ವಿಧಾನಸಭಾ ಚುನಾವಣೆಯಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಚೈತ್ರಾ ಕುಂದಾಪುರ ಸಿಸಿಬಿ ವಶದಲ್ಲಿದ್ದಾರೆ. ಈ ಪ್ರಕರಣದ ಬಗ್ಗೆ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದ್ದು, ಇದೀಗ ಮತ್ತೋರ್ವ ಆರೋಪಿ ಪ್ರಸಾದ್ ಬೈಂದೂರು ಹಾಗೂ ಚೈತ್ರಾ ಕುಂದಾಪುರ ಅವರಿಬ್ಬರ ದೂರವಾಣಿ ಸಂಭಾಷಣೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇಬ್ಬರ ಸಂಭಾಷಣೆ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಪ್ರಸಾದ್ ಚೈತ್ರಾಳಿಗೆ ಮುಟ್ಟಿಸಿದೆ ಎಂದು ಹೇಳುತ್ತಾನೆ. ಏನು ಮುಟ್ಟಿಸಿದೆ, ಯಾರಿಗೆ ಮುಟ್ಟಿಸಿದೆ ಎಂಬ ಬಗ್ಗೆ ಹೇಳುವುದಿಲ್ಲ. ಪ್ರಸಾದ್ ಯಾರೋ ಇಬ್ಬರು ಸಂಘಟನೆ ಹುಡುಗರು ಕಾರ್ಕಳ ರಸ್ತೆಯಲ್ಲಿ ಹೋಗುತ್ತಿದ್ದರು ಎಂದು ಹೇಳುತ್ತಾನೆ. ಇದಕ್ಕೆ ಚೈತ್ರಾ ‘ಸುನೀಲ್ ಕುಮಾರ್’ ಮನೆಗೆ ಹೋಗಿರಬೇಕು ಎಂದೆನ್ನುತ್ತಾಳೆ. ಈ ಸುನೀಲ್ ಕುಮಾರ್ ಯಾರಾಗಿರಬಹುದು ಎಂಬ ಕುತೂಹಲ ಮೂಡಿದೆ.
ವಿಷ ಸೇವನೆ ನಾಟಕ
ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಪೂಜಾರಿಯಿಂದ ಕೋಟ್ಯಂತರ ಹಣ ಪಡೆದಿದ್ದರು. ಆರೋಪಿಗಳ ವಂಚನೆ ಜಾಲ ತಿಳಿಯುತ್ತಿದ್ದಂತೆ ಹಣ ವಾಪಸ್ ನೀಡುವಂತೆ ಉದ್ಯಮಿ ಕೇಳಿದ್ದರು.
ಬಂಧಿತರಾಗಿರುವ ಚೈತ್ರಾ ಕುಂದಾಪುರ, ಗಗನ್ ಕಡೂರು ಹಾಗೂ ಶ್ರೀಕಾಂತ್ ಎಂಬವರನ್ನು ಹಣದ ವಿಚಾರವಾಗಿ ಮಾತನಾಡಲು ಕಳೆದ ಏಪ್ರಿಲ್ 24ರಂದು ವಂಚನೆಗೊಳಗಾದ ಉದ್ಯಮಿ ಪೂಜಾರಿ ಅವರು ತಮ್ಮ ಕಚೇರಿಗೆ ಕರೆಯಿಸಿಕೊಂಡಿದ್ದರು. ಈ ವೇಳೆ, ಆರೋಪಿ ಗಗನ್ ಕಡೂರು ವಿಷ ಕುಡಿದು ಸಾಯುವೆ ಅಂತ ಹೇಳಿ ಹೈಡ್ರಾಮ ಸೃಷ್ಟಿ ಮಾಡಿದ್ದಾನೆ. ಪಕ್ಕದಲ್ಲೇ ಕುಳಿತಿದ್ದ ಚೈತ್ರಾ ಕುಂದಾಪುರ ಹಾಗೂ ಇನ್ನಿತರರು ಆತನನ್ನು ತಡೆದಿದ್ದಾರೆ. ಆರೋಪಿ ಗಗನ್ ವಿಷ ಸೇವನೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಪೋಟಕ ಹೇಳಿಕೆ
ಚೈತ್ರಾ ಕುಂದಾಪುರ ಅವರನ್ನು ಮಂಗಳವಾರ ರಾತ್ರಿ ಬೆಂಗಳೂರಿನ ಸಿಸಿಬಿ ಪೊಲೀಸರು ಉಡುಪಿ ಶ್ರೀ ಕೃಷ್ಣ ಮಠದ ಬಳಿ ಬಂಧಿಸಿದ್ದರು.
