ಅಂಧಕಾರದಲ್ಲಿ ಮುಳುಗಿರುವ ಅಡವಿ ಮನೆಗಳ ರೈತರಿಗೆ ವಿದ್ಯುತ್ ಪೂರೈಸಬೇಕೆಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಬೆಳಗೆರೆ ಪಂಚಾಯಿತಿಯ ಚಳ್ಳಕೆರೆ ಮತ್ತು ಸಾಣಿಕೆರೆ ಗ್ರಾಮದ ಹಲವು ರೈತರು ಬೆಸ್ಕಾಂ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ಹಲವು ರೈತರು ತಮ್ಮ ಹೊಲಗಳಲ್ಲಿ ಮತ್ತು ಅಡವಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ತಮ್ಮ ಬದುಕಿಗಾಗಿ ಹಲವು ಬೆಳೆಗಳನ್ನು ಬೆಳೆಯುತ್ತಾ ತಮ್ಮ ಜಮೀನಿನಲ್ಲಿಯೇ ವಾಸಿಸುತ್ತಿದ್ದಾರೆ. ಆದರೆ, ವಿದ್ಯುತ್ ವ್ಯವಸ್ಥೆ ಇಲ್ಲ. ಅವರಿಗೆ ವಿದ್ಯುತ್ ದೀಪದ ಅವಶ್ಯಕತೆ ತುಂಬಾ ಇದೆ. ಹುಳು ಉಪ್ಪಟೆಗಳ ಉಪದ್ರ, ಕಾಡು ಪ್ರಾಣಿಗಳ ಕಾಟ, ಕಳ್ಳ ಕಾಕರಿಂದ ತಮ್ಮ ಕುಟುಂಬಸ್ಥರು ಮತ್ತು ತಾವು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ವಿದ್ಯುತ್ ಬೆಳಕಿನ ವ್ಯವಸ್ಥೆ ಬಹಳ ಅತ್ಯವಶ್ಯಕವಾಗಿದೆ. ಹಾಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬೆಳೆಗಳಿಗೆ ನೀಡುವ ಮೂರು ಲೈನ್ ಮೋಟಾರ್ ಚಾಲನೆ ಮಾಡಲು ಸಹಕಾರಿಯಾಗುವ ವಿದ್ಯುತ್ ಸಂಪರ್ಕವನ್ನು ಬೆಳಗಿನ ಜಾವದಲ್ಲಿ ನೀಡುತ್ತಿದ್ದು, ರಾತ್ರಿಯ ಸಮಯದಲ್ಲಿ ಎಂದಿನಂತೆ ನಿರಂತರದ ವಿದ್ಯುತ್ ಪೂರೈಕೆಯ ವ್ಯವಸ್ಥೆ ಇಲ್ಲದೆ ಹೊಲದ ಮನೆಗಳಲ್ಲಿ ಮತ್ತು ಕುಗ್ರಾಮದ ಸ್ಥಳಗಳಲ್ಲಿ ಈ ಮೂರು ಲೈನ್ ವಿದ್ಯುತ್ (ತ್ರೀ ಫೇಸ್) ಸಂಪರ್ಕದಲ್ಲಿ ಒಂದು ಲೈನ್ (ಸಿಂಗಲ್ ಫೇಸ್) ವಿದ್ಯುತ್ ನೀಡುತ್ತಿದ್ದ ಬೆಸ್ಕಾಂ ಮತ್ತು ವಿದ್ಯುತ್ ಇಲಾಖೆಗಳು ಇತ್ತೀಚಿನ ದಿನಗಳಲ್ಲಿ ಒಂದು ಲೈನ್ ವಿದ್ಯುತ್ ನೀಡುತ್ತಿಲ್ಲ” ಎಂದು ಆರೋಪಿಸಿದರು.
“ಒಂದು ಲೈನ್ ವಿದ್ಯುತ್ ಸಂಪರ್ಕವನ್ನು ರಾತ್ರಿಯಲ್ಲಿ ಅನಧಿಕೃತವಾಗಿ ಉಪಯೋಗಿಸಿಕೊಳ್ಳುವ ಸಂಭವ ಇರುವುದರಿಂದ ಅದನ್ನು ನೀಡಲಾಗುತ್ತಿಲ್ಲ ಎನ್ನುವ ಕಾರಣ ಹೇಳಿ ಏಕಾಏಕಿ ನಿಲ್ಲಿಸಿರುವುದರಿಂದ ಈ ಪಂಚಾಯಿತಿಯ ವ್ಯಾಪ್ತಿಯಲ್ಲಿ ಅಲ್ಲದೆ, ರಾಜ್ಯದ ಹಲವು ಹಳ್ಳಿಗಳ ಹೊಲ ಮತ್ತು ಮನೆ, ಅಡವಿಗಳಲ್ಲಿ ವಾಸಿಸುವ ಅನೇಕ ಮನೆಗಳು, ಪುಟ್ಟ ಗ್ರಾಮಗಳು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ” ಎಂದರು.ʻ
“ವಿದ್ಯಾಭ್ಯಾಸ ಮಾಡುವ ಮಕ್ಕಳು ಇರುವುದರಿಂದ ಹಾಗೂ ಅನಾರೋಗ್ಯ ಸಮಸ್ಯೆಯಾದರೆ ಅವರ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸಲು ಕರೆದೊಯ್ಯಲು ಬೀದಿ ಪೂರ್ತಿ ಕತ್ತಲಾಗಿರುತ್ತದೆ. ಆದುದರಿಂದ ಕಲಮರಹಳ್ಳಿ ಭಾಗದ ಬೆಸ್ಕಾಂ ಕಚೇರಿಗೆ ರಾತ್ರೊ ರಾತ್ರಿ ಗೊರ್ಲತ್ತು, ಬೆಳಗೆರೆ ಮತ್ತು ಕಲಮರಹಳ್ಳಿ ಮುಜುರೆ ಗ್ರಾಮಗಳ ರೈತರು ಹಲವು ದಿನಗಳಿಂದ ವಿದ್ಯುತ್ ಕಚೇರಿಗೆ ಭೇಟಿ ಕೊಟ್ಟು ಸಂಬಂಧಪಟ್ಟವರೊಂದಿಗೆ ಮನವಿ ಮಾಡಿದರೂ, ಫೋನ್ ಕರೆ ಅವಲತ್ತುಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ” ಎಂದು ಆರೋಪಿಸಿದರು.
