- ಆಶಾ ಕಾರ್ಯಕರ್ತೆಯರ ರೀತಿ ‘ಪಶು ಸಖಿ’ಯರ ನೇಮಕ
- ಹೊರ ರಾಜ್ಯಗಳಿಗೆ ಮೇವು ಸಾಗಿಸದಂತೆ ಡಿಸಿಗಳಿಗೆ ಸೂಚನೆ
ಆರೋಗ್ಯ ಇಲಾಖೆಯಲ್ಲಿರುವ ಆಶಾ ಕಾರ್ಯಕರ್ತೆಯರ ರೀತಿ ನಮ್ಮ ಇಲಾಖೆಯಿಂದಲೂ ‘ಪಶು ಸಖಿ’ಯರನ್ನು (ಎ–ಹೆಲ್ಪ್) ನೇಮಿಸಿಕೊಳ್ಳಲಾಗಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ಕರೆದು ಮಾರತನಾಡಿದ ಅವರು, “ಕನಿಷ್ಠ 8ನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯ ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಕನಿಷ್ಠ 18 ದಿನಗಳ ಸಾಮಾನ್ಯ ತರಬೇತಿ ನಂತರ, ಜಾನುವಾರುಗಳ ವೈಜ್ಞಾನಿಕ ಸಾಕಣೆ ಹಾಗೂ ಪೋಷಣೆ, ರೋಗ ನಿಯಂತ್ರಣ ಕ್ರಮಗಳ ಬಗ್ಗೆ 16 ದಿನಗಳ ತರಬೇತಿ ನೀಡಲಾಗುವುದು. ಬಳಿಕ ಅವರನ್ನು ಕೆಲಸಕ್ಕೆ ನಿಯೋಜಿಸಲಾಗುತ್ತದೆ” ಎಂದರು.
“ರೈತರ ಮತ್ತು ಇಲಾಖೆ ನಡುವೆ ಇರುವ ಅಂತರವನ್ನು ತಗ್ಗಿಸಿ ಸೇತುವೆಯಾಗಿ ಕಾರ್ಯನಿರ್ವಹಿಸಲು ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ಸಮರ್ಪಕವಾಗಿ ತಲುಪಿಸಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿಗೆ ಒಬ್ಬರಂತೆ ರಾಜ್ಯದಲ್ಲಿ ಒಟ್ಟು 5,962 ಪಶು ಸಖಿಯರನ್ನು ಆಯ್ಕೆ ಮಾಡಲಾಗಿದೆ” ಮಾಹಿತಿ ನೀಡಿದರು.
“ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಪಶುಸಂಗೋಪನಾ ಚಟುವಟಿಕೆಗಳ ಸಮಗ್ರ ಮಾಹಿತಿ ಕೊಡಿಸುವುದು ‘ಪಶು ಸಖಿ’ ಉದ್ದೇಶವಾಗಿದೆ. ಆಯಾ ಪಶು ವೈದ್ಯರ ಮಾರ್ಗದರ್ಶನದಲ್ಲಿ ರೋಗ ನಿರೋಧಕ ಲಸಿಕೆ, ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ ನೀಡುತ್ತಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಹಣ-ಹೆಸರು ಗಳಿಕೆಗೆ ಧರ್ಮವೇ ಸುಲಭದ ಸಾಧನ
ಸೆ.26ರಂದು ಚಾಲನೆ
“ಪಶು ಸಖಿಯರಿಗೆ ಕೇಂದ್ರ ಸರ್ಕಾರದಿಂದ ತಿಂಗಳಿಗೆ ₹ 3,800 ಸಂಭಾವನೆ ನೀಡಲಾಗುತ್ತದೆ. ಯೋಜನೆ ಅನುಷ್ಠಾನದಲ್ಲಿ ದೇಶದಲ್ಲೇ ನಮ್ಮ ರಾಜ್ಯ ಮುಂದಿದೆ. ಈ ತರಬೇತಿ ಕಾರ್ಯಕ್ರಮಕ್ಕೆ ಸೆ.26ರಂದು ಬೆಳಗ್ಗೆ 10.30ಕ್ಕೆ ತಾಲ್ಲೂಕಿನ ಉತ್ತನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ನೆರವೇರಿಸಲಿದ್ದಾರೆ” ಎಂದು ವಿವರಿಸಿದರು.
