- ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ
- ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಯಾಲೇಸ್ ಬಳಿ ಈ ಘಟನೆ ನಡೆದಿದೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿದ್ದು, ಶೇಷಾದ್ರಿಪುರಂ ಪೊಲೀಸರು ದರೋಡೆಕೋರನ ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿದ್ದಾರೆ.
ಕಳೆದ ಒಂದುವರೆ ವರ್ಷದಿಂದ ನಗರದಲ್ಲಿ ಪೊಲೀಸರ ಬಂದೂಕು ಸದ್ದು ಮಾಡಿರಲಿಲ್ಲ. ಹಾಗಾಗಿ, ನಗರದೆಲ್ಲೆಡೆ ಸರಗಳ್ಳನ, ವಾಹನ ಕಳ್ಳತನ, ಮಾರಕಾಸ್ತ್ರಗಳಿಂದ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳು ವರದಿಯಾಗುತ್ತಿದ್ದವು. ಇದೀಗ ಪೊಲೀಸರು ದರೋಡೆಕೋರ ಯಾಸರ್ (26) ಕಾಲಿಗೆ ಗುಂಡೇಟು ಹೊಡೆದು ಆತನನ್ನು ಆಸ್ಪತ್ರೆ ಬೆಡ್ ಮೇಲೆ ಮಲಗಿಸಿದ್ದಾರೆ.
ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಯಾಲೇಸ್ ಬಳಿ ಈ ಘಟನೆ ನಡೆದಿದ್ದು, ಶೇಷಾದ್ರಿಪುರಂ ಪೊಲೀಸರಿಗೆ ಬೇಕಿದ್ದ ದರೋಡೆಕೋರ ಯಾಸರ್ ಇದೀಗ ಸೆರೆಯಲ್ಲಿದ್ದಾನೆ.
ದರೋಡೆಕೋರ ಯಾಸರ್ ಅಲಿಯಾಸ್ ಘೋರ್ ಸುಲ್ತಾನ್ ಪಾಳ್ಯದ ಭುವನೇಶ್ವರ್ ನಗರದ ನಿವಾಸಿಯಾಗಿದ್ದಾನೆ. ಈತನು ಅಪ್ರಾಪ್ತನಾಗಿದ್ದನಿಂದಲೇ ಸುಲಿಗೆ, ರಾಬರಿಯಲ್ಲಿ ನಿಪುಣನಾಗಿದ್ದನು. ಡ್ರಗ್ಸ್ ತೆಗೆದುಕೊಂಡ ಬಳಿಕ ಜನರಿಂದ ದರೋಡೆ ಮಾಡುತ್ತಿದ್ದ. ಒಂದು ವೇಳೆ ಹಣ ಕೊಡಲಿಲ್ಲ ಎಂದರೆ, ಆತ ಚಾಕು ತೋರಿಸಿ ಹೆದರಿಸುತ್ತಿದ್ದನು.
ಈ ಹಿಂದೆ ಈತನನ್ನು ಸೆರೆ ಹಿಡಿಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಪೊಲೀಸರಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳುತ್ತಿದ್ದನು. ಈತನ ಮೇಲೆ ಮೊಬೈಲ್ ಕಳ್ಳತನ, ಚೈನ್ ಸ್ನ್ಯಾಚಿಂಗ್, ರಾಬರಿ, ಸುಲಿಗೆಯಂತಹ ಏಳಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಈತನು ರಾಬರಿ ಮಾಡುವ ಪ್ರಕರಣಗಳು ಹೆಚ್ಚಾದಾಗ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದರು. ಶೇಷಾದ್ರಿಪುರಂ ಪೊಲೀಸರು ಆರೋಪಿ ಸೆರೆಹಿಡಿಯಲು ಮುಂದಾಗಿದ್ದರು. ಆತನ ಸಹಚರನ ಮಾಹಿತಿ ಮೇರೆಗೆ ಪೊಲೀಸರು ಯಾಸರ್ ಅರಮನೆ ಮೈದಾನದಲ್ಲಿ ಅಡಗಿದ್ದಾನೆ ಎಂಬ ವಿಚಾರ ತಿಳಿದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪೆರಿಫೆರಲ್ ರಿಂಗ್ ರೋಡ್ | 2014ರ ಕಾಯ್ದೆ ಪ್ರಕಾರ ಪರಿಹಾರ ನೀಡಿ, ಇಲ್ಲ ಯೋಜನೆ ಕೈಬಿಡಿ ಎಂದ ರೈತರು
ಮಂಗಳವಾರ ಬೆಳಗ್ಗೆ ನಗರದ ಪ್ಯಾಲೇಸ್ ರೋಡ್ ಬಳಿ ಪೊಲೀಸರು ದರೋಡೆಕೋರನನ್ನು ಸೆರೆ ಹಿಡಿಯಲು ತೆರಳಿದ್ದರು. ಈ ವೇಳೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ದರೋಡೆಕೋರ ಪೊಲೀಸರ ಮೇಲೆಯೇ ಮಾರಕಾಸ್ತ್ರ ಹಿಡಿದು ಅಟ್ಯಾಕ್ ಮಾಡಲು ಪ್ರಯತ್ನಿಸಿದ್ದ, ಪೊಲೀಸರ ಆತ್ಮರಕ್ಷಣೆಗೆ ಶೇಷಾದ್ರಿಪುರಂ ಇನ್ಸ್ಪೆಕ್ಟರ್ ದರೋಡೆಕೋರನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಈತನಿಗೆ ಚಿಕಿತ್ಸೆ ನೀಡಿ, ಬಳಿಕ ವಿಚಾರಣೆ ನಡೆಸಲಾಗುವುದು ಎಂದು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಶೇಷಾದ್ರಿಪುರಂ ಪೊಲೀಸರು ತಿಳಿಸಿದ್ದಾರೆ.