ನಗರ ಪ್ರದೇಶ ಅಥವಾ ನಗರೀಕರಣವೇ ಅಭಿವೃದ್ಧಿ ಎಂದು ಕೆಲವರಿಂದ ನಂಬಿಸಲಾಗಿದೆ. ಕೃಷಿಗಿರುವ ಸಾಮಾಜಿಕ ಪ್ರತಿಷ್ಠೆ ಕಡಿಮೆಯಾಗಿದೆ. ಆದಾಗ್ಯೂ ಕೃಷಿ ಹಾಗೂ ಗ್ರಾಮ ಪ್ರಧಾನವಾಗಿರುವ ಜಿಲ್ಲೆಯಾಗಿಯೂ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂಬುದನ್ನು ಮಂಡ್ಯ ಜಿಲ್ಲೆ ಸಾಧಿಸಿ ತೋರಿಸುತ್ತಿದೆ. ಆದರೆ, ಇಲ್ಲಿನ ಜನರು ಅದನ್ನು ಅರ್ಥೈಸಿಕೊಂಡು ಕೃಷಿಗೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಕಾರ್ಯಸಾಧುವಾದ ಅಭಿವೃದ್ಧಿಯ ಮಾದರಿಯನ್ನು ಸಾಧ್ಯಮಾಡಬೇಕಿದೆ ಎಂದು ಜಾಗೃತ ಕರ್ನಾಟಕ ಸಂಘಟನೆಯ ಡಾ. ವಾಸು ಹೆಚ್ ವಿ ಹೇಳಿದರು.
ಮಂಡ್ಯದಲ್ಲಿ ನಡೆದ ಕೃಷಿ ಹಾಗೂ ಗ್ರಾಮೀಣ ಭಾಗಗಳು ಎಲ್ಲಾ ರೀತಿಯಲ್ಲಿಯೂ ನಗಣ್ಯವಾಗುತ್ತಿರುವಾಗ ಗ್ರಾಮ ಮತ್ತು ಕೃಷಿ ಪ್ರಧಾನವಾದ ಜಿಲ್ಲೆಗಳ ಅಭಿವೃದ್ಧಿ ಹೇಗೆ ಸಾಧ್ಯ ಎಂಬ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, “ರೈತರ ಕೃಷಿ ಭೂಮಿಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಚನ್ನರಾಯಪಟ್ಟಣದಲ್ಲಿ ಅತಿ ದೊಡ್ಡ ಹೋರಾಟವೊಂದು ನಡೆದಿದೆ. ಇಡೀ ಸರ್ಕಾರವೇ ತಲೆಕೆಡಿಸಿಕೊಂಡು, ಯಾವ ರೀತಿ ನಿರ್ಧಾರ ಮಾಡಬೇಕು? ಏನೆಂದು ಘೋಷಣೆ ಮಾಡಬೇಕು? ಎಂಬ ಮಟ್ಟಿಗೆ ತಲೆಕೆಡಿಸಿಕೊಂಡಿರುವ ಮಹತ್ವದ ಹೋರಾಟ ಆಗಿದ್ದರೂ, ಈ ಕ್ಷಣಕ್ಕೆ ಆಯಾ ಹೋರಾಟ ಭಾವನಾತ್ಮಕವಾಗಿದ್ದರೂ ಕೂಡ ಮುಂದಿನ 25 ವರ್ಷಗಳಲ್ಲಿ ಈಗಿನ ಕೃಷಿ ಭೂಮಿ ಅಂದಿಗೂ ಕೂಡ ಕೃಷಿ ಭೂಮಿಯೇ ಆಗಿ ಉಳಿಯಲಿದೆಯೇ ಎಂಬ ಮೂಲಭೂತ ಪ್ರಶ್ನೆಯನ್ನು ಎಲ್ಲರೂ ಸಹ ಕೇಳಿಕೊಳ್ಳಬೇಕು. ಕೃಷಿ ಭೂಮಿ ಮುಂದಿನ ದಿನಗಳಲ್ಲಿಯೂ ಕೂಡ ಕೃಷಿ ಭೂಮಿಯೇ ಆಗಿರಬೇಕು ಎಂದರೆ ಕೃಷಿಗೆ ಸಾಮಾಜಿಕ ಪ್ರತಿಷ್ಠೆ ಬರಬೇಕು” ಎಂದರು.