“ಇದೇ ವೇಳೆ 4ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗುವುದು. ಉತ್ತನಹಳ್ಳಿಯಲ್ಲಿ ನಿರ್ಮಿಸಿರುವ ನೂತನ ಪಶುಚಿಕಿತ್ಸಾಲಯದ ಉದ್ಘಾಟನೆಯೂ ನೆರವೇರಲಿದೆ. ಕಾಲು ಬಾಯಿ ಜ್ವರದ ಲಸಿಕೆ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ಅನುಷ್ಠಾನದಲ್ಲೂ ನಮ್ಮ ರಾಜ್ಯ ಮುಂದಿದೆ” ಎಂದರು.
ಮೇವು ನಿಷೇಧ
“ನಮ್ಮ ಜಾನುವಾರುಗಳಿಗೆ ಮುಂದಿನ 28 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಅಲ್ಲದೇ, ರೈತರಿಗೆ ಮೇವಿನ ಬೆಳೆಯ ಬೀಜವನ್ನು ಉಚಿತವಾಗಿ ನೀಡಲಾಗುತ್ತಿದೆ. ಇದಕ್ಕಾಗಿ ₹20 ಕೋಟಿ ಹಣವೂ ಇದೆ. ಕೇಂದ್ರದಿಂದ ₹ 48 ಕೋಟಿ ನೀಡಿದ್ದಾರೆ. ತೀವ್ರ ಬರ ಇರುವುದರಿಂದಾಗಿ, ನಮ್ಮಲ್ಲಿನ ಮೇವನ್ನು ಹೊರ ರಾಜ್ಯಗಳಿಗೆ ಸಾಗಿಸದಂತೆ ಕ್ರಮ ಕೈಗೊಳ್ಳುವಂತೆ ಗಡಿ ಭಾಗದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು” ಎಂದು ತಿಳಿಸಿದರು.
18 ಸಾವಿರ ಹುದ್ದೆಗಳು ಮಂಜೂರು
“ಪಶುಸಂಗೋಪನಾ ಇಲಾಖೆಯಲ್ಲಿ 18 ಸಾವಿರ ಹುದ್ದೆಗಳು ಮಂಜೂರಾಗಿವೆ. ಆದರೆ, 9 ಸಾವಿರ ಮಂದಿಯಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆ ಬಹಳಷ್ಟಿದೆ. ಇರುವವರಿಂದಲೇ ನಿರ್ವಹಣೆ ಮಾಡಿಸಲಾಗುತ್ತಿದೆ. ಹೊಸದಾಗಿ 400 ಪಶು ವೈದ್ಯರ ನೇಮಕಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. 250 ಇನ್ಸ್ಪೆಕ್ಟರ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಎಲ್ಲೆಲ್ಲಿ ಬಹಳ ಅಗತ್ಯವಿದೆಯೋ ಅಲ್ಲಿಗೆ ಅವರನ್ನು ನಿಯೋಜಿಸಲಾಗುವುದು” ಎಂದು ಹೇಳಿದರು.
ಈಗಾಗಲೇ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಜಾನುವಾರುಗಳಿಗೆ ಪ್ರಥಮ ಚಿಕಿತ್ಸೆ ನೀಡಲು ಕೃತಕ ಗರ್ಭಧಾರಣೆ ಕಾರ್ಯಕರ್ತರನ್ನು ಸೃಷ್ಟಿಸಿದ್ದು ಅವರೆಲ್ಲಾ ರೀತಿಯ ಚಿಕಿತ್ಸೆ ಗಳನ್ನು ಅದರಲ್ಲೂ ಮುಖ್ಯ ಪಶುಚಿಕಿತ್ಸಾ ಕಾರ್ಯಕ್ರಮಗಳನ್ನು ಮಾಡಿ ಹಲವಾರು ಗಂಭೀರ ಸಮಸ್ಯೆಗಳನ್ನು ಸೃಷ್ಟಿ ಮಾಡಿದ್ದಾರೆ. ಈಗ ಈ ಪಶುಸಖಿಯರಿಂದ ಮತ್ತಾವ ಸಮಸ್ಯೆಗಳು ಮುಂದಾಗುತ್ತದೆ ಕಾದುನೋಡೋಣ.