ಯುವ ಪೀಳಿಗೆಗೆ ಡಾ. ಬಿ.ಆರ್ ಅಂಬೇಡ್ಕರ್ ರವರ ಜ್ಞಾನ ಆದರ್ಶವಾಗಬೇಕು. ಅವರ ಸಮಗ್ರ ಕೃತಿಗಳನ್ನು ಓದುವುದರ ಮೂಲಕ ಜ್ಞಾನವನ್ನು, ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಸಚಿವರ ನಹೀದಾ ಜಮ್ ಜಮ್ ತಿಳಿಸಿದರು.
ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ವಿಶ್ವವಿದ್ಯಾನಿಲಯ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಆಯೋಜಿಸಿದ್ದ ‘ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಓದು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ನಿರಂತರ ಅಧ್ಯಯನ, ಏಕಾಗ್ರತೆ, ಸ್ವಅರಿವು, ಶಿಸ್ತು, ದೃಢಸಂಕಲ್ಪ ಇವೆಲ್ಲವನ್ನು ಮೈಗೂಡಿಸಿಕೊಂಡ ಕಾರಣದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಜಗತ್ ಪ್ರಸಿದ್ಧಿಯನ್ನು ಪಡೆದು ಈ ದೇಶದ ಶೋಷಿತರ ಮತ್ತು ಮಹಿಳೆಯರ ಬೆಳಕಾಗಿ ಇಂದಿಗೂ ಸಾಧನೆಯ ಶಿಖರವಾಗಿದ್ದಾರೆ. ಇಂದಿನ ವಿದ್ಯಾರ್ಥಿಗಳು ಮೌಢ್ಯತೆಗಳಿಗೆ ಮಾರು ಹೋಗದೆ ವೈಚಾರಿಕ ಮನೋಭಾವದಿಂದ ದೇಶವನ್ನು ಕಟ್ಟಲು ಅನೇಕ ರೀತಿಯ ಬರಹ ಭಾಷಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ” ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಐಕ್ಯೂಎಸಿ ನಿರ್ದೇಶಕ ಪ್ರೊ. ಬಿ. ರಮೇಶ್ ಮಾತನಾಡಿದ, “ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಚಿಂತನೆಗಳು ಇಂದಿಗೆ ಅತ್ಯಗತ್ಯವಾಗಿ ಬೇಕಾಗಿದೆ. ಇಂದಿನ ಸಮಾಜವು ಆಧುನಿಕತೆಯ ಮಾರ್ಗದಲ್ಲಿ ಸಾಗುತ್ತಿದ್ದರೂ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ, ಕೋಮುವಾದ, ಅಸಮಾನತೆ, ಬಂಡವಾಳ ಶಾಹಿ ವ್ಯವಸ್ಥೆ ಇವೆಲ್ಲವು ಸಂವಿಧಾನದ ಆಶಯಗಳನ್ನು ನಾಶ ಮಾಡುತ್ತಿವೆ. ಡಾ. ಬಿ.ಆರ್.ಅಂಬೇಡ್ಕರ್ ರವರ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆ ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡಾಗ ಸಂವಿಧಾನದ ನೈಜ ಆಶಯಗಳು ಅರ್ಥವಾಗುತ್ತವೆ. ಸಮಾಜವು ಸುಧಾರಣೆಯಾಗುತ್ತದೆ” ಎಂದು ತಿಳಿಸಿದರು.
ಡಾ. ಬಿ.ಆರ್.ಅಂಬೇಡ್ಕರ್ ರವರ ವಿಚಾರ ಧಾರೆಗಳು ಜೀವಪರ ಮಾನವೀಯತೆಯ ನೆಲೆಗಟ್ಟಿನಿಂದ ಕೂಡಿದ್ದು, ಸಮಾನತೆ, ಸಾಮಾಜಿಕ ನ್ಯಾಯ, ಭ್ರಾತೃತ್ವ, ಜಾತ್ಯಾತೀತತೆ ಮುಂತಾದ ಅಂಶಗಳು ಈ ದೇಶಕ್ಕೆ ಅನಿವಾರ್ಯವಾಗಿದ್ದು ಇವುಗಳನ್ನು ಕಾಯ್ದುಕೊಳ್ಳಲು ಇಂದಿನ ಯುವಕರು ಸದಾ ಸನ್ನದ್ಧರಾಗಬೇಕು ಎಂದು ತಿಳಿಸಿದರು.
ಪ್ರಬಂಧ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಬಿ.ಎಂ ರಾಧಾ, ದ್ವಿತೀಯ ಸ್ಥಾನ ತೇಜಸ್ವಿನಿ ಎಸ್., ಅಭಿಷೇಕ್ ಎ. ಬೆನ್ನೂರ್ ಹಾಗೂ ಸಮಾಧಾನಕರ ಬಹುಮಾನಗಳಾಗಿ ತಿಪ್ಪೇಸ್ವಾಮಿ, ಹಾಗೂ ಪೂಜಾ, ಅವರುಗಳು ಆಯ್ಕೆಯಾಗಿದ್ದು, ಈ ಸಂದರ್ಭದಲ್ಲಿ ಅವರಿಗೆ ಪುಸ್ತಕಗಳನ್ನು ಬಹುಮಾನದ ರೂಪದಲ್ಲಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದ ವಿಶೇಷ ಘಟಕ ಯೋಜನೆ ಸಂಚಾಲಕ ಡಾ.ಕೆ. ಮಹಾಲಿಂಗ, ಸಂಯೋಜಕ ಡಾ. ಚಿಕ್ಕಣ್ಣ, ಡಾ: ಕೆ. ಎನ್. ಲಕ್ಷ್ಮಿರಂಗಯ್ಯ, ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆಯ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.