ಕಾಂಗ್ರೆಸ್ ಪ್ರಣಾಳಿಕೆಯ ಘೋಷಣೆಯಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೊಳಪಡಿಸಲು ಆಗ್ರಹಿಸಿ ನುಡಿದಂತೆ ನಡೆಯಿರಿ ಎಂಬ ಘೋಷಣೆಯಡಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ, ಹೊರಗುತ್ತಿಗೆ ನೌಕರರ ಸಂಘದ ಕಾರ್ಯಕರ್ತರು ನವೆಂಬರ್ 15ರಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಧರಣಿ ನಡೆಸಿದರು.
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹೊರಗುತ್ತಿಗೆ ನೌಕರರು ಮಾತನಾಡಿ, “ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂ ಮಾಡಲು ಮುಂದಾಗಿರುವ ಸರ್ಕಾರ ಪೌರಕಾರ್ಮಿಕರೊಟ್ಟಿಗೆ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಾಹನ ಚಾಲಕರು. ನೀರುಸರಬರಾಜು ಸಹಾಯಕರು ಲೋಡರ್ಸ್, ಕ್ಲೀನರ್ಸ್ ಯೂಜಿಡಿ ಕಾರ್ಮಿಕರು ಸೇರಿದಂತೆ 15 ಸಾವಿರಕ್ಕು ಅಧಿಕ ನೌಕರರನ್ನು ಗುತ್ತಿಗೆಯಲ್ಲಿ ಉಳಿಸಲಾಗಿದೆ. ನಗರಗಳ ಸ್ವಚ್ಛತೆ ಹಾಗೂ ಕುಡಿಯುವ ನೀರು ನಿರ್ವಹಣೆಯಲ್ಲಿ ಹೊರಗುತ್ತಿಗೆ ನೌಕರರ ಪಾತ್ರ ಮಹತ್ವದ್ದಾಗಿದೆ” ಎಂದರು.
“2017ರಲ್ಲಿ ಪೌರಕಾರ್ಮಿಕರ ನೇಮಕಾತಿಗೊಳಿಸಿದಾಗಲೂ ಹೊರಗುತ್ತಿಗೆ ನೌಕರರನ್ನು ಗುತ್ತಿಗೆಯಲ್ಲಿ ಉಳಿಸಲಾಯಿತು. 1964ರ ಪೌರಾಡಳಿತ ಕಾಯ್ದೆ ಪ್ರಕಾರ ಕಸ ಸಾಗಿಸುವ ವಾಹನ ಚಾಲಕರು ಲೋಡರ್ಸ್, ಕ್ಲೀನರ್ಸ್, ಹೆಲ್ಪರ್ಸ್, ಯೂಜಿಡಿ ಕಾರ್ಮಿಕರನ್ನೂ ಪೌರಕಾರ್ಮಿಕರೆಂದು ಗುರುತಿಸಲಾಗಿದೆ. ಆದರೂ ನಗರಾಭಿವೃದ್ಧಿ ಅಧಿಕಾರಿಗಳು ತಾರತಮ್ಯ ಎಸಗಿ ನೇರನೇಮಕಾತಿ ಹಾಗೂ ನೇರಪಾವತಿಯಲ್ಲಿ ಹೊರಗುತ್ತಿಗೆ ನೌಕರರಿಗೆ ಅನ್ಯಾಯ ಎಸಗಲಾಯಿತು. ಈಗಲೂ ಕೂಡ ಹೊರಗುತ್ತಿಗೆ ನೌಕರರನ್ನು ಗುತ್ತಿಗೆಯಲ್ಲಿ ಮುಂದುವರಿಸುವ ಸರ್ಕಾರದ ನೀತಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಒಂದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರ ಮಧ್ಯೆ ಒಡೆದಾಳುವ ನೀತಿ ಅನುಸರಿಸುವುದು ಶೋಭೆಯಲ್ಲ. ಕಳೆದ ಸರ್ಕಾರದಲ್ಲಿ ತೀವ್ರ ಹೋರಾಟದ ಪರಿಣಾಮ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿ ಕಡತ ಹಣಕಾಸು ಇಲಾಖೆಯ ಪರೀಶೀಲನೆಯಲ್ಲಿರುವಾಗಲೆ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾದವು (ಕಡತ ಸಂಖ್ಯೆ :UDD/11/GEL/2023)(UDD/GEL/137-22) ಈ ಸಂಬಂದ ಕಡತವನ್ನು ಸಂಪುಟದಲ್ಲಿ ಅಂಗೀಕರಿಸಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ‘ವಧು ಭಾಗ್ಯʼಕ್ಕೆ ಒತ್ತಾಯ; ಆದಿಚುಂಚನಗಿರಿಗೆ ಯುವಕರ ಪಾದಯಾತ್ರೆ
“ಕಳೆದ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತರಬೇಕು. ಘನ ತ್ಯಾಜ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಕಸ ಸಾಗಿಸುವ ವಾಹನ ಚಾಲಕರು, ಲೋಡರ್ಸ್, ಕ್ಲೀನರ್ಸ್ ಹೆಲ್ಪರ್ಸ್, ಯೂಜಿಡಿ ಕಾರ್ಮಿಕರು, ಸ್ಯಾನಿಟರಿ ಸೂಪರ್ ವೈಸರ್ಗಳನ್ನು ಏಕಕಾಲಕ್ಕೆ ಗುತ್ತಿಗೆ ಪದ್ಧತಿ ಬದಲು ನೇರಪಾವತಿಗೆ ತರಬೇಕು. 1964ರ ಪೌರಾಡಳಿತ ಕಾಯ್ದೆ ಪ್ರಕಾರ ಇವರನ್ನು ಪೌರಕಾರ್ಮಿಕರೆಂದು ಒಪ್ಪಿರುವುದರಿಂದ ಹಾಲಿ ನೇಮಕಾತಿಯಲ್ಲಿ ಇವರಿಗೂ ಅವಕಾಶ ಕಲ್ಪಿಸಬೇಕು. ನೀರು ಸರಬರಾಜು ಸಹಾಯಕರು ಬೀದಿದೀಪ ನಿರ್ವಾಹಕರು ಸ್ಮಶಾನ ಕಾವಲುಗಾರರನ್ನು ಏಕಕಾಲಕ್ಕೆ ನೇರಪಾವತಿಗೆ ತಂದು ಖಾಯಂಗೊಳಿಸಬೇಕು” ಎಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಸೇರಿದಂತೆ ಬಹುತೇಕ ಕಾರ್ಮುಕರು ಇದ್ದರು.