ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನ ಮತ್ತು ಮಿಜೋರಾಂನಲ್ಲಿ ನಡೆಯುವ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಲಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೂ ಅಚ್ಚರಿ ಕಾದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ನವದೆಹಲಿಯಲ್ಲಿ ಅಸ್ಸಾಂನ ಪ್ರತಿದಿನ್ ಮೀಡಿಯಾ ನೆಟ್ವರ್ಕ್ ಆಯೋಜಿಸಿದ್ದ ‘ದಿ ಕಾನ್ಕ್ಲೇವ್ 2023’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕರ್ನಾಟಕದಲ್ಲಿ ನಾವು ಏನು ಮಾಡಿದ್ದೇವೆ, ಬಿಜೆಪಿಯು ನಿರೂಪಣೆಯನ್ನು ವ್ಯಾಖ್ಯಾನಿಸಲು ಸಾಧ್ಯವಾಗದ ರೀತಿಯಲ್ಲಿ ನಾವು ಚುನಾವಣೆಯನ್ನು ಎದುರಿಸಿದ್ದೇವೆ. ಇಂದು ನೀವು ನೋಡುತ್ತಿರುವ ಸಂಸದ ಬಿಧುರಿ, ತದನಂತರ ಇದ್ದಕ್ಕಿದ್ದಂತೆ ಪ್ರತ್ಯಕ್ಷಗೊಳ್ಳುವ ನಿಶಿಕಾಂತ್ ದುಬೆ. ಬಿಜೆಪಿಯ ಇವರೆಲ್ಲರೂ ಜಾತಿ ಗಣತಿಯ ಕಲ್ಪನೆಯನ್ನು ವಿಚಲಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಜಾತಿ ಗಣತಿ ಕಲ್ಪನೆಯು ಜನರು ಬಯಸುತ್ತಿರುವ ಮೂಲಭೂತ ವಿಷಯ ಎಂದು ಅವರಿಗೆ ತಿಳಿದಿದೆ. ಈ ಗಮನವನ್ನು ಬೇರೆ ಸೆಳೆಯುವುದಕ್ಕೆ ಜನರಲ್ಲಿ ಕೋಮು ಭಾವನೆಗಳನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಷಸರ್ಪದ ಸಂತತಿಯ ಸಖ್ಯವೇ ಸುಖವಾಯಿತಾ ಕುಮಾರಣ್ಣ!?
“ಬಿಜೆಪಿಯು ನಮ್ಮ ಉದ್ದೇಶಗಳನ್ನು ವಿಸ್ತರಿಸಲು ಅವಕಾಶ ನೀಡದೆ ವಿಚಲಿತಗೊಳಿಸುವ ಮೂಲಕ ಚುನಾವಣೆಗಳನ್ನು ಗೆಲ್ಲುತ್ತದೆ. ಅದನ್ನು ಹೇಗೆ ಎದುರಿಸಬೇಕೆಂದು ನಾವು ಕಲಿತಿದ್ದೇವೆ. ಈಗ, ಬಿಜೆಪಿ ಏನು ಮಾಡಲು ಪ್ರಯತ್ನಿಸಿದರೂ, ನಾವು ಅವರ ಕುತಂತ್ರವನ್ನು ನಿಯಂತ್ರಿಸುತ್ತೇವೆ. ಕರ್ನಾಟಕ ವಿಧಾನಸಭಾ ಚುನಾವಣೆ ಗೆಲುವಿನ ಮೂಲಕ ಕಾಂಗ್ರೆಸ್ ಮಹತ್ವದ ಪಾಠವೊಂದನ್ನು ಕಲಿತಿದೆ. ಮುಂದಿನ ಪಂಚ ರಾಜ್ಯಗಳಿಗೂ ನಮ್ಮ ಜಯ ಸಾಗಲಿದೆ” ಎಂದು ರಾಹುಲ್ ಗಾಂಧಿ ಹೇಳಿದರು.
“ಅದಾನಿ ಅವರು ನಮ್ಮ ದೇಶದ ಪ್ರಮುಖ ಕೈಗಾರಿಕೆಗಳ ನಿಯಂತ್ರಣವನ್ನು ಹೊಂದಿದ್ದಾರೆ. ಅವರು ಮಾಧ್ಯಮದ ಗಮನಾರ್ಹ ಭಾಗವನ್ನು ಸಹ ನಿಯಂತ್ರಿಸುತ್ತಾರೆ. ಬಿಜೆಪಿಯು ಇದರಿಂದ ಗಣನೀಯ ಪ್ರಮಾಣದ ಲಾಭವನ್ನು ಪಡೆಯುತ್ತಿದೆ. ಯಾವುದೇ ಉದ್ಯಮಿ ವಿರೋಧ ಪಕ್ಷವನ್ನು ಬೆಂಬಲಿಸಿದಾಗ ಅವರಿಗೆ ಏನಾಗುತ್ತದೆ ಎಂದು ದಯವಿಟ್ಟು ಅದೇ ಉದ್ಯಮಿಯನ್ನು ಒಮ್ಮೆ ಕೇಳಿ. ಈ ಸವಾಲುಗಳ ನಡುವೆಯೂ ನಾವು ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ. ನಾವು ಒಂದಾಗಿದ್ದೇವೆ. ವಿರೋಧ ಪಕ್ಷಗಳು ಈ ರೀತಿ ಕೆಲಸ ಮಾಡುವುದನ್ನು ನಾನು ಹಿಂದೆಂದೂ ನೋಡಿಲ್ಲ” ಎಂದು ರಾಹುಲ್ ತಿಳಿಸಿದರು.
“ಭಾರತದಲ್ಲಿನ ಪ್ರಮುಖ ಸಮಸ್ಯೆಗಳೆಂದರೆ ಸಂಪತ್ತಿನ ಕೇಂದ್ರೀಕರಣ, ಸಂಪತ್ತಿನಲ್ಲಿ ಭಾರಿ ಅಸಮಾನತೆ, ಬೃಹತ್ ನಿರುದ್ಯೋಗ, ದಲಿತರು, ಒಬಿಸಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಭಾರಿ ಅನ್ಯಾಯ ಮತ್ತು ಬೆಲೆ ಏರಿಕೆಗಳಾಗಿವೆ. ನಾವು ಭಾರತದ ಕಲ್ಪನೆಯನ್ನು ರಕ್ಷಿಸಲು ಹೋರಾಡುತ್ತಿದ್ದೇವೆ. ಅದಕ್ಕಾಗಿಯೇ ನಾವು ನಮ್ಮ ಹೆಸರನ್ನು ಇಂಡಿಯಾ ಎಂದು ಇಟ್ಟುಕೊಂಡಿದ್ದೇವೆ” ಎಂದು ಹೇಳಿದರು.