- ಆನೆ ದಂತವಿದ್ದ ಚೀಲವನ್ನು ಹೊತ್ತೊಯ್ಯುತ್ತಿದ್ದ ರವಿ
- ವೃತ್ತಿಪರ ಬೇಟೆಗಾರರಾಗಿದ್ದ ಇಬ್ಬರು ಬಂಧಿತರು
25.5 ಕೆಜಿ ತೂಕದ ಆನೆ ದಂತವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಗಿರಿನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕನಕಪುರದ ಹೆರಿಂಡ್ಯಪನಹಳ್ಳಿ ಗ್ರಾಮದ ರವಿಕುಮಾರ್ (45) ಮತ್ತು ರಾಮನಗರ ಜಿಲ್ಲೆಯ ಕುಲುಮೆ ಭೀಮಸಂದ್ರ ಗ್ರಾಮದ 58 ವರ್ಷದ ಸೋಮಶೇಖರ್ ಬಂಧಿತರು.
ಬುಧವಾರ ಬನಶಂಕರಿಯ 3ನೇ ಹಂತದ ಸಪ್ತಗಿರಿ ಲೇಔಟ್ನ ಹನುಮಗಿರಿ ಬೆಟ್ಟದ ನೀಲಗಿರಿ ತೋಪಿನಲ್ಲಿ ವ್ಯಕ್ತಿಯೊಬ್ಬರು ಆನೆ ದಂತವನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಜೆಪಿ ನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನೋಜ್ ಕುಮಾರ್ ಡಿ ಎಸ್ ಅವರಿಗೆ ಮಾಹಿತಿ ಲಭಿಸಿದೆ. ಕೂಡಲೇ ಅವರು ಗಿರಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆನೆ ದಂತವಿರುವ ಗೋಣಿ ಚೀಲವನ್ನು ರವಿಕುಮಾರ ಹೊತ್ತೊಯ್ಯುತ್ತಿರುವುದನ್ನು ಕಂಡಿದ್ದಾರೆ.
ಪೊಲೀಸರು ಸೋಮಶೇಖರ್ ಹಾಗೂ ರವಿಕುಮಾರನನ್ನು ಬಂಧಿಸಿದ್ದು, ಕಳ್ಳಸಾಗಣೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಇತರರನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
“ಇಬ್ಬರು ಬಂಧಿತರು ವೃತ್ತಿಪರ ಬೇಟೆಗಾರರಾಗಿದ್ದಾರೆ. ಅವರ ವಿರುದ್ಧ ಹಿಂದೆ ಪ್ರಕರಣಗಳು ದಾಖಲಾಗಿದ್ದರೆ, ಪರಿಶೀಲಿಸುತ್ತೇವೆ. ಬಂಧಿತ ಇಬ್ಬರನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ” ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
“ರವಿ ತನ್ನ ಗ್ರಾಮದ ಬಳಿ ಸತ್ತ ಆನೆಯಿಂದ ದಂತವನ್ನು ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಸತ್ತ ಆನೆಯನ್ನು ಪತ್ತೆ ಹಚ್ಚುತ್ತೇವೆ. ಅದು ಸ್ವಾಭಾವಿಕ ಕಾರಣಗಳಿಂದ ಸತ್ತಿದೆಯೇ ಅಥವಾ ರವಿ ಮತ್ತು ಅವನ ಸಹಚರರು ಸೇರಿ ಕೊಂದಿದ್ದಾರೆಯೇ ಎಂದು ನಿರ್ಧರಿಸಲು ಮರಣೋತ್ತರ ಪರೀಕ್ಷೆ ನಡೆಸುತ್ತೇವೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಚಿನ್ನಕ್ಕಾಗಿ ಅಜ್ಜಿಯ ಕೊಲೆ : ಮೂವರ ಬಂಧನ
ಹಲವು ವರ್ಷಗಳಿಂದ ಕನಕಪುರ ವ್ಯಾಪ್ತಿಯ ಅರಣ್ಯದಲ್ಲಿ ಮೊಲ, ಕಾಡು ಹಂದಿ ಹಾಗೂ ಜಿಂಕೆ ಸೇರಿದಂತೆ ವನ್ಯಜೀವಿಗಳನ್ನು ಆರೋಪಿಗಳು ಬೇಟೆಯಾಡಿದ ಬಳಿಕ ಆ ವ್ಯನ್ಯಜೀವಿಗಳ ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಕಾಡಿಗೆ ಮೊಲ ಬೇಟೆಗೆ ತೆರಳಿದ್ದಾಗ ಅಲ್ಲಿ ಸತ್ತು ಬಿದ್ದಿದ್ದ ಆನೆಯ ದಂತವನ್ನು ಕತ್ತರಿಸಿಕೊಂಡು ಬಂದು ನಗರದಲ್ಲಿ ಮಾರಾಟಕ್ಕೆ ಆರೋಪಿಗಳು ಯತ್ನಿಸಿದ್ದರು. ಶಂಕಿತ ಆರೋಪಿಗಳು ಕನಕಪುರದ ಅರಣ್ಯ ಪ್ರದೇಶದಿಂದ ದಂತವನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಸೋಮಶೇಖರ್ ಮಧ್ಯವರ್ತಿಯಾಗಿ ದಂತ ಮಾರಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದರು ಎಂದು ತಿಳಿದುಬಂದಿದೆ.