ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಕಾಡುಗಿಚ್ಚಿನ ಕೈಯಲ್ಲಿ ಕರಡ
ಅಂಗದಲ್ಲಿ ಮಾಡುವ ಸುಖ
ಲಿಂಗಕ್ಕದು ಭೂಷಣವಾಯಿತ್ತು.
ಕಾಡುಗಿಚ್ಚಿನ ಕೈಯಲ್ಲಿ ಕರಡವ ಕೊಯಿಸುವಂತೆ
ಹಿಂದೆ ಮೆದೆಯಿಲ್ಲ, ಮುಂದೆ ಹುಲ್ಲಿಲ್ಲ.
ಅಂಗಲಿಂಗವೆಂಬನ್ನಕ್ಕರ ಫಲದಾಯಕ; ಲಿಂಗೈಕ್ಯವದು ಬೇರೆ ಗುಹೇಶ್ವರಾ.
ವಚನಾರ್ಥ:
ಭಕ್ತಿಯಿಂದ ಮಾಡುವ ಲಿಂಗಾರ್ಚನೆ ಅಗ್ನಿ ಇದ್ದಂತೆ. ಅದು ಭಕ್ತನ ಅಂತರಂಗದೊಳಗಿನ ಸಂಚಿತ ಕರ್ಮಗಳನ್ನು ಕಾಡುಗಿಚ್ಚಿನಲ್ಲಿ ಸಿಕ್ಕ ಕರಡವನ್ನು ಸುಡುವಂತೆ ಸುಟ್ಟುಹಾಕುತ್ತದೆ.
ಈ ವಚನದಲ್ಲಿ ಅಂಗ ಮತ್ತು ಲಿಂಗ ಎಂಬ ಎರಡು ಅಂಶಗಳು ಅಡಗಿವೆ. ಅಂಗ ಅಂದರೆ ಭಕ್ತ, ಲಿಂಗ ಅಂದರೆ ಶರಣ. ಭಕ್ತನು ಲಿಂಗವನ್ನು ಪೂಜಿಸುತ್ತಾನೆ. ಅವನಲ್ಲಿ ತಾನು ಭಕ್ತ ಎಂಬ ಭಾವವಿದೆ. ಶರಣನು ಪ್ರಾಣವನ್ನೇ ಲಿಂಗವೆಂದು ಆರಾಧಿಸುತ್ತಾನೆ. ಆರಾಧನೆಯ ಪ್ರಕ್ರಿಯೆಯಲ್ಲಿಯೇ ಆ ಲಿಂಗದೊಂದಿಗೆ ಬೆರೆತು ಹೋಗುತ್ತಾನೆ. ಈ ಕಾರಣಕ್ಕಾಗಿಯೇ ಭಕ್ತನ ಅರ್ಚನೆ ಫಲದಾಯಕ. ಶರಣನ ಅರ್ಚನೆ ಫಲರಹಿತ. ಲಿಂಗಾರ್ಚನೆಯಿಂದ ಭಕ್ತನಿಗೆ ಕರ್ಮಗಳೆಲ್ಲ ಕಳೆದು ಹೋಗುತ್ತವೆ. ಶರಣನಲ್ಲಿ ತನು, ಮನ, ಧನಗಳ ಭಾವವೇ ಇಲ್ಲದಿರುವುದರಿಂದ ಭಿನ್ನವಾದ ಫಲ ಅವನಿಗಿಲ್ಲ. ಏಕೆಂದರೆ ಶರಣನದು ಲಿಂಗೈಕ್ಯ ಸ್ಥಿತಿ. ಭಕ್ತನ ಲಿಂಗಾರ್ಚನೆಗೆ ಫಲವಿದೆ, ಪ್ರಸಾದ ರೂಪದಲ್ಲಿ. ಆದರೆ ಶರಣನ ಪ್ರಾಣಲಿಂಗಾರ್ಚನೆ ಅದು ಫಲವಿಲ್ಲದ್ದು.
ಪದ ಪ್ರಯೋಗಾರ್ಥ:
ಕಾಡುಗಿಚ್ಚಿನಲ್ಲಿ ಕರಡವನು ಕೊಯ್ಯಿಸ ಹೋದರೆ ಹಿಂದೆ ಕೊಯ್ದು ಸಂಗ್ರಹಿಸಿಟ್ಟ ಮೆದೆಯೂ ಉಳಿಯುವುದಿಲ್ಲ. ಮುಂದೆ ಕೊಯ್ಯಬೇಕಾದ ಹುಲ್ಲೂ ಉಳಿಯುವುದಿಲ್ಲ. ಒಂದು ಕ್ಷಣದಲ್ಲಿ ಕಾಡಿನ ಹುಲ್ಲೆಲ್ಲಾ ಭಸ್ಮವಾಗಿ ಹೋಗುತ್ತದೆ. ಇದು ಸಾಮಾನ್ಯವಾಗಿ ಮಲೆನಾಡಿನ ಭಾಗದ ಹೊಲಗದ್ದೆಗಳಲ್ಲಿ ಇಂದಿಗೂ ಕಂಡು ಬರುವ ದೃಶ್ಯ. ಬೇಸಿಗೆಯ ಬಿಸಿಲಿನಲ್ಲಿ ಒಣಗಿ ನಿಂತಿರುವ ಗದ್ದೆ ಬದಿಯ ಕರಡ ಎಂದು ಕರೆಯಲಾಗುವ ಹುಲ್ಲಿಗೆ ಅಕಸ್ಮಾತ್ತಾಗಿ ಕಾಡುಗಿಚ್ಚಿನ ಬೆಂಕಿ ತಗುಲಿದರೆ ಕ್ಷಣ ಮಾತ್ರದಲ್ಲಿ ಬೆಂಕಿ ಎಲ್ಲೆಲ್ಲೂ ಹಬ್ಬಿ ಇಡೀ ಪ್ರದೇಶದ ಹುಲ್ಲನ್ನು ದಹಿಸಿಬಿಡುತ್ತದೆ. ಇದಕ್ಕೆ ಯಾವ ಪೆಟ್ರೋಲ್ ಅಥವಾ ಸೀಮೆಎಣ್ಣೆ ಸುರಿಯಬೇಕಿಲ್ಲ. ದಹನದ ವೇಗ ಅಂತಹ ಪ್ರಮಾಣದಲ್ಲಿರುತ್ತದೆ. “ಕಾಡುಗಿಚ್ಚಿನ ಕೈಯಲ್ಲಿ ಕರಡವ ಕೊಯಿಸುವಂತೆ” ಎಂಬುದು ಬಹಳ ಅನನ್ಯವಾದ ನಾಲ್ಕು ಪದಗಳುಳ್ಳ ‘ಕ’ ಅಕ್ಷರ ಆಧಾರಿತ ಪದ ಪ್ರಯೋಗದ ಉದಾಹರಣೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.