- ಮತದಾನಕ್ಕೆ ಪ್ರೋತ್ಸಾಹಿಸುವುದು ಒಳ್ಳೆಯ ಕ್ರಮ ಎಂದ ತುಷಾರ್ ಗಿರಿನಾಥ್
- ಹೋಟೆಲ್ ಮಾಲೀಕರನ್ನೇ ನೇರೆ ಹೊಣೆಗಾರರನ್ನಾಗಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಮತದಾನ ಮೇ 10ರಂದು ನಡೆಯಲಿದೆ. ಈ ವೇಳೆ, ಮತದಾನ ಮಾಡುವುದಕ್ಕೆ ಉತ್ತೇಜಿಸುವ ಸಲುವಾಗಿ ಬೆಂಗಳೂರಿನಲ್ಲಿರುವ ನಿಸರ್ಗ ಗ್ರ್ಯಾಂಡ್ ಮತ್ತು ಚಾಲುಕ್ಯ ಸಾಮ್ರಾಟ್ ಹೋಟೆಲ್ ಬೆಳಗಿನ ಉಪಾಹಾರ ಉಚಿತವಾಗಿ ನೀಡಲಾಗುವುದು ಎಂದು ಭಿತ್ತಿಪತ್ರದ ಮೂಲಕ ತಿಳಿಸಿದ್ದವು. ಇದೀಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದಕ್ಕೆ ಅನುಮತಿ ನೀಡುವುದಿಲ್ಲ. ಇಂತಹ ಉಚಿತಗಳನ್ನು ಹೋಟೆಲ್ ಮಾಲೀಕರು ನೀಡಬಾರದು ಎಂದು ಸೂಚನೆ ನೀಡಿದೆ.
ಮತದಾನ ಮಾಡಿದ ಗ್ರಾಹಕರಿಗೆ ಉಚಿತ ಆಹಾರ ನೀಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತಿಪತ್ರ ಹರಿದಾಡುತ್ತಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ದಿನ.ಕಾಮ್ ಜತೆಗೆ ಮಾತನಾಡಿ, ”ಮತದಾನಕ್ಕೆ ಪ್ರೋತ್ಸಾಹಿಸುವುದು ಒಳ್ಳೆಯ ಕ್ರಮವೇ. ಆದರೆ, ಅದನ್ನೇ ಸ್ವಯಂ ಪ್ರಚಾರಕ್ಕಾಗಿ ಬಳಸಿಕೊಳ್ಳಲು ಕಾನೂನು ಅನುಮತಿ ನೀಡಿಲ್ಲ. ಸರ್ಕಾರೇತರ ಸಂಸ್ಥೆಗಳು ಈ ರೀತಿ ಕ್ರಮ ಕೈಗೊಳ್ಳುವುದು ಸರಿಯಲ್ಲ. ಚುನಾವಣೆಯನ್ನು ಪ್ರಚಾರ ವಸ್ತುವಾಗಿಸಿಕೊಳ್ಳುವ ಇಂಗಿತ ಉಚಿತ ತಿಂಡಿ ವಿತರಣೆ ಜಾಹೀರಾತುಗಳ ಹಿನ್ನೆಲೆಯಲ್ಲಿರುವ ಕಾರಣ ಇವುಗಳಿಗೆ ಅವಕಾಶ ಮಾಡಿಕೊಡುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಮತದಾನ ಮಾಡಿದವರಿಗೆ ಉಚಿತ ತಿಂಡಿ ನೀಡುವುದು ಸೇರಿದಂತೆ ಇಂತಹ ಪ್ರಚಾರಗಳಿಗೆ ನಾವು ಅನುಮತಿ ನೀಡುವುದಿಲ್ಲ. ಇಂತಹ ಉಚಿತ ನೀಡುವ ಭರವಸೆಗಳನ್ನು ಹೋಟೆಲ್ ಮಾಲೀಕರು ನೀಡಬಾರದು. ಒಂದು ವೇಳೆ ಈ ರೀತಿಯ ಭಿತ್ತಿಪತ್ರಗಳು ಕಂಡುಬಂದರೆ ಅಥವಾ ಈ ರೀತಿಯ ಪ್ರಕಟಣೆಗಳಿಗೆ ಸಂಬಂಧಿಸಿದ ಹೋಟೆಲ್ ಮಾಲೀಕರನ್ನೇ ನೇರೆ ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮತದಾನ ಮಾಡಿ ಉಚಿತ ತಿಂಡಿ ತಿನ್ನಿ ಎಂದ ನಿಸರ್ಗ ಗ್ರ್ಯಾಂಡ್ ಹೋಟೆಲ್
2023ರ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆ, ಮಾ. 29ರಿಂದ ಮಾದರಿ ನೀತಿ ಸಂಹಿತಿಯು ಜಾರಿಯಲ್ಲಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.