- ನಗರದ ಹಲವು ರಸ್ತೆಗಳು ನೀರಿನಿಂದ ಜಲಾವೃತ
- ಮಳೆಯಿಂದ ವಾಹನ ಸವಾರರ ಪರದಾಟ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಡೆ ಭಾರೀ ಮಳೆಯಾಗುತ್ತಿದೆ. ನಗರದಲ್ಲಿ ಸೋಮವಾರ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಸಂಜೆ 4 ಗಂಟೆ ಸುಮಾರಿಗೆ ಜೋರು ಮಳೆ ಪ್ರಾರಂಭವಾಗಿದೆ.
ಬೆಂಗಳೂರಿನ ಆಕಾಶದ ತುಂಬೆಲ್ಲ ಮೋಡ ದಟ್ಟೈಸಿದೆ. ಮುಗಿಲಲ್ಲಿ ಕಾರ್ಮೋಡ ಕವಿದಿದ್ದು ಇನ್ನಷ್ಟು ಮಳೆ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ಸಾಯಂಕಾಲ ಆರಂಭವಾದ ಮಳೆಗೆ ನಗರದ ಜನ ಹೈರಾಣಾಗಿದ್ದು, ಆಫೀಸ್ ಕೆಲಸ ಮುಗಿಸಿ ಮನೆಗೆ ತೆರಳಲು ವಾಹನ ಸವಾರರು ಪರದಾಡಿದರು.
ಕೆರೆಯಂತಾದ ಬೆಂಗಳೂರು ನಗರಿ
ಕೇವಲ ಅರ್ಧ ಗಂಟೆ ಸುರಿದ ಮಳೆಗೆ ರಾಜಧಾನಿ ಬೆಂಗಳೂರಿನ ಬಿಎಲ್ಆರ್ ಸೌತ್, ಬೊಮ್ಮನಹಳ್ಳಿ, ಎಚ್ಎಸ್ಆರ್ ಲೇಔಟ್, ಬೆಳ್ಳಂದೂರು, ವೈಟ್ಫೀಲ್ಡ್, ಹೊಸಕೆರೆಹಳ್ಳಿ ಸೇರಿದಂತೆ ಹಲವೆಡೆ ರಸ್ತೆಗಳು ನೀರಿನಿಂದ ಜಲಾವೃತವಾಗಿದ್ದವು.
ಒಂದು ಬದಿಯಿಂದ ಇನ್ನೊಂದು ಬದಿಗೆ ತೆರಳಲು ಸಾರ್ವಜನಿಕರು ಪರದಾಡುವಂತಾಯಿತು. ವಾಹನ ಸವಾರರು ನೀರಿನಲ್ಲೇ ತೆರಳುವಂತಾಯಿತು. ಮಳೆಯಿಂದ ಹಲವು ಅಂಡರ್ಪಾಸ್ಗಳು ಹಾಗೂ ರಸ್ತೆಗಳು, ಗುಂಡಿ ಬಿದ್ದ ರಸ್ತೆಗಳು ಜಲಾವೃತವಾದ ಕಾರಣ ವಾಹನ ಸಂಚಾರ ದಟ್ಟಣೆ ಉಂಟಾಯಿತು.
ಕಳಪೆ ಗುಣಮಟ್ಟದ ಒಳಚರಂಡಿ ನಿರ್ಮಾಣ ; ಆಕ್ರೋಶ
ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ಭಾರೀ ಮಳೆಯಾಗಿದೆ. 2020ರಲ್ಲಿ ಭಾರೀ ಮಳೆಯಾದಾಗ ಸುಮಾರು 300 ಮನೆಗಳು 6 ಅಡಿಗಳಷ್ಟು ನೀರಿನಿಂದ ತುಂಬಿದ್ದವು. ಈ ವೇಳೆ, ನೀರು ಸರಾಗವಾಗಿ ಹರಿಯಲು ಹೊಸ ಡ್ರೈನೇಜ್ ಅನ್ನು ನಿರ್ಮಿಸಲಾಯಿತು. ಇದೀಗ ಡ್ರೈನೇಜ್ ನಿರ್ಮಾಣ ಮಾಡಿ ಒಂದು ವರ್ಷ ಕಳೆಯುವ ಮೊದಲು ಮತ್ತೆ ರಸ್ತೆ ತುಂಬೆಲ್ಲಾ ನೀರು ನಿಂತಿದೆ. ಇದು ಕಳಪೆ ಗುಣಮಟ್ಟದ ಒಳಚರಂಡಿ ನಿರ್ಮಾಣ ಮಾಡಲಾಗಿದೆ ಎಂದು ಹರ್ಷ ಎಂಬುವವರು ಟ್ವೀಟ್ ಮಾಡಿದ್ದಾರೆ.
ರೈಲು ನಿಲ್ದಾಣದಲ್ಲಿ ಸೋರುತ್ತಿರುವ ಮಾಳಿಗೆ
ಬೆಂಗಳೂರಿನ ಕೆ.ಆರ್.ಪುರಂ ರೈಲು ನಿಲ್ದಾಣದಲ್ಲಿ ಏಕಾಏಕಿ ಸುರಿದ ಭಾರೀ ಮಳೆಗೆ ಛಾವಣಿಯಿಂದ ಮಳೆ ನೀರು ಸುರಿಯಿತು. ಮಳೆ ನೀರಿನಿಂದ ತಪ್ಪಿಸಿಕೊಳ್ಳಲು ಆಸರೆಗಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಸೋಮವಾರ ಎಲ್ಲೆಲ್ಲಿ ಮಳೆಯಾಗಿದೆ?
ಬೆಂಗಳೂರಿನ ಶಾಂತಿನಗರ, ಮಲ್ಲೇಶ್ವರಂ, ರಾಜಾಜಿನಗರ, ವಿಜಯನಗರ, ಪ್ರಕಾಶನಗರ, ಗೋವಿಂದರಾಜನಗರ, ಮೂಡಲಪಾಳ್ಯ, ಜ್ಞಾನಭಾರತಿನಗರ, ನಾಗರಭಾವಿ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ.
ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಉಂಟಾದ ಪರಿಣಾಮ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಇಂದಿನಿಂದ ನಾಲ್ಕು ದಿನಗಳ ಕಾಲ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಸೋಮವಾರ ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನವು 28 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳವಾರ ಮತ್ತು ಬುಧವಾರ ಉಷ್ಣಾಂಶವು 31 ಡಿಗ್ರಿಗೆ ಏರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.