ಮಧುಗಿರಿ ಮತ್ತು ಮೂರು ತಾಲೂಕುಗಳನ್ನು ಸೇರಿಸಿ ಮಧುಗಿರಿ ಜಿಲ್ಲೆಯನ್ನು ಮಾಡಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ. ಸಚಿವ ಕೆ.ಎನ್ ರಾಜಣ್ಣ ಅವರೂ ಹೇಳಿದ್ದಾರೆ. ನಮ್ಮ ಸರ್ಕಾರದಿಂದ ಹೊಸ ಜಿಲ್ಲೆ ಮಾಡುವ ಬಗ್ಗೆ ಗಂಭೀರವಾಗಿ ಪರಿಶೀಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಧುಗಿರಿಯಲ್ಲಿ ನಡೆದ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ನಮ್ಮ ಸರ್ಕಾರ ನುಡಿದಂತೆ ನಡೆದ ನಡೆಯುವ ಸರ್ಕಾರ. ಹಾಗಾಗಿ ಸುಳ್ಳು ಹೇಳುವುದಿಲ್ಲ. ನಾನು ಹೊಸಕೋಟೆಯಲ್ಲಿ ಕ್ಷೀರಭಾಗ್ಯ ಯೋಜನೆಯನ್ನು ಉದ್ಘಾಟನೆ ಮಾಡಿದ್ದೆ. ಈಗ ದಶಮಾನೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಈಗಲೂ ನಾನೇ ಮುಖ್ಯಮಂತ್ರಿ ಆಗಿದ್ದೇನೆ. ಅಪೌಷ್ಟಿಕತೆಯಿಂದ ನರಳುತ್ತಿರುವ ಸರ್ಕಾರಿ ಅನುದಾನಿತ ಶಾಲೆ ಮಕ್ಕಳು ಹಾಗೂ ಅಂಗನವಾಡಿ ಮಕ್ಕಳಿಗೆ ಹಾಲುಕೊಡಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಿದ್ದೆವು” ಎಂದು ಹೇಳಿದರು.
“ಕಳೆದ ಬಾರಿ ನಮ್ಮ ಸರ್ಕಾರ ಇದ್ದಾಗ ಕೆ.ಎನ್.ರಾಜಣ್ಣ ಅವರ ಸಲಹೆಯಂತೆ ಶೂಭಾಗ್ಯ ಯೋಜನೆಯನ್ನು ಘೋಷಿಸಿದ್ದೆ. ಹೀಗೆ ಹಲವು ಭಾಗ್ಯಗಳನ್ನು ನಾವು ನೀಡಿದ್ದೆವು. ಬಿಜೆಪಿಯವರು ಬಡವರ ವಿರೋಧಿಗಳು ಹಾಗೂ ಮನುಷತ್ವ ಇಲ್ಲದವರು. ಬಡವರಿಗೆ ಅಕ್ಕಿ ಕೊಡಲಿಲ್ಲ. ಹಾಗಾಗಿ ಹಣ ಕೊಡಬೇಕಾಗಿ ಬಂತು. ಈಗ ಅಕ್ಕಿ ಸಿಗಲಿದೆ ಎಂದು ಗೊತ್ತಾಗಿದೆ. ಈಗ ನಾವು ಹತ್ತು ಕೆಜಿ ಅಕ್ಕಿ ಕೊಡುವ ಬಗ್ಗೆ ಚಿಂತೆ ಮಾಡುತ್ತಿದ್ದೇವೆ. ಪ್ರಧಾನಿ ಮೋದಿಯವರು ಉಚಿತ ಅಕ್ಕಿಕೊಟ್ಟರೆ ರಾಜ್ಯ ದಿವಾಳಿಯಾಗುತ್ತವೆ ಎನ್ನುತ್ತಾರೆ. ನಾವು ಐದು ಗ್ಯಾರೆಂಟಿಗಳನ್ನು ಜಾರಿ ಮಾಡಿ ತೋರಿಸಿದ್ದೇವೆ” ಎಂದರು.
ಗೃಹಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, “ಕೆ.ಎನ್.ರಾಜಣ್ಣ ನಮಗೆ ಗೊತ್ತಿಲ್ಲದ ಹಾಗೆ 150 ಕೋಟಿ ರೂಪಾಯಿ ಅನುದಾನ ತಂದಿದ್ದಾರೆ. ಮಧುಗಿರಿ ಉಪವಿಭಾಗ ಶಾಶ್ವತ ಬರಪೀಡಿತ ಪ್ರದೇಶವಾಗಿದೆ. ಮುಖ್ಯಮಂತ್ರಿಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ಮಧುಗಿರಯನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ. ಇಡೀ ಏಷ್ಯಾ ಖಂಡದಲ್ಲೆ ಎರಡನೇ ಏಕಶಿಲಾ ಬೆಟ್ಟ ಇಲ್ಲಿದೆ. ಇದಕ್ಕೆ ರೂಪ್ ವೇ ಹಾಕಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ಹೇಳಿದರು.
ಸಹಕಾರ ಸಚಿವ ಕೆ.ಎನ್ ರಾಜಣ್ಣ ಮಾತನಾಡಿ, “ನನಗೆ ಪ್ರಿಯವಾದ ಕಾರ್ಯಕ್ರಮ ಅನ್ನಭಾಗ್ಯ. ಯಾವುದೇ ಜಾತಿ ಧರ್ಮದ ಬೇದಬಾವ ನೋಡದೆ ಹಸಿವು ನೀಗಿಸುವ ಈ ಯೋಜನೆಯಿಂದ ಕೋವಿಡ್ ಸಮಯದಲ್ಲಿ ಎಷ್ಟು ಸಂಕಷ್ಟಗಳ ಕಡಿಮೆಯಾಗಿವೆ. ಪರಮೇಶ್ವರ್ರವರು ಹೇಳಿದ ನಮ್ಮ ಭಾಗದ ಬೇಡಿಕೆಗಳನ್ನು ಈಡೇರಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೆ.ಎಂ.ಎಫ್ ಅಧ್ಯಕ್ಷರಾದ ಬೀಮಾನಾಯ್ಕ್, ಪಶುಸಂಗೋಪನ ಸಚಿವ ಕೆ.ವೆಂಕಟೇಶ್, ಶಾಸಕರಾದ ಟಿ.ಬಿ. ಜಯಚಂದ್ರ ,ಕೆ.ಷಡಕ್ಷರಿ, ಡಾ. ರಂಗನಾಥ್, ಹೆಚ್.ವಿ.ವೆಂಕಟೇಶ್ , ಎಸ್.ಆರ್.ಶ್ರೀನಿವಾಸ್, ನಂಜೇಗೌಡ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಜಿಲ್ಲಾಧಿಕಾರಿ ಶ್ರೀನಿವಾಸ್, ಜಿಪಂ ಸಿಇಒ ಜೆ.ಪ್ರಭು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.