ಆತ್ಮಹತ್ಯೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ರಾಯಚೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಯಾನಂದ ಬೇಲೂರೆ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಿಮ್ಸ್, ನವೋದಯ ಮಹಾವಿದ್ಯಾಲಯ, ಹಾಗೂ ಭಾರತೀಯ ಮನೋವೈದ್ಯಕೀಯ ಸಂಘದ ವತಿಯಿಂದ ಕಾರ್ಯಕರ್ತರು ಒಗ್ಗೂಡಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
“ಜೀವನದಲ್ಲಿ ಹಲವು ಒತ್ತಡಗಳಿಂದ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತಹವರಿಗೆ ಆತ್ಮಹತ್ಯೆ ಮಾಡಿಕೊಳ್ಳದಂತೆ ತಿಳುವಳಿಕೆ ಹೇಳಿ ಅರಿವು ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ” ಎಂದರು.
“ಒಬ್ಬ ವ್ಯಕ್ತಿಯು ತನ್ನ ದಿನನಿತ್ಯದ ಬದುಕಿನಲ್ಲಿ ಹಲವು ಸಮಸ್ಯೆಗಳನ್ನು ಹಾಗೂ ಒತ್ತಡಗಳನ್ನು ಅತಿಯಾಗಿ ಯೋಚನೆ ಮಾಡುವ ಮೂಲಕ ಮಾನಸಿಕ ಖಿನ್ನತೆಗೆ ಒಳಗಾಗಿ, ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾನೆ. ಆದರೆ ಆತ್ಮಹತ್ಯೆ ಎಂಬುದು ವೈಯಕ್ತಿಕವಾಗಿ ಮಾಡಿಕೊಳ್ಳುವ ಅತ್ಯಂತ ದೊಡ್ಡ ಅಪರಾಧವಾಗಿದ್ದು, ವ್ಯಕ್ತಿಯು ಯಾವುದೇ ಸಮಸ್ಯೆಯಿದ್ದರೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಮತ್ತು ಮುಂದಿನ ಜೀವನವನ್ನು ಎದುರಿಸಲು ಸರಳವಾಗಿ ಪ್ರಯತ್ನ ಪಡಬೇಕೆ ಹೊರತು ಆತ್ಮಹತ್ಯೆಯಂತಹ ಕಾರ್ಯಗಳಿಗೆ ಮುಂದಾಗಬಾರದು ಎಂದು ತಿಳಿಸಿದರು.
“ಆತ್ಮ ಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಅಂತಹ ವ್ಯಕ್ತಿಗೆ ಆತ್ಮ ಸ್ಥೈರ್ಯ ತುಂಬುವುದು ಮತ್ತು ದೈರ್ಯ ಹೇಳುವುದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಆತ್ಮಹತ್ಯೆ ತಡೆಗೆ ಮುಂದಾಗಿ ಎಲ್ಲರಲ್ಲಿಯೂ ಅರಿವು ಮೂಡಿಸಲು ಮುಂದಾಗಬೇಕು” ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರಬಾಬು ಅವರು ಮಾತನಾಡಿ, ವ್ಯಕ್ತಿಯು ಕುಟುಂಬ ನಿರ್ವಹಣೆ, ಸಾಲ, ಬಡತನ ಸೇರಿದಂತೆ ಹಲವು ವಿಷಯಗಳಿಗೆ ಬೇಸತ್ತು ಆತ್ಮಹತ್ಯೆಗೆ ಮುಂದಾಗುತ್ತಾನೆ ಆದರೆ ಇದು ತಪ್ಪು ಪ್ರತಿಯೊಬ್ಬರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕೆ ಹೊರತು ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರ ಎಂಬ ತಪ್ಪು ಗ್ರಹಿಕೆಯಿಂದ ಹೊರಬರಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | 2015ರಿಂದ 809 ರೈತರ ಆತ್ಮಹತ್ಯೆ; 623 ಪ್ರಕರಣಗಳಿಗೆ ಮಾತ್ರ ಪರಿಹಾರ
ಪ್ರತಿ ವರ್ಷ ವಿಶ್ವದಲ್ಲಿ 08 ಲಕ್ಷದಿಂದ 10 ಲಕ್ಷ ಮಂದಿ ಆತ್ಮಹತ್ಯೆಗೆ ಮುಂದಾಗುತ್ತಿದ್ದು, ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ವಿಶ್ವದಲ್ಲಿ ಆತ್ಮಹತ್ಯೆಗೆ ಮುಂದಾಗುತ್ತಿದ್ದಾನೆ. ಆದ್ದರಿಂದ ಆತ್ಮಹತ್ಯೆ ತಡೆಗೆ ಪ್ರತಿಯೊಬ್ಬರು ಅರಿವು ಮೂಡಿಸುವ ಕೆಲಸ ಮಾಡಬೇಕು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಮಹ್ಮದ್ ಶಾಖೀರ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಯಶೋಧ ಎನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ಗಣೇಶ, ಮಾನಸಿಕ ರೋಗ ತಜ್ಞರುಗಳಾದ ಡಾ ಮನೋಹರ್ ಪತ್ತಾರ, ಡಾ.ಅನಿಲ್ ಗುಮಾಸ್ತೆ, ಡಾ.ಪವನ್ಕುಮಾರ ಸೇರಿದಂತೆ ಇತರರು ಇದ್ದರು.