ಮಹಿಳಾ ಸಾಂತ್ವನ ಕೇಂದ್ರದಲ್ಲಿ ದಿನ ಕಳೆದ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಲು ಗುರುವಾರ ಕಚೇರಿಗೆ ಕರೆ ತಂದಿದ್ದರು. ಈ ವೇಳೆ ಗಾಡಿಯಿಂದ ಇಳಿಯುವಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಸತ್ಯ ಹೊರಗಡೆ ಬರುತ್ತದೆ. ಆಗ ದೊಡ್ಡ ದೊಡ್ಡವರ ಹೆಸರು ಆಚೆ ಬರುತ್ತೆ. ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಇರುವುದರಿಂದ ಈ ಷಡ್ಯಂತ್ರ ನಡೆದಿದೆ” ಎಂದು ಸ್ಪೋಟಕ ಹೇಳಿಕೆ ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ವಂಚನೆ ಪ್ರಕರಣ | ವಿಚಾರಣೆ ವೇಳೆ ಕುಸಿದು ಬಿದ್ದ ಆರೋಪಿ ಚೈತ್ರಾ ಕುಂದಾಪುರ, ಆಸ್ಪತ್ರೆಗೆ ದಾಖಲು
ಬಳಿಕ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾ ಅವರನ್ನು ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದಾರೆ. 45 ನಿಮಿಷಗಳ ಕಾಲ ವಿಚಾರಣೆ ವೇಳೆ ಬಾಯಿಯಲ್ಲಿ ನೊರೆ ಬಂದು ಏಕಾಏಕಿ ಕುಸಿದು ಬಿದ್ದಿದ್ದರು. ಕೂಡಲೇ ಎಚ್ಚೆತ್ತ ಸಿಸಿಬಿ ಪೊಲೀಸರು ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ವೈದ್ಯರ ತಪಾಸಣೆ ಬಳಿಕ, “ಯಾವುದೇ ಸಮಸ್ಯೆ ಇಲ್ಲ. ಚೈತ್ರಾ ಕುಂದಾಪುರ ಅವರ ಆರೋಗ್ಯ ಸ್ಥಿರವಾಗಿದೆ. ಅವರ ಎಲ್ಲ ರಿಪೋರ್ಟ್ಗಳು ನಾರ್ಮಲ್ ಆಗಿವೆ. ಅವರಿಗೆ ಯಾವ ಫಿಟ್ಸ್ ಕೂಡ ಇಲ್ಲ” ಎಂದು ಹೇಳಿದ್ದರು.
ಈ ವೇಳೆ, ಅವರ ಬಾಯಿಯಿಂದ ಬಂದ ನೊರೆ ಬಟ್ಟೆ ತೊಳೆಯಲು ಪಡೆದ ಸೋಪ್ ನೊರೆಯಿಂದಾದ ಅನಾರೋಗ್ಯದ ನಾಟಕ ಮಾಡಿರಬಹುದು ಎಂದು ಹೇಳಲಾಗಿತ್ತು.
ಸಿಸಿಬಿ ಪೊಲೀಸರು ಆರೋಪಿ ಚೈತ್ರಾಳನ್ನು ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗಾಗಿ ಇರಿಸಿದ್ದಾರೆ. ಆರೋಪಿ ಚೈತ್ರಾ ಆರೋಗ್ಯ ಸ್ಥಿರವಾಗಿದ್ದರೂ, ಆಸ್ಪತ್ರೆಯಿಂದ ಸಿಸಿಬಿ ಪೊಲೀಸರ ವಿಚಾರಣೆಗೆ ಸಹಕರಿಸುತ್ತಿಲ್ಲ. ಯಾರೊಂದಿಗೂ ಮಾತನಾಡುತ್ತಿಲ್ಲ. ಕೈ, ಬಾಯಿ ಸನ್ನೆ ಮಾಡಿ ನನಗೆ ಮಾತನಾಡಲು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ಚೈತ್ರಾ ಕುಂದಾಪುರ ಅವರನ್ನು ಸೆ.23 ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಅದರಂತೆ ಗುರುವಾರದಿಂದ ಸಿಸಿಬಿ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.