- ಸದಾಶಿವ ಆಯೋಗ ವರದಿಯಿಂದ ಯಾವುದೇ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಅನ್ಯಾಯ ಆಗುವುದಿಲ್ಲ.
- ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ನ್ಯಾ. ಎ.ಜೆ. ಸದಾಶಿವ ಅವರು ವರದಿ ನೀಡಿದ್ದಾರೆ.
ನ್ಯಾಯಮೂರ್ತಿ ಏ.ಜೆ. ಸದಾಶಿವ ಆಯೋಗದ ವರದಿ ಜಾರಿಯಾದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಮಾಜಿ ಸಚಿವ, ಔರಾದ ಶಾಸಕ ಪ್ರಭು ಚವ್ಹಾಣ ಹೇಳಿಕೆಗೆ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಸಹ ಸಂಚಾಲಕ ಸುಧಾಕರ ಕೊಳ್ಳುರ ಅವರು ತೀವ್ರವಾಗಿ ಖಂಡಿಸಿದ್ದಾರೆ.
“ಒಳ ಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗ ಸಲ್ಲಿಸುವ ವರದಿ ಶೀಘ್ರವೇ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರ ಹೇಳಿಕೆಗೆ ಔರಾದ ಶಾಸಕ ಪ್ರಭು ಚೌವ್ಹಾಣ ಅವರು ಪ್ರತಿಕ್ರಿಯಿಸಿ ಆಯೋಗದ ವರದಿ ಅವೈಜ್ಞಾನಿಕ ಹಾಗೂ ಸಂವಿಧಾನ ವಿರೋಧಿಯಾಗಿದೆ, ಹಾಗಾಗಿ ಈ ವರದಿ ತಿರಸ್ಕರಿಸಬೇಕು ಎಂದು ಹೇಳಿಕೆ ನೀಡಿರುವುದು ಖಂಡನೀಯ” ಎಂದಿದ್ದಾರೆ.
“ಸದಾಶಿವ ಆಯೋಗ ವರದಿ ಅವೈಜ್ಞಾನಿಕ ಹಾಗೂ ಸಂವಿಧಾನ ವಿರೋಧಿಯಾಗಿದ್ದರೆ ಕಳೆದ ಅವಧಿಯಲ್ಲಿ ನಿಮ್ಮದೇ ಬಿಜೆಪಿ ನೇತ್ರತ್ವದ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೀರಿ ಮತ್ತು ಈ ಶಿಫಾರಸ್ಸು ಸಮಿತಿಯಲ್ಲಿ ತಾವು ಸದಸ್ಯರಾಗಿದ್ದೀರಿ. ಅಂದು ವಿರೋಧಿಸದೇ ಒಪ್ಪಿಕೊಂಡು ಇಂದು ವಿರೋಧಿಸುತ್ತಿರುವುದು ಯಾವ ಪುರುಷಾರ್ಥಕ್ಕೆ” ಎಂದು ಸುಧಾಕರ ಕೊಳ್ಳೂರು ಪ್ರಶ್ನಿಸಿದ್ದಾರೆ.
“ವರದಿ ಜಾರಿಗೊಂಡರೆ ಭೋವಿ,ಕೊರಮ ,ಕೊರಚ, ಲಂಬಾಣಿ ಹಾಗೂ ಇತರ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ವರದಿಯಿಂದ ಯಾವುದೇ ಪರಿಶಿಷ್ಟ ಜಾತಿಗಳಲ್ಲಿನ ಸಮುದಾಯಗಳಿಗೆ ಅನ್ಯಾಯ ಆಗುವುದಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸಂವಿಧಾನ ಬದ್ಧವಾಗಿ ನ್ಯಾಯಮೂರ್ತಿ ಎಜೆ ಸದಾಶಿವ ಅವರು ವರದಿ ನೀಡಿದ್ದಾರೆ. ವರದಿ ಬಗ್ಗೆ ಕುಲಂಕುಶವಾಗಿ ಅಧ್ಯಯನ ಮಾಡದೆ ಕೇವಲ ರಾಜಕೀಯ ಲಾಭಕ್ಕಾಗಿ ಪ್ರಭು ಚೌವ್ಹಾಣ ಅವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ” ಎಂದು ಆಕ್ಷೇಪಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸೋರುತ್ತಿದೆ ಸರ್ಕಾರಿ ಶಾಲಾ ಮಾಳಿಗೆ; ಆತಂಕದಲ್ಲಿ ಮಕ್ಕಳು
“ಶೋಷಿತ ಸಮುದಾಯಗಳ ಪ್ರಗತಿ ಕಾಣಬೇಕಾದರೆ ಸದಾಶಿವ ಆಯೋಗ ವರದಿ ಜಾರಿಯಾಗಬೇಕು. ಸದಾಶಿವ ಆಯೋಗ ವರದಿಗೆ ಪ್ರಭು ಚೌವ್ಹಾಣ ಅವರು ವಿರೋಧಿಸಿದರೆ ಅವರ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಸುಧಾಕರ ಎಚ್ಚರಿಸಿದರು.