ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಮಾಯದ ಮಂಜು
ಮಾಮರದೊಳಗೊಂದು
ಮಾಯದ ಮಂಜು ಕವಿದಡೆ,
ಹೂ ಮಿಡಿ ಫಲಂಗಳು ಉದುರವಿನ್ನೆಂತೊ? ಮಂಜಿನ ರಸವನುಂಡು
ಫಲ ನಿಮಿರ್ದು ಬೆಳೆದಡೆ,
ಆ ಫಲವ ನಾನು ಮುಟ್ಟೆನು
ಕಾಣಾ ಗುಹೇಶ್ವರಾ
ಪದಾರ್ಥ:
ಮಾಮರ = ಮಾವಿನಮರ
ನಿಮಿರ್ದು = ಹುಲುಸಾಗಿ
ವಚನಾರ್ಥ:
ಮಾವಿನ ಮರದಲ್ಲಿ ಚಿಗುರು, ಹೂ ಶುರುವಾಗುವುದು ಫೆಬ್ರವರಿ ತಿಂಗಳಲ್ಲಿ. ಮುಂದೆ ಮಾವಿನ ಹೂವು ಮಿಡಿಯಾಗಿ, ಮಿಡಿ ಕಾಯಿಯಾಗಿ ಬಲಿತು ಫಲ ಕೊಡುವುದು ಏಪ್ರಿಲ್ ತಿಂಗಳಲ್ಲಿ. ಇದು ನಿಸರ್ಗದ ವಾಡಿಕೆ. ಆದರೆ ಕೆಲವೊಮ್ಮೆ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಮಾಗಿ ಹೆಚ್ಚಾಗಿ ಅಧಿಕವಾಗಿ ಮಂಜು ಸುರಿದು ಮಾವಿನ ಹೂ ಮಿಡಿಗಳು ಉದುರಿ ಮುಂಬರುವ ಮಾವಿನ ಫಲದ ಇಳುವರಿ ಕುಸಿಯುವುದುಂಟು. ಇದು ಕೂಡಾ ನಿಸರ್ಗ ನಿಯಮ. ಇದನ್ನು ಅಲ್ಲಮ ವಚನದಲ್ಲಿ ಸಮರ್ಥವಾಗಿ ಬಿಂಬಿಸಿರುವುದನ್ನು ಕಾಣಬಹುದು. ಮಾಮರ ಅಂದರೆ ಮನುಷ್ಯ ದೇಹ ಮತ್ತು ಮನಸ್ಸು. ಹೂ ಮಿಡಿ ಅಂದರೆ ಆಸೆ ದುಃಖ ಆಕಾಂಕ್ಷೆಗಳು. ಮನುಷ್ಯನಿಗೆ ಈ ಲೋಕ ಹುಟ್ಟಿಸುವ ಮಾಯಾಜಾಲದ ಮಂಜು ಕವಿದಾಗ ಆಸೆ ಆಕಾಂಕ್ಷೆಗಳ ಬೆಂಬತ್ತಿದ ಆತನ ಬದುಕು ಬರಡಾಗುತ್ತದೆ. ಚಿಗುರು ಹೂವು ಮಿಡಿ ಉದುರಿಹೋದ ಮಾಮರದಂತೆ. ಒಂದು ವೇಳೆ ಆ ಮಾಯೆಯನ್ನೂ ಮೆಟ್ಟಿ ನಿಂತು ಆಸೆ ಆಕಾಂಕ್ಷೆಗಳನ್ನು ನೀಗಿಸಿಕೊಳ್ಳುವುದೇ ಬದುಕು ಎಂದು ಬದುಕುವವ ಸ್ವೀಕಾರಾರ್ಹ ವ್ಯಕ್ತಿಯಲ್ಲ ಎನ್ನುವುದು ಅಲ್ಲಮನ ಅಂಬೋಣ. ಶರಣನದು ಮಾಯೆಯ ಮಂಜಿನ ರಸವನುಂಡು ಬದುಕುವ ವ್ಯಕ್ತಿತ್ವವಲ್ಲ.
