ಸಚಿವ ಕೆ.ಎನ್. ರಾಜಣ್ಣ ಅವರು ರಾಜಕೀಯ, ಸಹಕಾರ ಎಂದರೆ ಜನಸೇವೆ ಎಂದು ಭಾವಿಸಿದ್ದಾರೆ. ಸಮಾಜದಲ್ಲಿನ ಎಲ್ಲ ಬಡವರ ಬಗೆಗೆ ಕಾಳಜಿ ಹೊಂದಿದ್ದಾರೆ. ಅವರ ಕಷ್ಟ ಸುಖಗಳಿಗೆ ಸ್ಪಂದಿಸುವುದು ಬಹಳ ದೊಡ್ಡ ಗುಣ. ಜಾತಿ, ಧರ್ಮ ಎಂಬ ಬೇಧವಿಲ್ಲದೇ ಬಡ ಮಕ್ಕಳ ಶಾಲಾ ಶಿಕ್ಷಣಕ್ಕೆ ರಾಜಣ್ಣ ನೆರವು ನೀಡುತ್ತಾ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಕೆ.ಎನ್ ರಾಜಣ್ಣ ಅವರ 75 ನೇ ಜನ್ಮ ದಿನದ ಅಮೃತ ಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮಾನತೆಯನ್ನು ತೊಲಗಿಸಿ ಎಲ್ಲರೂ ಮುಖ್ಯ ವಾಹಿನಿಗೆ ತರಬೇಕು ಎನ್ನುವುದೇ ನಿಜವಾದ ರಾಜಕೀಯ ಗುರಿ. ಸಂವಿಧಾನ ಕೂಡ ಇದನ್ನೇ ಹೇಳುತ್ತದೆ. ಮನುಷ್ಯತ್ವ ಎನ್ನುವುದು ಪ್ರತಿಯೊಬ್ಬರಲ್ಲಿಯೂ ಇರಬೇಕು. ಅದು ಇದ್ದಾಗ ಮಾತ್ರ ಸಮ ಸಮಾಜ, ಬದಲಾವಣೆ ತರಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಗೂ ಆರ್ಥಿಕ ಹಾಗೂ ಸಮಾಜಿಕ ಶಕ್ತಿಯನ್ನು ತುಂಬಬೇಕು. ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯ ಸಾರ್ಥಕವಾಗಬೇಕಾದರೆ ಎಲ್ಲರೂ ಸ್ವಾವಂಬಿಗಳಾಗಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ವೈರುಧ್ಯ ಇರುವ ಸಮಾಜದಲ್ಲಿ ಸಮಾನ ಅವಕಾಶಗಳನ್ನು ನೀಡಿ ಸಮ ಸಮಾಜ ನಿರ್ಮಾಣವಾಗದೇ ಹೋದರೆ ಪ್ರಜಾಪ್ರಭುತ್ವದ ಸೌಧವನ್ನು ಜನರೇ ಧ್ವಂಸ ಮಾಡುತ್ತಾರೆ ಎಂದೂ ಕೂಡ ಹೇಳಿದ್ದರು ಎಂದರು.

ದಲಿತರು ವಿದ್ಯಾವಂತರು, ಶ್ರೀಮಂತರಾದರೂ ಅವರನ್ನು ಏಕವಚನದಲ್ಲಿಯೇ ಮಾತನಾಡಿಸುತ್ತೇವೆ. ಇದು ದಾಸ್ಯದ ಸಂಕೇತ. ಮೀಸಲು ಕ್ಷೇತ್ರದಲ್ಲಿ ರಾಜಣ್ಣ ಸ್ಪರ್ಧೆ ಮಾಡದೇ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ರಾಜಕೀಯದಲ್ಲಿ ಸೋಲು ಗೆಲವು ಸಾಮಾನ್ಯ ಎಂದರು.
ಹಣೆಬರಹ, ಕರ್ಮ ಸಿದ್ದಾಂತಗಳನ್ನು ಬಸವಾದಿ ಶರಣರು ತ್ಯಜಿಸಿದ್ದರು. ದೇವರು ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ. ಮೇಲು ಕೀಳು ಎಂಬುದಿಲ್ಲ. ಹುಟ್ಟಿನಿಂದ ಯಾರೂ ದಡ್ಡರೂ ಅಲ್ಲ, ಮೇಧಾವಿಗಳೂ ಅಲ್ಲ. ಅವಕಾಶಗಳು ಸಿಗಬೇಕು ಎಂದರು. ರಾಜಣ್ಣ ಅವರು ದಲಿತ ಜನಾಂಗದಲ್ಲಿ ಹುಟ್ಟಿ ಸಮರ್ಥ ಸಹಕಾರಿಯಾವುದು ಸುಲಭವಲ್ಲ. ಸಂವಿಧಾನ ಇರದೇ ಹೋಗಿದ್ದರೆ ನಾವ್ಯಾರೂ ಮುಖ್ಯವಾಹಿನಿಗೆ ಬರಲು ಸಾಧ್ಯವಿರಲಿಲ್ಲ ಎಂದರು. ನಮ್ಮ ಸರ್ಕಾರ ಬಂದ ನಂತರ ಸಮಾಜದಲ್ಲಿ ಬಡತನ ತೊಡೆದುಹಾಕಲು ಸಾಮಾಜಿಕ, ಆರ್ಥಿಕ ಶಕ್ತಿಯನ್ನು ತುಂಬುವ ಪ್ರಯತ್ನವನ್ನು ಮಾಡಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ರಾಜಣ್ಣ ಅವರಿಗೆ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿದ ಮುಖ್ಯಮಂತ್ರಿಗಳು ನೂರು ವರ್ಷಗಳಿಗೂ ಹೆಚ್ಚು ಕಾಲ ಬಾಳಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ಸಾಹಿತಿ ಬರಗೂರು ರಾಮಚಂದ್ರಪ್ಪ, ಕೆ.ಎನ್.ರಾಜಣ್ಣ ಅವರ ಕುಟುಂಬ ವರ್ಗ ಇದ್ದರು.