ಯರಮರಸ್ ಹತ್ತಿರ ವಿಮಾನ ನಿಲ್ದಾಣ ನಿರ್ಮಾಣದ ಕಾಮಗಾರಿಗೆ ಕೆಕೆಆರ್ಡಿಬಿ ಮಂಡಳಿಯ ಎಸ್ಸಿಪಿ, ಟಿಎಸ್ಪಿ ಯೋಜನೆಯ 28.95 ಕೋಟಿ ರೂ. ಅನುದಾನ ನೀಡಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ(ಎಸ್ಸಿ/ಎಸ್ಟಿ)ದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಕೂಡಲೇ ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರಾಜುಪಟ್ಟಿ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, “2020-21ನೇ ಸಾಲಿನಲ್ಲಿ ಕೆಕೆಆರ್ಡಿಬಿ ಮಂಡಳಿಯಿಂದ ಎಸ್ಸಿಪಿ, ಟಿಎಸ್ಪಿ ಯೋಜನೆಯ 22.75 ಕೋಟಿ ರೂ. ಅನುದಾನವನ್ನು 2021 ಜನವರಿ 7ರಂದು ವಿಮಾನ ನಿಲ್ದಾಣದ ಕಾಮಗಾರಿಗೆ ನೀಡಿದೆ. 2022-23 ನೇ ಸಾಲಿನಲ್ಲಿ 6.22 ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಒಟ್ಟು 28.96 ಕೋಟಿ ರೂ. ಅನುದಾನವನ್ನು ನೀಡಲಾಗಿದೆ” ಎಂದರು.
ಎಸ್ಸಿಪಿ, ಟಿಎಸ್ಪಿ ಅನುದಾನ ನೀಡಿದ ಕುರಿತು 2023 ಜನವರಿ 28ರಂದು ಸಮಾಜ ಕಲ್ಯಾಣ ಇಲಾಖೆಯ ಎಸ್ಸಿಪಿ, ಟಿಎಸ್ಪಿ ಕೋಶಕ್ಕೆ ದೂರು ನೀಡಿದೆ. ಈ ಕುರಿತು ಇದೇ ಆಗಸ್ಟ್ 10ರಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ತನಿಖೆಗೆ ಆದೇಶಿಸಿದೆ” ಎಂದು ತಿಳಿಸಿದರು.
“ವಿಮಾನ ನಿಲ್ದಾಣದ ಕಾಮಗಾರಿಗೆ ಇನ್ನು 23 ಎಕರೆ 24 ಗುಂಟೆ ಜಮೀನು ಭೂ ಸ್ವಾಧೀನ ಪ್ರಕ್ರಿಯೆ ನಡೆಯದೇ ನೆನೆಗುದಿಗೆ ಬಿದ್ದಿದೆ. 2022 ನವೆಂಬರ್ನಲ್ಲಿ ಭೂ ಸ್ವಾಧೀನ ಮತ್ತು ಪುನರ್ವಸತಿಗಾಗಿ 13 ಕೋಟಿ ರೂ. ಅನುದಾನ ನೀಡಿದೆ. ಭೂ ಸ್ವಾಧೀನ ಮಾಡಲು ಜಿಲ್ಲಾಡಳಿತ ಮೌನವಹಿಸಿದೆ. ಭೂ ಸ್ವಾಧೀನ ಪ್ರಕ್ರಿಯೆ ಇದ್ದರೂ ತರಾತುರಿಯಲ್ಲಿ 2023 ಫೆಬ್ರವರಿ 16ರಂದು ಲೋಕೋಪಯೋಗಿ ಇಲಾಖೆಯಿಂದ 143 ಕೋಟಿ ರೂ.ನ ಟೆಂಡರ್ ಕರೆದು ಕೇವಲ 8 ದಿನಗಳ ಕಾಲಾವಕಾಶ ನೀಡಲಾಗಿತ್ತು. ಲೋಕೊಪಯೋಗಿ ಇಲಾಖೆಯು 14 ಕೋಟಿ ರೂ. ಕಾಮಗಾರಿ ಟೆಂಡರ್ನಲ್ಲಿ 16 ದಿನಗಳ ಕಾಲಾವಕಾಶ ನೀಡಿದ್ದು, ಅಕ್ರಮಕ್ಕೆ ಸಾಕ್ಷಿಯಾಗಿದೆ” ಎಂದರು.
