- ರಸ್ತೆಯ ಮೆಲ್ಭಾಗಕ್ಕೆ 3 ಎಂ.ಎಂನ ಕೆಂಗಂದು ಬಣ್ಣ ಪಾಲೀಶ್: ಬಿಬಿಎಂಪಿ ವಿಶೇಷ ಆಯುಕ್ತ
- ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಕುಸಿದ ದೇವಸ್ಥಾನದ ಗೋಡೆ
ಬೆಂಗಳೂರಿನ ವಿವಿ ಪುರಂನ ತಿಂಡಿ ಬೀದಿಯಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಒಗದಿಸುವ ನಿಟ್ಟಿನಲ್ಲಿ ಹಾಗೂ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಜ್ಜನ್ ರಾವ್ ವೃತ್ತ ಮತ್ತು ಮಿನರ್ವ ವೃತ್ತದ ನಡುವೆ ಇರುವ ಸುಮಾರು 200 ಮೀಟರ್ ಉದ್ದದ ರಸ್ತೆಯ ಅಭಿವೃದ್ಧಿಯ ಕಾರ್ಯ ನಡೆಯುತ್ತಿದೆ” ಎಂದು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ಹೇಳಿದರು.
ವಿವಿಪುರಂ ವಾರ್ಡ್ನಲ್ಲಿ ಬರುವ ಫುಡ್ ಸ್ಟ್ರೀಟ್(ತಿಂಡಿ ಬೀದಿ) ಹಾಗೂ ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಬರುವ ಗಂಗಾಧರೇಶ್ವರ ದೇವಸ್ಥಾನ ಗೋಡೆ ಕುಸಿದಿರುವ ಸ್ಥಳಕ್ಕೆ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ರವರು ತೆರಳಿ ಪರಿಶೀಲನೆ ನಡೆಸಿದರು.
“ಬೆಂಗಳೂರಿನ ವಿವಿ ಪುರಂನಲ್ಲಿರುವ ತಿಂಡಿ ಬೀದಿಯ ಅಭಿವೃದ್ಧಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ರಸ್ತೆಗೆ ಅನುಗುಣವಾಗಿ ಬೆಡ್ ಕಾಂಕ್ರಿಟ್ ಹಾಕಿ 5 ಮೀಟರ್ ಕಾಂಕ್ರೀಟ್ ರಸ್ತೆಯ ಕೆಲಸ ಪ್ರಗತಿಯಲ್ಲಿದ್ದು, ಎರಡೂ ಬದಿ 3 ಮೀಟರ್ ಪಾದಚಾರಿ ಮಾರ್ಗ, 25 ವಿದ್ಯುತ್ ದೀಪಗಳ ಅಳವಡಿಕೆ ಕೆಲಸ ಸೇರಿದಂತೆ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ. ಇನ್ನೂ ಕೆಲವು ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಈಗಾಗಲೇ ಒಳಚರಂಡಿ ಸಂಪರ್ಕ, ನೀರು ಸರಬರಾಜು ಸಂಪರ್ಕ, ಮಳೆನೀರುಗಾಲುವೆ ಸಂಪರ್ಕ, ಕೇಬಲ್ಗಳ ಲೈನ್ ಡಕ್ಟ್ ಹಾಗೂ ಕೇಬಲ್ ಚೇಂಬರ್ಗೆ ಸಂಬಂಧಿಸಿದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ”
ಕಾಂಕ್ರೀಟ್ ರಸ್ತೆಗೆ ಕೆಂಗಂದು ಬಣ್ಣ ಅಳವಡಿಕೆ
“ಫುಡ್ ಸ್ಟ್ರೀಟ್ ನ 200 ಮೀಟರ್ ಉದ್ದದ ರಸ್ತೆಯಲ್ಲಿ ನಿರ್ಮಿಸುತ್ತಿರುವ 5 ಮೀಟರ್ ಅಗಲದ ಕಾಂಕ್ರೀಟ್ ರಸ್ತೆಯ ಮೆಲ್ಭಾಗಕ್ಕೆ 3 ಎಂ.ಎಂನ ಕೆಂಗಂದು ಬಣ್ಣ ಹಾಕಲಾಗುತ್ತಿದೆ. ಶೇ. 70 ರಷ್ಟು ಕಾಂಕ್ರೀಟ್ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು, ಸಂಪೂರ್ಣ ಕಾಂಕ್ರೀಟ್ ರಸ್ತೆ ಪೂರ್ಣಗೊಂಡ ಬಳಿಕ ರಸ್ತೆಗೆ ಕೆಂಗಂದು ಬಣ್ಣದ ಪಾಲೀಶ್ ಮಾಡಲಾಗುತ್ತದೆ. ಇದರಿಂದ ರಸ್ತೆ ಆಕರ್ಷಕವಾಗಿ ಕಾಣಲಿದೆ” ಎಂದು ತಿಳಿಸಿದರು.
ಗಂಗಾಧರೇಶ್ವರ ದೇವಸ್ಥಾನದ ಗೋಡೆ ದುರಸ್ತಿ ಕಾರ್ಯ
ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆಯ ಬಳಿಯ ಗಂಗಾಧರೇಶ್ವರ ದೇವಸ್ಥಾನ ಬಳಿ ಆಗಸ್ಟ್ 1ರಂದು ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಚರಣೆಯ ವೇಳೆ ದೇವಾವಲಯದ ಮೇಲ್ಭಾಗದ ಗೋಡೆ ಕುಸಿದು ಬಿದ್ದಿದ್ದು, ಪಾಲಿಕೆ ವತಿಯಿಂದ ಗೋಡೆಯ ದುರಸ್ಥಿ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಜುಲೈನಲ್ಲಿ ವಾಡಿಕೆಗಿಂತ ಶೇ.3ರಷ್ಟು ಹೆಚ್ಚು ಮಳೆ
“ಗಂಗಾಧರೇಶ್ವರ ದೇವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರಲಿದ್ದು, ದೇವಾಲಯಕ್ಕೆ ಹೊಂದಿಕೊಂಡಂತಿರುವ ಅಂಗಡಿಯ ಮೇಲ್ಭಾಗದ ಗೋಡೆಗೆ ಅಂಗಡಿಯ ನಾಮಫಲಕ ಹಾಗೂ ಶೀಟ್ ಅನ್ನು ಅಳವಡಿಸಲಾಗಿತ್ತು. ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಜೆಸಿಬಿಯ ಮೂಲಕ ನಾಮಫಲಕ ಹಾಗೂ ಶೀಟ್ ಅನ್ನು ತೆರವುಗೊಳಿಸುವ ಸಮಯದಲ್ಲಿ ದೇವಾಲದ ಮೇಲ್ಭಾಗದ ಗೋಡೆ ತುಂಬಾ ಹಳೆಯದಾಗಿದ್ದ ಕಾರಣ ಗೋಡೆ ಕುಸಿದು ಬಿದ್ದಿದೆ. ಈ ಸಂಬಂಧ ಈಗಾಗಲೇ ಪಾಲಿಕೆ ವತಿಯಿಂದ ಗೋಡೆಯ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈ ವೇಳೆ ವಲಯ ಮುಖ್ಯ ಅಭಿಯಂತರರಾದ ರಾಜೇಶ್, ಕಾರ್ಯಪಾಲಕ ಅಭಿಯಂತರರಾದ ಮಹಂತೇಶ್, ಯರಪ್ಪ ರೆಡ್ಡಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.