ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಅಘಟಿತ ಘಟಿತ
ಅರಿತು ಜನ್ಮವಾದವರಿಲ್ಲ
ಸತ್ತು ಮರಳಿ ತೋರುವರಿಲ್ಲ.
ದುರಭಿಮಾನವ ಹೊತ್ತು
ಅಘಟಿತ ಘಟಿತವ ನುಡಿವಿರಿ.
ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ.
ವಚನಾರ್ಥ:
ಈ ಪ್ರಪಂಚದಲ್ಲಿ ಅಸಂಖ್ಯಾತ ಜೀವರಾಶಿಗಳಿವೆ. ಅದರಲ್ಲಿ ಮನುಷ್ಯನೂ ಒಬ್ಬ. ಯಾರೂ ತಮಗೆ ಇದೇ ಜನ್ಮ ಬೇಕು ತಾನು ಪ್ರಾಣಿ ಪಕ್ಷಿ ಅಥವಾ ಮನುಷ್ಯನಾಗಬೇಕೆಂದು ಅರಿತು ಆಶಿಸಿ ಜನ್ಮ ತಾಳಿದವರಿಲ್ಲ. ಹಾಗೆಯೇ ಹುಟ್ಟಿದ ಎಲ್ಲಾ ಜೀವಕ್ಕೂ ಸಾವು ಎಂಬುದೊಂದಿದೆ. ಜನನ ಆಕಸ್ಮಿಕ. ಮರಣ ನಿಶ್ಚಿತ.
“ಮರಣದಿಂ ಮುಂದೇನು?
ಪ್ರೇತವೋ? ಭೂತವೋ?
ಪರಲೋಕವೋ? ಪುನರ್ಜನ್ಮವೊ?
ಅದೇನೋ! ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ।
ಧರೆಯ ಬಾಳ್ಗದರಿನೇಂ? -ಮಂಕುತಿಮ್ಮ॥
ಸತ್ತು ಮರಳಿ ತೋರುವರಿಲ್ಲ. ಪುನರ್ಜನ್ಮವನು ನಿರಾಕರಿಸುವ ಹಾಗೂ ಕರ್ಮ ಸಿದ್ಧಾಂತವನ್ನು ತಳ್ಳಿ ಹಾಕಿ, ಮುಕ್ತ ಭಯರಹಿತ ಸಮಾಜವನ್ನು ಕಟ್ಟಿದ್ದು ಶರಣ ಚಿಂತನೆ. ಅಲ್ಲಮ ಅಂತಹ ಚಿಂತನೆಗಳ ಮುಂಚೂಣಿಯಲ್ಲಿದ್ದ ನಾಯಕ. ದುರಭಿಮಾನವನ್ನು ಹೊತ್ತು ಅಘಟಿತವಾದ ಸಂಗತಿಗಳನ್ನು ಘಟಿತವಾಗುವದೆಂದು ತಾರಾ ಬಲ, ಜ್ಯೋತಿಷ್ಯ, ಕುಂಡಲಿನಿ ಮಂತ್ರ ಮುಂತಾದ ಸಾಧನಗಳಿಂದ ಸುಳ್ಳು ಹೇಳುವ ಮನುಜರನ್ನು ತರಾಟೆಗೆ ತೆಗೆದುಕೊಳ್ಳುವ ಅಲ್ಲಮನ ಪ್ರಶ್ನೆ ಈ ನಿಸರ್ಗದತ್ತವಾದ ಸಹಜವಾದ ದೇಹವನ್ನು ಹಿಡಿದು ಸುಳ್ಳು ಹೇಳುವ ಪ್ರಾಪಂಚಿಕರನ್ನು ಏನೆನ್ನಬೇಕು ಎಂದು.
ಪದ ಪ್ರಯೋಗಾರ್ಥ:
ಅಘಟಿತ ಘಟಿತ. ಘಟಿಸಲಾಗದ್ದನ್ನು ಘಟಿಸುವಂತೆ ಮಾಡುವುದು. ಅಸಂಭವವನ್ನು ಸಂಭವಿಸುವುದು. ಅಸಾಧ್ಯವಾದುದನ್ನು ಸಾಧ್ಯಗೊಳಿಸುವುದು. ಇವೆಲ್ಲಾ ಮನುಷ್ಯ ಪ್ರಯತ್ನಗಳು. ಇವುಗಳಲ್ಲಿ ಮನುಷ್ಯ ಸಫಲನಾದದ್ದು ಉಂಟು, ವಿಫಲನಾದದ್ದು ಉಂಟು. ಅಘಟಿತ ಘಟಿತವ ಮಾಡಿ ಸಫಲನಾದ ಮನುಷ್ಯ ದುರಭಿಮಾನಿಯಾದ. ಅದನ್ನೇ ಅಲ್ಲಮ ಹೇಳಿದ್ದು. “ದುರಭಿಮಾನವ ಹೊತ್ತು
ಅಘಟಿತ ಘಟಿತವ ನುಡಿವಿರಿ”. ಘಟಿತ, ಅಘಟಿತ ಅನನ್ಯವಾದ ಕನ್ನಡ ಪದಗಳು.
ಗುಹೇಶ್ವರನನ್ನೇ ಗುರಿಯಾಗಿಸಿ ಅವನನ್ನೇ ಉದ್ದೇಶಿಸಿ ಅಘಟಿತ ಘಟಿತನೇ ಎಂದು ಅಲ್ಲಮ ಬರೆದ ಒಂದು ಚಿಕ್ಕ ಸುಂದರ ವಚನವಿದೆ. “ಅಘಟಿತ ಘಟಿತನೆ, ವಿಪರೀತ ಚರಿತ್ರನೆ, ಸಾವರ ಕೈಯಲ್ಲಿ ಪೂಜೆಗೊಂಬರೆ ಲಿಂಗಯ್ಯಾ? ಸಾವರ ನೋವರ ಕೈಯಲ್ಲಿ ಪೂಜೆಗೊಂಬುದು ಲಜ್ಜೆ ಕಾಣಾ, ಗುಹೇಶ್ವರಾ”. ಅಘಟಿತವನ್ನು ಘಟಿಸುವ ಸಾಮರ್ಥ್ಯವುಳ್ಳವನು, ವಿಪರೀತ ಚರಿತ್ರೆಯ ಅಸಾಧಾರಣ ವ್ಯಕ್ತಿತ್ವವುಳ್ಳವನು ಸಾಯುವ, ನೋವಲ್ಲಿ ನರಳುವ ನರಮನುಷ್ಯರಿಂದ ಪೂಜೆಗೊಂಡು ಪ್ರಸನ್ನನಾಗುವುದೇ? ನಿನಗೆ ನಾಚಿಕೆ ಇಲ್ಲವೇ ಎಂದು ಅಲ್ಲಮ ಗುಹೇಶ್ವರನನ್ನು ಮೂದಲಿಸುವ ಪ್ರಸಂಗ ಇಲ್ಲಿದೆ. ಅಘಟಿತ ಘಟಿತ ಕನ್ನಡ ಭಾಷಾ ಬಳಕೆಯಲ್ಲಿ ಬಹಳ ಅನನ್ಯ ಪದಪ್ರಯೋಗ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.