“ನಮಗೆ ವಿದ್ಯುತ್ ಸೌಲಭ್ಯವನ್ನು ನೀಡಿ, ನಿರಂತರದ ವಿದ್ಯುತ್ ಆಗಿರಬಹುದು ಅಥವಾ ಮತ್ತೊಂದು ಬದಲಿ ವ್ಯವಸ್ಥೆ ಇರಬಹುದು, ಒಟ್ಟಾರೆ ನಮಗೆ ವಿದ್ಯುತ್ ಸಂಪರ್ಕ ಒದಗಿಸಿಕೊಡಬೇಕು” ಎಂದು ಬೆಸ್ಕಾಂ ಕಚೇರಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟಿಸುತ್ತಿದ್ದಾರೆ.
“ವಿದ್ಯುತ್ ಅವಘಡಗಳು ಮತ್ತು ಹಲವು ಸಮಸ್ಯೆಗಳಾದಾಗ ಬೆಸ್ಕಾಂ ಕಚೇರಿಗೆ ದೂರವಾಣಿ ಮಾಡಿದರೆ ಅವರು ಸರಿಯಾಗಿ ಸ್ಪಂದಿಸುವುದಿಲ್ಲ. ರೈತರಿಗೆ ತೊಂದರೆಯಾಗುವ ರೀತಿಯಲ್ಲಿ ಎಲ್ಸಿ ನೀಡುತ್ತಾರೆ. ವಿದ್ಯುತ್ ಸಮಸ್ಯೆಯ ಬಗ್ಗೆ ಬೆಸ್ಕಾಂ ನೌಕರರು ಸರಿಯಾಗಿ ಮಾಹಿತಿ ನೀಡುವುದಿಲ್ಲ. ಎಸ್ಒ ನಂತರದ ಉನ್ನತ ಅಧಿಕಾರಿಗಳ ಸಂಪರ್ಕ ಸಾಧ್ಯವಾಗದಿರುವುದರಿಂದ ಬೇಸತ್ತಿದ್ದೇವೆ” ಎಂದು ರೈತರು ಪ್ರತಿಭಟಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ತುಂಗಭದ್ರ ಎಡದಂಡೆ ಕಾಲುವೆ ಕೆಳ ಭಾಗಕ್ಕೆ ನೀರು ಹರಿಸಲು ರೈತ ಸಂಘ ಆಗ್ರಹ
“ಈ ಭಾಗದ ಅನೇಕ ರೈತರು ತಮ್ಮದೇ ಭೂಮಿ ನೀಡಿ, ಸೋಲಾರ್ ಪ್ಲಾಂಟ್ಗಳಿಂದ ವಿದ್ಯುತ್ ತಯಾರಾಗುತ್ತಿದೆ. ತಮ್ಮದೇ ಜಮೀನಿನ ಜಾಗದಲ್ಲಿ ಬೃಹತ್ ವಿದ್ಯುತ್ ಕಂಬಗಳಿಂದ ವಿದ್ಯುತ್ ಸರಬರಾಜಾಗಲು ಸಹಕಾರ ನೀಡಿದ್ದರೂ ಕೂಡ ಬೆಸ್ಕಾಂ ಇಲಾಖೆಯವರು ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ” ಎಂದು ರೈತರು ಆರೋಪಿಸಿದರು.
ರೈತರ ಪ್ರತಿಭಟನೆಗೆ ಸ್ಪಂದಿಸಿದ ಬೆಸ್ಕಾಂ ಕಚೇರಿಯ ನೌಕರರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದು, “ತುರ್ತಾಗಿ ವಿದ್ಯುತ್ ವ್ಯವಸ್ಥೆ ಕಲ್ಪಿಸುತ್ತೇವೆ” ಎಂದು ತಿಳಿಸಿದ್ದಾರೆ. ಬಳಿಕ ರೈತರು ಪ್ರತಿಭಟನೆ ನಿಲ್ಲಿಸಿ ತಮ್ಮ ಹೊಲದ ಮನೆಗಳಿಗೆ ಕುಗ್ರಾಮಗಳಿಗೆ ತೆರಳಿದರು.
ಈ ಸಮಯದಲ್ಲಿ ಬೆಳಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವು ಗ್ರಾಮದ ರೈತರು ಉಪಸ್ಥಿತರಿದ್ದರು.