- ಅಕ್ರಮ ಬಂಧನ, ಕಾನೂನುಬಾಹಿರ ಸಭೆ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ ಎಂದು ನೋಟಿಸ್
- ಮೆರವಣಿಗೆಯಲ್ಲಿ ಭಾಗಿಯಾದವರ ಮೇಲೆ ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು
ಬೆಂಗಳೂರಿನ ಹೃದಯ ಭಾಗದಲ್ಲಿರುವ ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಧರಣಿ ನಡೆಸಿದ್ದ 70 ನಾಗರಿಕರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಈ ಕ್ರಮಕ್ಕೆ ನಾಗರಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೆ. 19ರಂದು, ಸ್ಥಳೀಯ ನಾಗರಿಕರು ಪ್ರತಿಭಟನೆಯ ಭಾಗವಾಗಿ ಸಂಚಾರಕ್ಕೆ ಅಡೆತಡೆಯಿಲ್ಲದೆ ಫುಟ್ಪಾತ್ನಲ್ಲಿ ಮೆರವಣಿಗೆ ನಡೆಸಿ, ಪ್ರತಿಭಟಿಸಿದ್ದರು. ಪ್ರತಿಭಟನಾ ಮೆರವಣಿಗೆಯ ಬಳಿಕ ಸದಾಶಿವನಗರ ಠಾಣೆ ಪೊಲೀಸರು 70 ಸ್ಥಳೀಯ ನಾಗರಿಕರ ವಿರುದ್ಧ ಪ್ರಕರಣ ದಾಖಲಿಸಿ, ಅವರಲ್ಲಿ ಒಬ್ಬರನ್ನು ವಿಚಾರಣೆಗೆ ಕರೆಸಲಾಗಿದೆ.
ಮೆರವಣಿಗೆಯಲ್ಲಿ ಭಾಗಿಯಾದವರ ಮೇಲೆ ಐಪಿಸಿಯ ಹಲವು ಸೆಕ್ಷನ್ಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 341, 141, 149 ಮತ್ತು 283 ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾನೂನುಬಾಹಿರ ಸಭೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ ಎಂದು ನೋಟಿಸ್ ನೀಡಲಾಗಿದೆ.
“ಸಾರ್ವಜನಿಕ ಮಾರ್ಗಕ್ಕೆ ಯಾವುದೇ ಅಡ್ಡಿ ಮಾಡಿಲ್ಲ. ಕಾನೂನುಬಾಹಿರ ಸಭೆ ನಡೆಸಿಲ್ಲ. ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲಾಗಿದೆ. ಈ ಬಗ್ಗೆ ವಿಡಿಯೋ ದಾಖಲೆಗಳು ನಮ್ಮ ಬಳಿ ಇವೆ” ಎಂದು ಸ್ಯಾಂಕಿ ಕೆರೆ ತಂಡ ಟ್ವೀಟ್ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಜಕಾಲುವೆ ಒತ್ತುವರಿ ಮಾಡಿದ್ದ ಬಿಲ್ಡರ್ಗೆ ₹85 ಲಕ್ಷ ದಂಡ ವಿಧಿಸಿದ ಎನ್ಜಿಟಿ
“ಈ ಸುಳ್ಳು ಆರೋಪಗಳಿಗೆ ನಾವು ಹೆದರುವುದಿಲ್ಲ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮಾಡಿದಂತೆಯೇ, ನಮ್ಮ ಪರಿಸರ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಅನ್ಯಾಯದ ವಿರುದ್ಧ ಕೆಚ್ಚೆದೆಯ ನಿಲುವು ತೆಗೆದುಕೊಳ್ಳಲು ಇನ್ನೂ ಹೆಚ್ಚಿನ ಭಾರತೀಯರ ಅಗತ್ಯವಿದೆ”ಎಂದು ಅವಿಜಿತ್ ಮೈಕೆಲ್ ಹೇಳಿದರು.
“ನಿಸರ್ಗ ಮತ್ತು ಬೆಂಗಳೂರಿನ ನಾಗರಿಕರ ಆರೋಗ್ಯ ಮತ್ತು ನಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಕಾನೂನು ಪಾಲಿಸುವ ನಾಗರಿಕ. ನನ್ನ ವಿರುದ್ಧ ಹೊರಿಸಲಾದ ಯಾವುದೇ ಆರೋಪಗಳನ್ನು ನಾನು ಸ್ವೀಕರಿಸುವುದಿಲ್ಲ. ಏಕೆಂದರೆ ಅವುಗಳಿಗೆ ಯಾವುದೇ ಅರ್ಹತೆ ಇಲ್ಲ” ಎಂದರು.
“ಮುಖ್ಯಮಂತ್ರಿ ಬೊಮ್ಮಾಯಿ ಅವರೇ ನೀವು ಪರಿಸರವನ್ನು ರಕ್ಷಿಸುವುದಿಲ್ಲ, ಕಾನೂನನ್ನು ಅನುಸರಿಸುವುದಿಲ್ಲ. ನಾಗರಿಕರು ಇದನ್ನು ಮಾಡಲು ಮುಂದಾದಾಗ, ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತೀರಿ” ಎಂದು ವಕೀಲ್ ವಿನಯ್ ಕೂರಗಾಯಲ ಶ್ರೀನಿವಾಸ ಟ್ವೀಟ್ ಮಾಡಿದ್ದಾರೆ.
ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಶಾಂತಿಯುತ ಪ್ರತಿಭಟನಾಕಾರರಿಗೆ ಪೊಲೀಸರು ಬೆದರಿಕೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.