ಪದ ಪ್ರಯೋಗಾರ್ಥ:
ಮಾಯದ ಮಂಜು. ಮತ್ತದೇ ಅನನ್ಯ ಪದ ಪ್ರಯೋಗ. ಮಡಿಕೇರಿಲೀ ಮಂಜು ಅಂತ ಜಿಪಿ ರಾಜರತ್ನಂ ಅಂದಂತೆ, ಮಾಮರ ಮಾಯ ಮಂಜು ಮಂಜಿನ ರಸ ಇವೆಲ್ಲಾ ಅತ್ಯಂತ ರಸಭರಿತ ಪದಗಳಾಗಿ ವಚನದಲ್ಲಿ ಮಿಳಿತವಾಗಿವೆ. ಅಲ್ಲಮನ ವಚನದ ಒಳದನಿಯನ್ನೇ ಒಳಗೊಂಡಿರುವ ಬೇಂದ್ರೆ ಕವನ ಹೀಗಿದೆ.
ಕವನದ ಶೀರ್ಷಿಕೆ: “ಹೂ – ಊoಹೂ”
ಕೂಹು ಕೂಹು ಕೂಹು
ಮೈತುಂಬ ಮಾವು ಹೂ ಹೂ
ಒಳಹೊರಗು ಹೂತೇವೆ ನಾವೂ
ನೀವೂ ಕೂಹೂ
ತುಟಿಗೆ ತುಟಿಗೆ ಮುತ್ತನೊತ್ತಿ
ಜೇನ್ನುಡಿಯ ಬೀಜ ಬಿತ್ತಿ
ಮಧುಚಂದ್ರನ ಸ್ವಪ್ನವನೆತ್ತಿ
ಸುಳಿದಾಡುತ್ತಿತ್ತು ಸುತ್ತೂ
ತುತ್ತೂ ತುತ್ತೂ ತುತ್ತೂ
ಬರಿ ಮುತ್ತೇ ಮುತ್ತೇ ಮತ್ತೂ
ಬಾವೂ ಬಾವೂ ಬಾವೂ
ಮೈತುಂಬಾ ಉರಿಯ ಕಾವೂ
ಮಾವಾಯಿತು ಯಾವುದೊ ಬೇವು
ಅದೆ ಇದ್ದರು ನಾವೂ ನೀವೂ
ಬಾಳಾಗಿದೆ ಬದುಕಿನ ಸಾವು
ಥೂ ಥೂ ಥೂ ಥೂ
ಹುಳುಹುಳುಕು ತೂತು ಮಾತೂ
ಓಹೋ ಹೋ ಏನೋ ನೋವು
ಕುಹೂ
ಬುಸುಗುಡುತಿವೆ ಸುತ್ತೂ ಮುತ್ತೂ | ಹಾವೂ
ಅಣಗಿಸುತಿವೆ ಒಣಗಿದ ಹೂವೂ
ಎಲ್ಲಿರುವುದು ಆಗಿನ ಹೂಹೂ
ಊಂಹೂ ಊಂಹೂ ಊಂಹೂ
ಮೈ ತುಂಬ ಹೂ ಬಿಟ್ಟು ಕೋಗಿಲೆಯ ಇಂಚರಕೆ ಕಾರಣವಾದ ಮಾವು ಜೇನುಗಳ ಮುತ್ತು ಮಧುಚಂದ್ರದ ಮಾಯೆಯ ಮಂಜಿಗೆ ಉದುರಿ ಮಾವಾಗಬೇಕಾಗಿದ್ದು ಒಣಗಿ ಬೇವಾಗಿ ಹೋಗುವ ಪರಿಯನ್ನು ಬೇಂದ್ರೆ ಹೇಳಿದ್ದು ಅಲ್ಲಮನ “ಮಾಯೆಯ ಮಂಜು” ಪದಪ್ರಯೋಗಕ್ಕೆ ಸಮನಾದದ್ದು!
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.