ಕೆನಡಾ ದೇಶದ ಪೌರತ್ವ ಹೊಂದಿರುವ ಉತ್ತರಪ್ರದೇಶದ ಅಲಿಗಢ ಮೂಲದ ಉರ್ದು ಕವಿ ತಾರೀಕ್ ಫಾರುಕ್ (78) ಎಂಬುವರು ಭಾನುವಾರ ಬಸವಕಲ್ಯಾಣದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬಸವಕಲ್ಯಾಣ ನಗರದ ತೇರು ಮೈದಾನದ ಬಿಕೆಡಿಬಿ ಸಭಾ ಭವನದಲ್ಲಿ ಕರ್ನಾಟಕ ಟೆಕ್ನೋಕ್ರೇಟ್ ಅಸೋಸಿಯೇಶನ್ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಟ್ಟದ ಮುಷಾಯಿರಾ ಹಾಗೂ ಕವಿ ಸಮ್ಮೇಳನದಲ್ಲಿ ಭಾಗವಹಿಸಲು ಅವರು ಬಸವಕಲ್ಯಾಣಕ್ಕೆ ಬಂದಿದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೊದಲೇ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದ ಹಿನ್ನಲೆಯಲ್ಲಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.
ಉತ್ತರ ಪ್ರದೇಶದ ಅಲಿಗಢ ಮೂಲದವರಾದ ಕವಿ ತಾರೀಖ್ ಮೂರು ದಶಕಗಳಿಂದ ಕೆನಡಾದಲ್ಲಿ ನೆಲೆಸಿ ಅಲ್ಲಿನ ಪೌರತ್ವ ಪಡೆದಿದ್ದರು. ಉದ್ಯೋಗದ ಜೊತೆಗೆ ಮುಷಾಯಿರಾ ಹೇಳುವ ಪ್ರವೃತ್ತಿ ಹೊಂದಿದ್ದರು.
ಮೃತರಿಗೆ ಇಬ್ಬರು ಪುತ್ರರು ಅಲಿಗಢದಲ್ಲಿ ಇರುವುದರಿಂದ ಮೃತದೇಹವನ್ನು ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.