ಕೈಯಿಂದ ಮಲ ಬಾಚುವ ವೇಳೆ ಮಲದ ಗುಂಡಿಯಲ್ಲಿ ಉಸಿರುಗಟ್ಟಿ ಮೃತಪಟ್ಟ ಪೌರ ಕಾರ್ಮಿಕನ ಪತ್ನಿಗೆ 30 ಲಕ್ಷ ರೂ.ಗಳ ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್ ಸ್ಥಳೀಯ ನಗರ ಆಡಳಿತಕ್ಕೆ ಆದೇಶ ನೀಡಿದೆ.
ಮಲದ ಗುಂಡಿಯಲ್ಲಿ ಜೀವ ಕಳೆದುಕೊಂಡ ಸಂತ್ರಸ್ತರ ಅವಲಂಬಿತರಿಗೆ ನೀಡಬೇಕಾದ ಪರಿಹಾರವನ್ನು 10 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸುವ ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ತನಗೆ ನೀಡಲಾದ ಪರಿಹಾರವನ್ನು ಹೆಚ್ಚಿಸುವಂತೆ ಕೋರಿ ಸಲ್ಲಿಸಿದ್ದ ಮೃತ ಪೌರ ಕಾರ್ಮಿಕನ ಪತ್ನಿಯ ಮನವಿಯನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ ಅವರು ಅಂಗೀಕರಿಸಿದರು.
ಸುಪ್ರೀಂ ಕೋರ್ಟಿನ ತೀರ್ಪು ಪ್ರಸ್ತುತ ಪ್ರಕರಣಕ್ಕೂ ಅನ್ವಯಿಸುತ್ತದೆ ಎಂದು ಹೇಳಿದ ನ್ಯಾಯಾಧೀಶರು, “ಪ್ರಸ್ತುತ ಪ್ರಕರಣದಲ್ಲಿ ಈ ತೀರ್ಪನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವುದರೊಂದಿಗೆ ರಿಟ್ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ” ಎಂದು ಆದೇಶಿಸಿದರು.
“ಸುಪ್ರೀಂ ಕೋರ್ಟಿನ ಆದೇಶಗಳು ಈ ಪ್ರಕರಣದ ವಾಸ್ತವಾಂಶಗಳಿಗೆ ಅನ್ವಯಿಸುತ್ತವೆ ಮತ್ತು ಇಂದಿನಿಂದ ಎರಡು ತಿಂಗಳ ಅವಧಿಯೊಳಗೆ ಜಾರಿಗೆ ಬರುತ್ತವೆ” ಎಂದು ನ್ಯಾಯಾಲಯ ಆದೇಶಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉರಿಯುತ್ತಿರುವ ಬಿಜೆಪಿಯಲ್ಲಿ ಗಳ ಇರಿಯುತ್ತಿರುವ ನಾಯಕರು
ತನಗೆ ಈಗಾಗಲೇ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಆದರೆ ಸುಪ್ರೀಂ ಕೋರ್ಟ್ನ ತೀರ್ಪಿನ ದೃಷ್ಟಿಯಿಂದ ಅದನ್ನು 30 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.
ತನಗೆ ಉದ್ಯೋಗ, ತನ್ನ ಮಕ್ಕಳಿಗೆ ಶಿಕ್ಷಣ ಮತ್ತು ಕೌಶಲ್ಯ ತರಬೇತಿ ಸೇರಿದಂತೆ ಸಂಪೂರ್ಣ ಪುನರ್ವಸತಿ ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಮಹಿಳೆ ಕೋರಿದರು.
ಮಲದ ಗುಂಡಿಗಳಲ್ಲಿ ದೀರ್ಘಕಾಲದವರೆಗೆ ಕಾರ್ಯನಿರ್ವಹಿಸುತ್ತಾ ವ್ಯವಸ್ಥಿತವಾಗಿ ಅಮಾನವೀಯ ಪರಿಸ್ಥಿತಿಗಳಲ್ಲಿ ಸಿಲುಕಿಕೊಂಡು ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿರುವ ಕಾರ್ಮಿಕರ ಸ್ಥಿತಿಯನ್ನು ಕಳೆದ ಅಕ್ಟೋಬರ್ನಲ್ಲಿ ಗಮನಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೇಶಾದ್ಯಂತ ಕೈಯಿಂದ ಮಲ ಬಾಚುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ನಿರ್ದೇಶಿಸಿತ್ತು.
ಅಲ್ಲದೆ, ಮಲದ ಗುಂಡಿ ಕೆಲಸದಲ್ಲಿ ತೊಡಗಿರುವ ಜನರ ಅನುಕೂಲಕ್ಕಾಗಿ ಹಲವಾರು ನಿರ್ದೇಶನಗಳನ್ನು ರವಾನಿಸಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಾವನ್ನಪ್ಪುವವರ ಹತ್ತಿರದ ಸಂಬಂಧಿಕರಿಗೆ 30 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿತ್ತು.