“ಜನರ ಸಾಮಾಜಿಕ ಮನಶಾಸ್ತ್ರದ ಬಗ್ಗೆ ಪ್ರಯೋಗಗಳು ನಡೆಯಬೇಕಿದೆ. ಜನರು ವಲಸೆ ಹೋಗುವುದನ್ನು ತಡೆಯುವ ಕೆಲಸವಾಗಬೇಕಿದೆ. ವ್ಯವಸ್ಥಿತ ಸಂಪರ್ಕ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ, ಶಿಕ್ಷಣ, ವಸತಿ, ಮನೋರಂಜನೆ ಹಾಗೂ ಬಹು ಮುಖ್ಯವಾಗಿ ಸ್ಥಿರ ಆದಾಯವುಳ್ಳ ಉದ್ಯೋಗ ಅಥವಾ ಆದಾಯದ ಮೂಲಗಳು ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಸಾಧ್ಯ ಮಾಡಲು ಕೃಷಿ ಆಧಾರಿತವಾಗಿ ಹಾಗೂ ಮಾನವ ಅಭಿವೃದ್ಧಿ ದೃಷ್ಟಿಯಿಂದ ರಚನಾತ್ಮಕ ಕೆಲಸ, ಬೇಕಾದ ಆಂದೋಲನ ಮಾಡಬೇಕು ಹಾಗೂ ವ್ಯವಸ್ಥಿತವಾಗಿ ರಾಜಕೀಯ ಪರಿಸ್ಥಿತಿಗಳನ್ನು ಅರ್ಥೈಸಿಕೊಂಡು ನಿಲುವುಗಳನ್ನು ತೆಗೆದುಕೊಳ್ಳುವಂತೆ ಮಾಡುವ ಬಾಬಾ ಸಾಹೇಬರು, ಮಹಾತ್ಮ ಗಾಂಧಿ ಅವರು, ಬುದ್ಧ ಬಸವಣ್ಣ ಅವರು ತೋರಿದ ಆಧ್ಯಾತ್ಮಿಕ ಚಿಂತನೆಯ ಬೀಜವನ್ನು ಬಿತ್ತುವ ಕೆಲಸ ಮಾಡಬೇಕು” ಎಂದು ಹೇಳಿದರು.
ಇದನ್ನೂ ಓದಿ: ಮಂಡ್ಯ | ಕೃಷಿಯೇ ನಮ್ಮ ಭವಿಷ್ಯ: ಕವಿತಾ ಕುರುಗಂಟಿ ಅಭಿಮತ
“ಅಭಿವೃದ್ಧಿ ನಿಟ್ಟಿನಲ್ಲಿ ಕೃಷಿಯಿಂದ ಆದಾಯ, ಕೃಷಿ ಜೊತೆಗೆ ಇತರ ಕಸುಬುಗಳಿಂದ ಬರುವ ಆದಾಯ ಹೆಚ್ಚಿಸುವುದು, ಕೃಷಿಯೇತರ ಕಸುಬುಗಳು ಅಂದರೆ, ಪದಾರ್ಥಗಳ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದರಿಂದ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಿ ಕೃಷಿಯಿಂದಲೇ ಕೃಷಿಗಿರುವ ಸಾಮಾಜಿಕ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಮಂಡ್ಯದಲ್ಲಿ ಅಗ್ರಿ ಟೆಕ್ ಪ್ರಾರಂಭ ಮಾಡಬೇಕು ಎಂಬ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕಿದೆ” ಎಂದರು.
ವಿಚಾರಗೋಷ್ಠಿಯಲ್ಲಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನಂದಿನಿ ಜಯರಾಮ್ ಮಾತನಾಡಿ, ಆಂಧ್ರಪ್ರದೇಶದಲ್ಲಿ 9 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಸಾವಯವ ನೈಸರ್ಗಿಕ ಕೃಷಿ ಮಾಡಿ, ಇಂದು ಆರ್ಥಿಕವಾಗಿ ಸಬಲರಾದ ರೈತ ಕುಟುಂಬಗಳಾಗಿ ಮುಂದುವರಿದಿವೆ. ಅದೇ ರೀತಿ ಮಂಡ್ಯದಲ್ಲಿಯೂ ಕೂಡ ನೈಸರ್ಗಿಕ ಕೃಷಿ ಮಾಡುವವರ ಪ್ರಮಾಣ ಹೆಚ್ಚಾಗಬೇಕು, ಜಾಗೃತ ಕರ್ನಾಟಕ ತನ್ನ ವಿಚಾರಗೋಷ್ಠಿಗಳು ಮುಂದುವರಿಸಿಕೊಂಡು ಹೋಗಬೇಕು” ಎಂದರು.