ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 4 ತಿಂಗಳಿಂದ ವೇತನ ಸಿಗದೆ ಪರಿತಪಿಸುವಂತಾಗಿದೆ. ಹಾಗಾಗಿ ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಿ, ಇತರೆ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಎಂ ಉಮಾದೇವಿ ಒತ್ತಾಯಿಸಿದರು.
ಧಾರವಾಡ ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಜಿಲ್ಲೆಯಾದ್ಯಂತ ಮಕ್ಕಳ ಆರೋಗ್ಯದ ವಿಷಯವಾಗಲಿ ಅಥವಾ ಅವರಿಗೆ ಪೌಷ್ಠಿಕ ಆಹಾರ ತಲುಪಿಸುವ ವಿಷಯವಾಗಿರಲಿ ಕಳೆದ 50 ವರ್ಷಗಳಿಂದ ಈ ದಿಶೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಐಸಿಡಿಎಸ್ ಯೋಜನೆಯನ್ನು ಜಿಲ್ಲೆಯ ಪ್ರತಿಯೊಂದು ಮನೆಗೆ ಮುಟ್ಟಿಸಿ ಸದೃಢ ಮಕ್ಕಳನ್ನು ಬೆಳೆಸಲು ಪ್ರತಿ ಮಗುವನ್ನು ತಮ್ಮ ಮಗುವೆಂದೇ ಸಲಹುತ್ತಿರುವವರು ಇದೇ ತಾಯಂದಿರು” ಎಂದರು.
“ಇವರ ಗೋಳು-ಸಮಸ್ಯೆಗಳು ಮಾತ್ರ ಯಾರಿಗೂ ಬೇಡವಾಗಿವೆ. ಇಂದಿನ ಬೆಲೆ ಏರಿಕೆ ದಿನಗಳಲ್ಲಿ ನಾಲ್ಕು ತಿಂಗಳಿನಿಂದ ಇವರಿಗೆ ಗೌರವಧನ ಬಾರದೇ ಇವರ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಇಂದು ನಿಯಮಿತವಾಗಿ ಸಂಬಳ ದೊರಕುವ ಸರ್ಕಾರಿ ನೌಕರರೇ ಒಂದು ತಿಂಗಳು ವೇತನ ಬರದಿದ್ದಾಗ ಪರದಾಡುವಂತಹ ಸಂಭವವಿರುವ ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ನಾಲ್ಕು ತಿಂಗಳಿನಿಂದ ಇವರುಗಳು ಬದುಕನ್ನು ಹೇಗೆ ಎದುರಿಸುತ್ತಿರಬಹುದು” ಎಂದು ಪ್ರಶ್ನಿಸಿರಬಹುದು.
“ಇವರುಗಳು ಎದುರಿಸುತ್ತಿರುವ ಸಮಸ್ಯೆಗಳು ಹಲವಾರು. ಮಕ್ಕಳಿಗೆಂದು ಕೊಡುವ ಮೊಟ್ಟೆಗಳು ತಿಂಗಳ ಮೊದಲನೇ ದಿನ ಕೇಂದ್ರಕ್ಕೆ ಬರುವುದು ಬಿಟ್ಟು 15ನೇ ತಾರೀಖಿಗೆ ಬರುತ್ತವೆ. ಅದರಲ್ಲಿ ಕೊಳತಿರುವ ಮೊಟ್ಟೆಗಳು ಬರುತ್ತಿದ್ದು ಯಾವುದೇ ಗುಣಮಟ್ಟ ಇರುವುದಿಲ್ಲ. ಇನ್ನೂ ಹಲವಾರು ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳಿಗೆ ಹಲವಾರು ತಿಂಗಳ ಬಾಡಿಗೆ ಬಂದಿಲ್ಲ” ಎಂದು ಆರೋಪಿಸಿದರು.
“ಹಲವಾರು ಜ್ವಲಂತ ಸಮಸ್ಯೆಗಳಿಂದ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಬಳಲುತ್ತಿದ್ದು, ಅವರ ನ್ಯಾಯಯುತ ಹಕ್ಕುಗಳನ್ನು ಪೂರೈಸನೇಕು ಎಂದು ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ ಧಾರವಾಡ ಜಿಲ್ಲಾ ಘಟಕದ ಕಾರ್ಯಕರ್ತೆಯರು ಆಗ್ರಹಿಸಿದರು.
“ಕಳೆದ 4 ತಿಂಗಳುಗಳಿಂದ ಬಾಕಿ ಇರುವ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಐದು ತಿಂಗಳಿನಿಂದ ಬಾಕಿ ಇರುವ ತರಕಾರಿ ಬಿಲ್ಲನ್ನು ಪಾವತಿಸಬೇಕು. ಧಾರವಾಡ ಶಹರ ವೃತ್ತದಲ್ಲಿ ಕೂಡಲೇ ಬಾಕಿ ಇರುವ ಮೊಟ್ಟೆ ಬಿಲ್ ಮತ್ತು ಬಾಡಿಗೆ ಬಿಲ್ಲುಗಳನ್ನು ಕೂಡಲೇ ಪಾವತಿಸಬೇಕು. ಎಚ್ಎನ್ಎಸ್ ಸರ್ವೆಯ ₹500 ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗ್ರಾಮ ಲೆಕ್ಕಿಗರು ಪಂಚಾಯಿತಿಗಳಲ್ಲೇ ಕುಳಿತು ಕಾರ್ಯ ನಿರ್ವಹಿಸಬೇಕು: ಸಿಎಂ ಸೂಚನೆ
“ಜಿಲ್ಲೆಯಲ್ಲಿ ನಿವೃತ್ತಿ ಹೊಂದಿದ ಕಾರ್ಯಕರ್ತರಿಗೆ ಆದೇಶದಂತೆ ಇಡಿಗಂಟನ್ನು ಯಾವುದೇ ವಿಳಂಬವಿಲ್ಲದೆ ನೀಡಬೇಕು. ರಾಜ್ಯ ವ್ಯಾಪಿ ಒಂದೇ ಸಮವಸ್ತ್ರ ನೀಡಲು ಕ್ರಮ ಕೈಗೊಳ್ಳಬೇಕು. ಸೇವಾ ಹಿರಿತನದ ಆಧಾರದ ಮೇಲೆ ಅರ್ಹ ಕಾರ್ಯಕರ್ತರಿಗೆ ಮೇಲ್ವಿಚಾರಕರಾಗಲು ಮುಂಬಡ್ತಿ ನೀಡಬೇಕು. ಐಸಿಡಿಎಸ್ ಯೋಜನೆಯ ಕೆಲಸಗಳನ್ನು ಬಿಟ್ಟು ಉಳಿದ ಯಾವುದೇ ಕೆಲಸಗಳನ್ನು ಕಾರ್ಯಕರ್ತೆಯರಿಗೆ ವಹಿಸಬಾರದು. ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು” ಎಂದು ಆಗ್ರಹಿಸಿದರು.
ಭುವನಾ ಬಳ್ಳಾರಿ ಜಿಲ್ಲಾ ಸಂಚಾಲಕಿ ಸೇರಿದಂತೆ ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.