“ವಿಮಾನ ನಿಲ್ದಾಣದ ಕಾಮಗಾರಿಯನ್ನು ಕೆಎಂವಿ ಪ್ರೊಜೆಕ್ಟ್ ಲಿಮಿಟೆಡ್ ಕಂಪನಿಗೆ ನೀಡಲಾಗಿದೆ. ಶೇ.4.99ರಷ್ಟು ಹೆಚ್ಚುವರಿ ಲಾಭಾಂಶಕ್ಕೆ ಟೆಂಡರ್ ಗುತ್ತಿಗೆ ನೀಡಿ ಅಕ್ರಮ ಎಸಗಿದೆ” ಎಂದು ದೂರಿದರು.
“ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಆರ್ಥಿಕ ಇಲಾಖೆಯ ಸುತ್ತೋಲೆಯಂತೆ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಅಂದಾಜು ಮೊತ್ತದ ಮೇಲೆ ಶೇ.5ಕ್ಕಿಂತ ಹೆಚ್ಚಿನ ಲಾಭಾಂಶವುಳ್ಳ ಟೆಂಡರ್ ಯಾವುದೇ ಕಾರಣಕ್ಕೂ ಅಂಗೀಕರಸತಕ್ಕದ್ದಲ್ಲವೆಂದು ತಿಳಿಸಿದೆ. ಅಂಗೀಕರಿಸಲು ಕಾರಣ ನೀಡಿ ಉನ್ನತ ಪ್ರಾಧಿಕಾರ ಅನುಮೋದನೆ ಪಡೆದು ಅಂಗೀಕರಿಸಬೇಕು. ಇಲ್ಲಿಯೂ ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ” ಎಂದು ಆರೋಪಿಸಿದರು.
“ವಿಮಾನ ನಿಲ್ದಾಣದ ಕಾಮಗಾರಿ ಆರಂಭಕ್ಕೂ ಮುಂಚೆ ಟೆಂಡರ್ ನಿಯಮಗಳ ಪ್ರಕಾರ ಸ್ಥಳದಲ್ಲಿ ಕಾಂಕ್ರಿಟ್ ಬ್ಯಾಚ್ ಮಿಕ್ಸ್ ಪ್ಲಾಂಟ್, ಹಾಟ್ ಮಿಕ್ಸ್ ಪ್ಲ್ಯಾಂಟ್ ಅಳವಡಿಸಬೇಕು. ಈ ಮೊದಲು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಿಯಿಂದ ಸಿಎಫ್ಒ ಪ್ರಮಾಣ ಪತ್ರ ಪಡೆಯಬೇಕು. ಆದರೇ ಪ್ರಮಾಣ ಪತ್ರ ಪಡೆದಿಲ್ಲದಿರುವುದು ನಿಯಮ ಬಾಹಿರವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | 84.82 ಕೋಟಿ ವೆಚ್ಚದ ಕುಡಿಯುವ ನೀರು ಯೋಜನೆಗೆ ಶೀಘ್ರ ಚಾಲನೆ: ಶಾಸಕ ಪ್ರಭು ಚವ್ಹಾಣ
“ಈ ಅಕ್ರಮಗಳಲ್ಲಿ ಭಾಗಿಯಾದ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್, ಅಧೀಕ್ಷಕ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್ ವಿರುದ್ಧ ಕೆಟಿಪಿಪಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಿಗೆ ದೂರು ನೀಡಲಾಗುವುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರುಗಳಾದ ಚಂದ್ರಶೇಖರ, ಅಯ್ಯಪ್ಪ, ಹಾಗೂ ಜಗದೀಶ, ನಾಗರಾಜ ಸೇರಿದಂತೆ ಇತರರು ಇದ್ದರು.