ಗ್ರಾಮದ ಸ್ಮಶಾನ ಜಾಗವನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿ ಶವ ಸಂಸ್ಕಾರ ಮಾಡದೆ ಎರಡು ದಿನಗಳಿಂದ ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗ ಹೋಬಳಿಯ ಮಿಟ್ಟಹಳ್ಳಿಯಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗಿದೆ.
ಅಂತ್ಯಸಂಸ್ಕಾರ ಮಾಡಲು ಸ್ಮಶಾನ ಇಲ್ಲವೆಂದು ಹಾಗೂ ಅಂತ್ಯ ಸಂಸ್ಕಾರ ಮಾಡಲು ಒತ್ತುವರಿ ಮಾಡಿಕೊಂಡವರು ಜಾಗ ಕೊಡದೇ ಇರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಶವವಿಟ್ಟು ಪ್ರತಿಭಟನೆ ನಡೆಸಿದ ನಂತರ ಮೂರನೇ ದಿನ ಮೃತಪಟ್ಟವರ ಸ್ವಂತ ಜಮೀನಿನಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ.
ತಾಲೂಕಿನ ನಂದನಹೊಸಹಳ್ಳಿ ಸಮೀಪದ ರಂಗೇನಹಳ್ಳಿ ಗ್ರಾಮದ ಕೊಂಡಪ್ಪ ಎಂಬುವರು ಎರಡು ದಿನಗಳ ಹಿಂದೆ ಮೃತಪಟ್ಟಿದ್ದರು. ಸದರಿ ಗ್ರಾಮದ ಸಮೀಪವಿರುವ ಸರ್ವೆ ನಂ.10ರಲ್ಲಿ ಗ್ರಾಮಸ್ಥರು ಮೃತಪಟ್ಟವರನ್ನು ಮಣ್ಣು ಮಾಡಲು ಗುಣಿ ಅಗೆಯಲು ಹೋದಾಗ ಹಿಡುವಳಿ ಜಮೀನುದಾರರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವಿವಾದ ಹುಟ್ಟಿಕೊಂಡಿತ್ತು. ಕೆಂಚಾರ್ಲಹಳ್ಳಿ ಪೊಲೀಸರ ಬಂದೋಬಸ್ತ್ ನಲ್ಲಿ ತಾಲೂಕು ದಂಡಾಧಿಕಾರಿ ಸುದರ್ಶನ್ ಯಾದವ ರವರ ಮಾರ್ಗದರ್ಶನದಂತೆ ಕಂದಾಯ ಇಲಾಖೆ ಅಧಿಕಾರಿ ರವೀಶ್, ಗೋಕುಲ್, ನರಸಿಂಹಮೂರ್ತಿ, ಭೂಮಾಪನ ಇಲಾಖೆಯ ಸಭೆಯ ನಾಗಭೂಷಣ್ ಸೇರಿದ ತಂಡವು ಎರಡು ದಿನಗಳ ಕಾಲ ಸರ್ವೆ ಕಾರ್ಯ ನಡೆಸಿ ಸರ್ವೆ ನಂ.10ರ ಜಮೀನು ಹಿಡುವಳಿ ಜಮೀನು ಎಂದು ಗುರುತಿಸಿ ಅಲ್ಲಿಯೇ ಪಕ್ಕದಲ್ಲಿದ್ದ ಸರ್ಕಾರಿ ಜಮೀನಿನಲ್ಲಿ ಸ್ಮಶಾನದ ಜಾಗವನ್ನು ಗುರುತಿಸಿ ಕೊಟ್ಟಿದೆ. ನಂತರ ಅದೇ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಿಕೊಳ್ಳಿ ಎಂದು ತಾಲೂಕು ದಂಡಾಧಿಕಾರಿಗಳು ಮೃತರ ಕುಟುಂಬಸ್ಥರಿಗೆ ಹೇಳಿದಾಗ ಇದಕ್ಕೆ ಒಪ್ಪದ ಕುಟುಂಬಸ್ಥರು ಸರ್ಕಾರಿ ಜಾಗದಲ್ಲಿ ಸ್ಮಶಾನ ಗುರುತಿಸಿರುವ ಪಕ್ಕದಲ್ಲಿಯೇ ಪುರಾತನ ಕಾಲದ ದೇವಸ್ಥಾನ ಇದೆ. ನಾವು ಆ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಹೇಳಿ ಕೊಂಡಪ್ಪನವರ ಸ್ವಂತ ಜಾಗದಲ್ಲೇ ಅಂತ್ಯ ಸಂಸ್ಕಾರ ಮಾಡಿ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ.

ಮೃತರ ಕುಟುಂಬಸ್ಥರಾದ ಚಲಪತಿ, ಹರೀಶ್ ಎಂಬುವರು ಮಾಧ್ಯಮದವರೊಂದಿಗೆ ಮಾತನಾಡಿ ಅಧಿಕಾರಿಗಳು ಸ್ಮಶಾನಕ್ಕಾಗಿ ನಮಗೆ ಸೂಕ್ತ ರೀತಿಯಲ್ಲಿ ನ್ಯಾಯ ಕೊಡಿಸದೆ ಇರುವ ಹಿನ್ನೆಲೆಯಲ್ಲಿ ಸ್ಮಶಾನಕ್ಕಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ. ಹೋರಾಟವನ್ನು ಕಾನೂನು ಬದ್ಧವಾಗಿ ಮುಂದುವರಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಚಿಂತಾಮಣಿ | ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಾಜಿ ಸೈನಿಕನ ಪತ್ನಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು
ತಾಲೂಕು ದಂಡಾಧಿಕಾರಿ ಸುದರ್ಶನ್ ಯಾದವ್ ಮಾತನಾಡಿ, ರಂಗೇನಹಳ್ಳಿ ಗ್ರಾಮಸ್ಥರು ಗ್ರಾಮದ ಸರ್ವೆ ನಂ.10ರಲ್ಲಿ ಪುರಾತನ ಕಾಲದಿಂದಲೂ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದೇವೆ. ಈ ಜಾಗದಲ್ಲಿ ಸ್ಮಶಾನವಿದೆಯೆಂದು ಮನವಿ ಸಲ್ಲಿಸಿದ್ದರು. ಅದರಂತೆ ಸರ್ವೆ ಅಧಿಕಾರಿಗಳು ಸರ್ವೆ ನಡೆಸಿ ಸರ್ವೆ ನಂಬರ್ ಹತ್ತರ ಜಮೀನು ಹಿಡುವಳಿದಾರರ ಜಮೀನು ಆಗಿದೆ ಎಂದ ಕಾರಣಕ್ಕೆ ಪಕ್ಕದಲ್ಲಿಯೇ 10 ಗುಂಟೆ ಜಮೀನು ಮೀಸಲಿಟ್ಟು ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
ಇನ್ನೂ ಎರಡು ದಿನಗಳ ಕಾಲ ಗ್ರಾಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ಪೊಲೀಸರು ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.