ ಚಳುವಳಿಯ ವೇಳೆ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬಹುಪಾಲು ಜನರನ್ನು ಒಂದೆಡೆ ಇಟ್ಟು ಅಂಬೇಡ್ಕರರನ್ನು ಒಂದೆಡೆ ಇಟ್ಟು ನೋಡಿದರೆ ಎಲ್ಲರೂ ಹಿಂದೂ ರಾಷ್ಟ್ರದ ರಚನೆಗೆ ಪರವಾಗಿದ್ದರೆ, ಅಂಬೇಡ್ಕರ್ ಮಾತ್ರ ಬಹುತ್ವದ, ಜಾತ್ಯತೀತ ಭಾರತದ ಪರವಾಗಿದ್ದರು. ಅದನ್ನು ಸಂವಿಧಾನದಲ್ಲಿ ಸಕಾರಗೊಳಿಸಿದ್ದಾರೆ” ಎಂದು ವಿವರಿಸಿದರು.

“ಆದರೆ ಸಂವಿಧಾನವನ್ನು ಜಂತರ್ ಮಂತರ್ ನಲ್ಲಿ ಸುಟ್ಟರೂ ಕೂಡ ಅವರನ್ನು ಶಿಕ್ಷಿಸದ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ಹಾಗಾದರೆ ಸಂವಿಧಾನ ಯಾವುದಾದರೂ ಜಾತಿಯನ್ನಾದರೂ ವಿರೋಧಿಸಿದೆ ಎಂದರೆ ನಾವು ಅದನ್ನು ವಿರೋಧಿಸೋಣ. ಆದರೆ ಅಂಬೇಡ್ಕರ್ ಅವರು ತಮ್ಮ ಜೀವನದದ್ದಕ್ಕೂ ಅಸಮಾನತೆ, ಅಸ್ಪೃಶ್ಯತೆ, ಅವಮಾನಗಳಿಂದ ಬೆಂದು ನೊಂದರೂ ಕೂಡ, ಸಂವಿಧಾನ ರಚಿಸುವಾಗ ಯಾವುದೇ ಜಾತಿ ವರ್ಗಗಳಿಗೆ ಭೇದವೆಣಿಸದೆ ಎಲ್ಲರಿಗೂ ಸಮಾನತೆಯ ಸಂವಿಧಾನವನ್ನು ನೀಡಿದ್ದಾರೆ. ಅದರೊಳಗೆ ಸಾಮಾಜಿಕ, ಜಾತಿ, ಲಿಂಗ, ಧಾರ್ಮಿಕ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿ ಸಾವಿರಾರು ವರ್ಷಗಳಿಂದ ಶೋಷಣೆಗೆ ಅಸ್ಪೃಶ್ಯತೆ ಒಳಗಾಗಿದ್ದ ಸಮುದಾಯಗಳಿಗೆ ಉದ್ಯೋಗ ಮತ್ತು ಶೈಕ್ಷಣಿಕವಾಗಿ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದಾರೆ” ಎಂದು ಸಮರ್ಥಿಸಿದರು.

ಕಾರ್ಯಕ್ರಮದಲ್ಲಿ ಈದಿನ ಡಾಟ್ ಕಾಮ್ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಬರಹಗಳ ಕುರಿತ ಅರಿವೇ ಅಂಬೇಡ್ಕರ ವಿಶೇಷ ಸಂಚಿಕೆಯನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಶಿಕ್ಷಣ ವ್ಯವಸ್ಥೆ ಬ್ರಾಹ್ಮಣ್ಯ ಸಿದ್ಧಾಂತದ ಪ್ರಭಾವದಲ್ಲಿದೆ: ಚಿಂತಕ ವಿಎಲ್ಎನ್
ಕಾರ್ಯಕ್ರಮದಲ್ಲಿ ದಾವಣಗೆರೆ ವಿವಿ ಕುಲಪತಿ ಪ್ರೊ ಬಿಡಿ ಕುಂಬಾರ್, ವಿವಿ ಕುಲಸಚಿವ ಶಬ್ಬೀರ್ ಭಾಷಾ ಗಂಟಿ, ಲೇಖಕ ಹಾಗೂ ಚಿಂತಕ ವಿ ಎಲ್ ನರಸಿಂಹಮೂರ್ತಿ, ವಕೀಲರು, ಸಾಮಾಜಿಕ ಹೋರಾಟಗಾರ್ತಿ ರಾಜಲಕ್ಷ್ಮಿ ಅಂಕಲಗಿ, ಈದಿನ ಡಾಟ್ ಕಾಮ್ ಕೇಂದ್ರ ಸಂಯೋಜಕ ಅನಿಲ್ ಕುಮಾರ್ ಚಿಕ್ಕದಾಳವಟ್ಟ, ಇಂಗ್ಲೀಷ್ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿ ಡಾ. ಫಕ್ಕಿರೇಶ ಹಳ್ಳಳ್ಳಿ, ಸಹಾಯಕ ಪ್ರಾಧ್ಯಾಪಕರಾದ ಡಾ. ರವಿಕುಮಾರ ಎಸ್ ಕುಂಬಾರ, ಪ್ರೊ. ಯಜ್ಞಶ್ರೀ, ಮದಕರಿನಾಯಕ, ಈದಿನ ಡಾಟ್ ಕಾಮ್ ತುಮಕೂರು ಜಿಲ್ಲಾ ವರದಿಗಾರ ಚಂದನ್, ದಾವಣಗೆರೆ ಜಿಲ್ಲಾ ವರದಿಗಾರ ವಿನಾಯಕ್ ಚಿಕ್ಕಂದವಾಡಿ ಹಾಗೂ ವಿಶ್ವವಿದ್ಯಾಲಯ, ಪ್ರಾದ್ಯಾಪಕ ವರ್ಗ, ಸಿಬ್ಬಂದಿ ವರ್ಗ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು, ಮಾನವ ಬಂಧುತ್ವ ವೇದಿಕೆಯ ಶಿವಕುಮಾರ್ ಮಾಡಾಳ್ ಹಾಗೂ ಮುಖಂಡರು, ದಲಿತ ಸಂಘಟನೆಗಳ ಮುಖಂಡರಾದ ನಿವೃತ್ತ ಎಸ್ಪಿ ರವಿ ನಾರಾಯಣ್, ಮಲ್ಲೇಶ್, ನಿರಂಜನ್, ಮಂಜುನಾಥ್ ಕುಂದುವಾಡ, ಲಿಂಗರಾಜು ಹಾಗೂ ಕಾರ್ಯಕರ್ತರು, ದಲಿತ ವಾಣಿಜ್ಯೋದ್ಯಮಿಗಳ ಸಂಘದ ಜಿಲ್ಲಾಧ್ಯಕ್ಷ ಮಂಜು ಕಬ್ಬೂರು ಹಾಗೂ ಮುಖಂಡರು ಭಾಗವಹಿಸಿದ್ದರು.